ಡಾನ್ ಮುತ್ತಪ್ಪ ರೈ 2ನೇ ಪತ್ನಿ ಅಮೆರಿಕಕ್ಕೆ ಎಸ್ಕೇಪ್​​ – ವಿದೇಶದಿಂದಲೇ ಜಾಮೀನಿಗೆ ಅರ್ಜಿ ಸಲ್ಲಿಸಿದ ಅನುರಾಧ!

ಬೆಂಗಳೂರು : ಭೂಗತ ಲೋಕದ ಮಾಜಿ ಡಾನ್ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಮೇಲಿನ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಡದಿ ಪೊಲೀಸ್ ಠಾಣೆಯಲ್ಲಿ ಮುತ್ತಪ್ಪ ರೈ 2ನೇ ಪತ್ನಿ ಅನುರಾಧ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.

ರಿಕ್ಕಿ ರೈ ಅವರ ಕಾರು ಚಾಲಕ ಜಿ. ಬಸವರಾಜು ನೀಡಿದ ದೂರಿನ ಮೇರೆಗೆ ಮುತ್ತಪ್ಪ ರೈಗೆ ಆಪ್ತವಾಗಿದ್ದ ರಾಕೇಶ್ ಮಲ್ಲಿ, ರೈ ಅವರ ಎರಡನೇ ಪತ್ನಿ ಅನುರಾಧ, ನಿತೇಶ್ ಎಸ್ಟೇಟ್ ಮಾಲೀಕರಾದ ನಿತೇಶ್ ಶೆಟ್ಟಿ, ವೈದ್ಯನಾಥನ್ ಹಾಗೂ ಸಹಚರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೆಲ್ಲದರ ಮಧ್ಯೆ ಬಿಡದಿ ಪೊಲೀಸ್ ಠಾಣೆಯಲ್ಲಿ ಅಧಿಕಾರಿಗಳು ಬೀಡುಬಿಟ್ಟಿದ್ದಾರೆ. ಚಾಲಕ ಬಸವರಾಜ್ ಹಾಗು ಗನ್ ಮ್ಯಾನ್ ರಾಜ್ ಪಾಲ್ ರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಮುತ್ತಪ್ಪ ರೈ ನಿವಾಸದ ಸಿಸಿ ಕ್ಯಾಮರ ಡಿವಿಆರ್ ವಶಪಡಿಸಿಕೊಂಡಿರುವ ಪೊಲೀಸರು ಮನೆಯಲ್ಲಿರುವ ಕೆಲಸಗಾರರನ್ನು ಒಬ್ಬೊಬ್ಬರನ್ನೇ ವಿಚಾರಣೆ ನಡೆಸುತ್ತಿದ್ದಾರೆ.

ಮುತ್ತಪ್ಪ ರೈ 2ನೇ ಪತ್ನಿ ಅನುರಾಧ ವಿದೇಶಕ್ಕೆ ಪರಾರಿ : ಇನ್ನು ಈ ಪ್ರಕರಣದಲ್ಲಿ A2 ಆರೋಪಿಯಾಗಿರುವ ಮುತ್ತಪ್ಪ ರೈ ಎರಡನೇ ಪತ್ನಿ ಅನುರಾಧ ಏಪ್ರಿಲ್ 14 ರಂದೇ ವಿದೇಶಕ್ಕೆ ತೆರಳಿದ್ದಾರೆಂದು ತಿಳಿದುಬಂದಿದೆ. ಅನುರಾಧ ಬಳಸುತ್ತಿದ್ದ ಸಿಮ್ ಅಡ್ರೆಸ್ ಹುಡುಕಿ ನೋಟೀಸ್ ನೀಡಲು ಪೊಲೀಸರು ತೆರಳಿದ್ದರು. ಆದರೆ ಸಿಮ್ ಅಡ್ರೆಸ್ ಇರುವ ಮನೆಯನ್ನು ಅನುರಾಧ ಮಾರಾಟ ಮಾಡಿದ್ದಾರೆ. ಅಮೆರಿಕ ಮೂಲದ ವ್ಯಕ್ತಿಗೆ ಮನೆ ಮಾರಾಟ ಮಾಡಿದ್ದು, ಈ ಮನೆ ಬೆಂಗಳೂರಿನ ಕೊಡಿಗೆಹಳ್ಳಿಯಲ್ಲಿದೆ. ಹೀಗಾಗಿ ಮೊದಲೇ ಪ್ಲಾನ್ ಮಾಡಿ ಅನುರಾಧ ಮನೆ ಮಾರಾಟ ಮಾಡಿದ್ರಾ ಎಂಬ ಅನುಮಾನ ಮೂಡಿದೆ. ಏಪ್ರಿಲ್ 14ರ ರಾತ್ರಿ ಕೆಂಪೇಗೌಡ  ವಿಮಾನ ನಿಲ್ದಾಣದಲ್ಲಿ ಅನುರಾಧ ಬಳಸುತ್ತಿದ್ದ ಮೊಬೈಲ್ ಕೊನೆ ಲೊಕೇಶನ್ ಕೂಡ ತೋರಿಸುತ್ತಿದೆ.

