ಕೊನೆಗೂ ಬ್ರಾಹ್ಮಣರಲ್ಲಿ ಕಿಚ್ಚು ಹಚ್ಚಿದ್ದ ‘ಜನಿವಾರ್‌’ಗೆ 4 ತಲೆದಂಡ – ಕಾಲೇಜಿನ ಪ್ರಾಚಾರ್ಯ, ಗುಮಾಸ್ತ ವಜಾ.. ಇಬ್ಬರು ಹೋಂ ಗಾರ್ಡ್‌ ಸಸ್ಪೆಂಡ್!

ರಾಜ್ಯಾದ್ಯಂತ ಬ್ರಾಹ್ಮಣ ಸಮುದಾಯದಲ್ಲಿ ಕಿಚ್ಚು ಹಚ್ಚಿದ್ದ ‘ಜನಿವಾರ್‌’ ಪ್ರಕರಣ ಸಂಬಂಧ ರಾಜ್ಯ ಸರ್ಕಾರ ನಾಲ್ವರ ಮೇಲೆ ಕ್ರಮ ಕೈಗೊಂಡಿದೆ. ಸಿಇಟಿ ಪರೀಕ್ಷೆಯಲ್ಲಿ ಜನಿವಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರಕರಣದಲ್ಲಿ ಬೀದರ್‌ನಲ್ಲಿ ಕಾಲೇಜು ಪ್ರಾಚಾರ್ಯ ಮತ್ತು ಗುಮಾಸ್ತರನ್ನು ವಜಾಗೊಳಿಸಲಾಗಿದೆ. ಶಿವಮೊಗ್ಗದಲ್ಲಿ ಇಬ್ಬರು ಹೋಂ ಗಾರ್ಡ್‌ಗಳನ್ನು ಅಮಾನತುಗೊಳಿಸಲಾಗಿದೆ. ಈ ಘಟನೆಗಳು ರಾಜ್ಯಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದವು.

ರಾಜ್ಯವಷ್ಟೇ ಅಲ್ಲದೆ ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾದ ಸಿಇಟಿ ಪರೀಕ್ಷೆ ವೇಳೆ ಜನಿವಾರಕ್ಕೆ ಆಕ್ಷೇಪ ಪ್ರಕರಣ ಕೊನೆಗೂ ಒಂದು ಹಂತದಲ್ಲಿ ತಾರ್ಕಿಕ ಅಂತ್ಯಕ್ಕೆ ಬಂದಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಿಕೆ ಆರಂಭವಾಗಿದೆ.

ಬೀದರ್‌ನ ಸಾಯಿಸ್ಫೂರ್ತಿ ಕಾಲೇಜಿನ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಜನಿವಾರ ತೆಗೆಯಲೊಪ್ಪದ ವಿದ್ಯಾರ್ಥಿ ಸುಚಿವೃತ ಕುಲಕರ್ಣಿಗೆ ಪ್ರವೇಶ ನಿರಾಕರಣೆ ಮಾಡಲಾಗಿತ್ತು, ಇನ್ನೊಂದೆಡೆ ಶಿವಮೊಗ್ಗದ ಆದಿಚುಂಚನಗಿರಿ ಶಾಲೆಯಲ್ಲಿ ಪರೀಕ್ಷಾರ್ಥಿಯಿಂದ ಜನಿವಾರ ತೆಗೆಸಿ ಕರ್ತವ್ಯಲೋಪ ಎಸಗಲಾಗಿತ್ತು. ಇದರ ವಿರುದ್ಧ ಬ್ರಾಹ್ಮಣ, ಹಿಂದೂ ಸಂಘಟನೆಗಳು, ಸ್ವಾಮೀಜಿಗಳು, ರಾಜಕೀಯ ನಾಯಕರು ಸಿಡಿದೆದ್ದು ರಾಜ್ಯ ಸರ್ಕಾರದ ವಿರುದ್ಧ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು. ಇಬ್ಬರು ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.

ಪ್ರಕರಣ ಗಂಭೀರತೆ ಪಡೆದ ಕಾರಣ ಬೀದರ್‌ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅ‍ವರು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಅದರಂತೆ ತನಿಖಾ ತಂಡ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರಲ್ಲದೆ, ಘಟನೆ ನಡೆಸಿದ್ದ ಸಾಯಿಸ್ಫೂರ್ತಿ ಶಿಕ್ಷಣ ಸಂಸ್ಥೆಗೆ ನೋಟಿಸ್‌ ಜಾರಿಗೊಳಿಸಿ ಪ್ರಾಚಾರ್ಯ ಹಾಗೂ ಗುಮಾಸ್ತನ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿತ್ತು. ಬಳಿಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ ಪಾಟೀಲ್‌ ಹಾಗೂ ಎಸ್‌ಡಿಸಿ ಸತೀಶ ಪವಾರ್‌ ಅವರನ್ನು ಸೇವೆಯಿಂದ ವಜಾಗೊಳಿಸಿ ಶನಿವಾರ ಆದೇಶ ಹೊರಡಿಸಿದೆ.

ಇನ್ನು ವಂಚಿತ ವಿದ್ಯಾರ್ಥಿಗೆ ಮರು ಪರೀಕ್ಷೆಗೆ ವ್ಯವಸ್ಥೆ ಮಾಡುವ ಕುರಿತಂತೆ ರಾಜ್ಯ ಸರ್ಕಾರವೇ ಶೀಘ್ರ ತೀರ್ಮಾನ ಕೈಗೊಳ್ಳಲಿದೆ. ಕೊನೆಗೂ ಬ್ರಾಹ್ಮಣರಲ್ಲಿ ಕಿಚ್ಚು ಹಚ್ಚಿದ್ದ ‘ಜನಿವಾರ್‌’ ಪ್ರಕರಣದಲ್ಲಿ ನಾಲ್ವರ ವಿರುದ್ಧ ಸರ್ಕಾರ ಕ್ರಮ ಕೈಗೊಂಡಿರುವುದು ತುಸು ಬ್ರಾಹ್ಮಣರಲ್ಲಿ ಸಮಾಧಾನ ತಂದಿದೆ.

ಇದನ್ನೂ ಓದಿ :ಬಿಜೆಪಿ ಶಾಸಕ ಮುನಿರತ್ನಗೆ ತಪ್ಪದ ಸಂಕಷ್ಟ.. ಪ್ರಾಸಿಕ್ಯೂಷನ್​​ಗೆ ಸ್ಪೀಕರ್​ ಖಾದರ್​ ಗ್ರೀನ್​ ಸಿಗ್ನಲ್​!

Btv Kannada
Author: Btv Kannada

Read More

Read More