ಬೆಂಗಳೂರು : ರಾಜ್ಯದ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಭೀಕರವಾಗಿ ಹತ್ಯೆಯಾಗಿದ್ದಾರೆ. ಪತ್ನಿ ಪಲ್ಲವಿಯೇ ಓಂ ಪ್ರಕಾಶ್ ಅವರನ್ನು ಬರ್ಬರವಾಗಿ ಕೊಲೆ ಮಾಡಿದ್ದು, ಈ ಘಟನೆಯಿಂದ ಸದ್ಯ ಇಡೀ ಬೆಂಗಳೂರು ಬೆಚ್ಚಿ ಬಿದ್ದಿದೆ. ಈಗಾಗಲೇ ಓಂ ಪ್ರಕಾಶ್ ಪತ್ನಿ ಪಲ್ಲವಿ ಹಾಗೂ ಮಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಪ್ರಾಥಮಿಕ ವಿಚಾರಣೆ ವೇಳೆ ಬಹಳಷ್ಟು ಸ್ಫೋಟಕ ವಿಚಾರಗಳು ಹೊರ ಬಿದ್ದಿವೆ. ಹತ್ಯೆ ಮಾಡಿದ ಬಳಿಕ ಓಂ ಪ್ರಕಾಶ್ ಪತ್ನಿ ಪಲ್ಲವಿ, ಮತ್ತೋರ್ವ ನಿವೃತ್ತ ಪೊಲೀಸ್ ಅಧಿಕಾರಿ ಪತ್ನಿಗೆ ಕಾಲ್ ಮಾಡಿ, ‘I have Finished monster’ ಅಂತ ಕೊಲೆ ಮಾಡಿರುವ ವಿಚಾರ ತಿಳಿಸಿದ್ದಾರೆ.
ಆಸ್ತಿ ವಿಚಾರಕ್ಕೆ ನಡಿತಾ ಕೊಲೆ? ಓಂ ಪ್ರಕಾಶ್ ಅವರನ್ನು ಕೊಲೆ ಮಾಡಲು ಕಾರಣಗಳೇನು? ಯಾವ ಕಾರಣಕ್ಕಾಗಿ ಕೊಲೆ ಮಾಡಲಾಗಿದೆ? ಎಂಬುವುದರ ಬಗ್ಗೆ ಪೊಲೀಸರು ತೀತ್ರ ತನಿಖೆ ನಡೆಸುತ್ತಿದ್ದಾರೆ. ಈ ನಡುವೆ ಆಸ್ತಿ ವಿಚಾರಕ್ಕೆ ಕೊಲೆಯಾಗಿದೆ ಎಂಬ ಅನುಮಾನವೂ ವ್ಯಕ್ತವಾಗಿದೆ. ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಅವರು ದಾಂಡೇಲಿಯಲ್ಲಿ ಆಸ್ತಿ ಹೊಂದಿದ್ದರು. ಈ ಆಸ್ತಿಯನ್ನು ಓಂ ಪ್ರಕಾಶ್ ಅವರು ತಮ್ಮ ತಂಗಿಯ ಹೆಸರಿಗೆ ಮಾಡಿದ್ದರು. ತಂಗಿ ಹೆಸರಿನಲ್ಲಿ ಆಸ್ತಿ ಮಾಡಿದ್ದಕ್ಕೆ ಹಲವು ದಿನಗಳಿಂದ ಓಂ ಪ್ರಕಾಶ್ ಮತ್ತು ಅವರ ಪತ್ನಿ ಪಲ್ಲವಿ ನಡುವೆ ಗಲಾಟೆ ನಡೆಯುತ್ತಿತ್ತು. ಇನ್ನು, ತಂಗಿ ವಿಚಾರವಾಗಿ ಮಾತನಾಡಬೇಡ ಅಂತ ಪತ್ನಿ ಪಲ್ಲವಿ ಅವರಿಗೆ ಓಂಪ್ರಕಾಶ್ ವಾರ್ನ್ ಮಾಡಿದ್ದರಂತೆ.