ಇದೀಗ ಪ್ರಕರಣದ ಎಫ್ಐಆರ್ ಸಂಬಂಧ ವಿದೇಶದಲ್ಲಿರುವ ಅನುರಾಧ, ಅಲ್ಲಿಂದಲೇ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ತಮ್ಮ ವಕೀಲರ ಮೂಲಕ  ಹೈಕೋರ್ಟ್ ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿಕೆ ಮಾಡಿದ್ದಾರೆ. ಪ್ರಕರಣದ ಎ1 ಆರೋಪಿ ರಾಕೇಶ್ ಮಲ್ಲಿ ಮುಂಬೈನಲ್ಲಿರುವ ಶಂಕೆ ವ್ಯಕ್ತವಾಗಿದೆ. ಎ3 ಆರೋಪಿ ನಿತೀಶ್ ಶೆಟ್ಟಿ, ಎ4 ಆರೋಪಿ ವೈದ್ಯನಾಥನ್ ಇಂದು ವಕೀಲರ ಮೂಲಕ ವಿಚಾರಣೆಗೆ ಹಾಜರಾಗೋ ಸಾಧ್ಯತೆ ಇದೆ.

ತನಿಖೆಗೆ ಸಿಸಿಬಿ ಪೊಲೀಸರ ಎಂಟ್ರಿ : ರಿಕ್ಕಿ ರೈ ಮೇಲಿನ ಶೂಟೌಟ್ ಪ್ರಕರಣ ಪೊಲೀಸರ ಪಾಲಿಗೆ ಕಗ್ಗಂಟಾಗಿರುವ ಕಾರಣ ಸಿಸಿಬಿ ಪೊಲೀಸರು ಎಂಟ್ರಿ ಕೊಟ್ಟಿದ್ದಾರೆ. ಈ ದಾಳಿ ಹಿಂದೆ ಭೂಗತ ಲೋಕದ ನಂಟಿರುವ ಶಂಕೆ ವ್ಯಕ್ತವಾಗಿರುವುದರಿಂದ ಅದರ ಆಯಾಮದಲ್ಲಿ ಸಿಸಿಬಿ ಪೊಲೀಸರು ತನಿಖೆ ಮುಂದುವರೆಸಿದ್ದು, ಗೌಪ್ಯ ಮಾಹಿತಿ ಕಲೆ ಹಾಕುತ್ತಿದ್ದಾರೆ. ಆರೋಪಿ ಪತ್ತೆಯಾದ ಬಳಿಕ ಮೊದಲು ತಾವು ವಶಕ್ಕೆ ಪಡೆದು ಆನಂತರ ರಾಮನಗರ ಪೊಲೀಸರಿಗೆ ಸಿಸಿಬಿ ಪೊಲೀಸರು ಒಪ್ಪಿಸಲಿದ್ದಾರೆ.

ಇದನ್ನೂ ಓದಿ : ಹೇಮಂತ್ ರಾವ್ ನಿರ್ಮಾಣದ ಸುರುಳಿ ಕಿರುಚಿತ್ರ ರಿಲೀಸ್.. ಮನಮುಟ್ಟುವ ಕಥೆ ಹೇಳಿದ ನಿರ್ದೇಶಕ ಮನು ಅನುರಾಮ್!

Btv Kannada
Author: Btv Kannada

Read More