ಈ ವಿಚಾರಕ್ಕೆ ಓಂ ಪ್ರಕಾಶ್ ಅವರು 5 ದಿನದ ಹಿಂದೆ ಮನೆ ಬಿಟ್ಟು ಹೋಗಿದ್ದರು ಎನ್ನಲಾಗಿದೆ. ಆ ಬಳಿಕ ಪತ್ನಿ ಪಲ್ಲವಿ ಪ್ಲಾನ್ ಮಾಡಿ ಓಂ ಪ್ರಕಾಶ್ರನ್ನು ಮನೆಗೆ ವಾಪಸ್ ಕರೆಸಿದ್ದರು. ನಿನ್ನೆ ಏಕಾಏಕಿ ಕೈ ಕಾಲು-ಕಟ್ಟಿ ಚಾಕುವಿನಿಂದ ಇರಿದು ಪತಿ ಓಂ ಪ್ರಕಾಶ್ರನ್ನು ಕೊಲೆ ಮಾಡಲಾಗಿದೆ. ಮುಖಕ್ಕೆ, ಎದೆಗೆ 22-24 ಬಾರಿ ಇರಿದು ಪಲ್ಲವಿ ಕೊಂದು ಹಾಕಿದ್ದಾರೆ. ಸದ್ಯ ಮನೆಯಲ್ಲಿ ಕೊಲೆಗೆ ಬಳಸಿದ್ದ ಚಾಕು, 2 ಎಣ್ಣೆ ಬಾಟಲ್ಗಳನ್ನು ರಿಕವರಿ ಮಾಡಲಾಗಿದೆ.
ಇನ್ನು ಓಂ ಪ್ರಕಾಶ್ ಅವರಿಗೆ ಸೇರಿದ ಎರಡು ಮನೆ ಬೆಂಗಳೂರಿನಲ್ಲಿ ಇವೆ. ಕಾವೇರಿ ಜಂಕ್ಷನ್ನ ಪ್ರೆಸ್ಟೀಜ್ ಅಪಾರ್ಟ್ಮೆಂಟ್ನಲ್ಲಿ ಫ್ಲಾಟ್ ಇದೆ. ಹೆಚ್.ಎಸ್.ಆರ್ ಲೇಔಟ್ನ ಐಪಿಎಸ್ ಕ್ವಾಟ್ರಸ್ನಲ್ಲಿ ಮನೆ ಇದೆ. ಮನೆಯಲ್ಲಿ ಗಲಾಟೆ ಆದಾಗ ಓಂ ಪ್ರಕಾಶ್ ಅವರು ಪ್ರೆಸ್ಟೀಜ್ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದರು ಎಂದು ಮಾಹಿತಿ ದೊರೆತಿದೆ.
ಮೂರು ದಿನಗಳ ಹಿಂದೆ IPS ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ಪತ್ನಿ ಪಲ್ಲವಿಯವರು, “ನನ್ನ ಪತಿ ನನಗೆ, ಮಗಳಿಗೆ ತುಂಬಾ ಚಿತ್ರಹಿಂಸೆ ಕೊಡುತ್ತಿದ್ದಾರೆ. ಮನೆಯಲ್ಲಿ ನನ್ನ ಪತಿ ಗನ್ ಹಿಡಿದುಕೊಂಡು ಓಡಾಡುತ್ತಿದ್ದಾರೆ. ಶೂಟ್ ಮಾಡಿ ಕೊಲೆ ಮಾಡುತ್ತೇನೆ ಎಂದು ಭಯಪಡಿಸುತ್ತಿದ್ದಾರೆ. ಹೀಗಾಗಿ, ಪತಿ ವಿರುದ್ಧ ಸುಮೊಟೋ ಕೇಸ್ ದಾಖಲಿಸುವಂತೆ” ಮೆಸೇಜ್ ಕೂಡ ಮಾಡಿದ್ದರಂತೆ.
ತನಿಖೆಯಲ್ಲಿ ಸ್ಫೋಟಕ ವಿಚಾರ ಬಯಲಿಗೆ : ಮನೆಯಲ್ಲಿ ಗನ್ ಹಿಡಿದು ಓಡಾಡುತ್ತಿದ್ದರು. ಮನೆಯಲ್ಲಿದ್ರು ಪಿಸ್ತೂಲ್ನ್ನ ಸದಾಕಾಲ ಜೊತೆಯಲ್ಲಿ ಇಟ್ಟುಕೊಳ್ಳುತ್ತಿದ್ರು. ಸಣ್ಣಪುಟ್ಟ ಜಗಳವಾದರೂ ಗನ್ ತೋರಿಸಿ ಶೂಟ್ ಮಾಡೋದಾಗಿ ಹೆದರಿಸ್ತಿದ್ರು. ಕಳೆದ ಒಂದು ವಾರದಿಂದ ಮನೆಯಲ್ಲಿ ಜಗಳ ನಡೆಯುತ್ತಿತ್ತು. ಪದೇ ಪದೆ ಗನ್ ತಂದು ನನಗೆ ಮತ್ತು ನನ್ನ ಮಗಳಿಗೆ ಶೂಟ್ ಮಾಡೋದಾಗಿ ಬೆದರಿಕೆ ಹಾಕುತ್ತಿದ್ರು. ಬೆಳಗ್ಗೆಯಿಂದ ಬೇರೆ ಬೇರೆ ವಿಚಾರಕ್ಕೆ ಮನೆಯಲ್ಲಿ ಜಗಳ ಶುರುವಾಗಿತ್ತು. ಮಧ್ಯಾಹ್ನ ಜಗಳ ವಿಕೋಪಕ್ಕೆ ಹೋಯ್ತು. ಅವರೇ ಮೊದಲು ಹಲ್ಲೆಗೆ ಮುಂದಾದ್ರು. ನಮ್ಮನ್ನೇ ಕೊಲೆ ಮಾಡಲು ಓಂ ಪ್ರಕಾಶ್ ಯತ್ನ ನಡೆಸಿದ್ರು. ಗನ್ ತೋರಿಸಿ ಶೂಟ್ ಮಾಡೋದಾಗಿ ಬೆದರಿಕೆ ಹಾಕಿದ್ರು. ಈ ವೇಳೆ ನಮ್ಮನ್ನ ಉಳಿಸಿಕೊಳ್ಳಲು ಹೋರಾಟ ಮಾಡಿದ್ವಿ. ಆತ್ಮರಕ್ಷಣೆಗೆ ಚಾಕು ಇರಿದಿದ್ದೇನೆ ಅಂತಾ ಓಂ ಪ್ರಕಾಶ್ ಪತ್ನಿ ಪೊಲೀಸ್ ತನಿಖೆ ವೇಳೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಇಂದು ಓಂ ಪ್ರಕಾಶ್ ಮೃತದೇಹದ ಪೋಸ್ಟ್ಮಾರ್ಟಂ : ಇನ್ನು ಸೈಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಕೆಲವೇ ಕ್ಷಣಗಳಲ್ಲಿ ಓಂ ಪ್ರಕಾಶ್ ಮೃತದೇಹದ ಪೋಸ್ಟ್ಮಾರ್ಟಂ ನಡೆಯಲಿದೆ. ಪೋಸ್ಟ್ ಮಾರ್ಟಂಗೂ ಮುನ್ನ ಮೃತದೇಹವನ್ನು FSL ಅಧಿಕಾರಿಗಳು ಪರಿಶೀಲಿಸಿದ್ದು, ದೇಹದ ಕೆಲ ಭಾಗಗಳಲ್ಲಿ ಚಾಕುವಿನಿಂದ ಇರಿದು, ತಲೆಯ ಹಿಂಭಾಗ ಬಲವಾದ ಆಯುಧದಿಂದ ಹೊಡೆದಿರುವುದು ಪತ್ತೆಯಾಗಿದೆ.
ಇನ್ನು ಈಗಾಗಲೇ ಕೊಲೆ ಸಂಬಂಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಓಂ ಪ್ರಕಾಶ್ ಪುತ್ರ ಕಾರ್ತೀಕೇಶ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಲಾಗಿದೆ. ಪೊಲೀಸರು 9 ಗಂಟೆಗೆ ಮರಣೋತ್ತರ ಪರೀಕ್ಷೆಗೆ ರಿಕ್ವೆಸ್ಟ್ ನೀಡಲಿದ್ದು, ಓಂ ಪ್ರಕಾಶ್ ಅಂತಿಮ ದರ್ಶನಕ್ಕೆ ಸೇಂಟ್ ಜಾನ್ಸ್ ಆಸ್ಪತ್ರೆಗೆ ಹಿರಿಯ ಪೊಲೀಸ್ ಅಧಿಕಾರಿಗಳು, ನಿವೃತ್ತ ಅಧಿಕಾರಿಗಳು ಆಗಮಿಸುವ ಸಾಧ್ಯತೆಯಿದೆ.
ಇದನ್ನೂ ಓದಿ : ಸಚಿವ ಹೆಚ್.ಸಿ.ಮಹದೇವಪ್ಪ ಹುಟ್ಟುಹಬ್ಬಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಸ್ಪೆಷಲ್ ವಿಶ್!
