ಮೈಸೂರು : ಕೊಡಗಿನಲ್ಲಿ ಕೊಲೆಯಾಗಿದ್ದಾರೆ ಎಂದು ಸುದ್ದಿಯಾಗಿದ್ದ ಮಹಿಳೆ ಜೀವಂತವಾಗಿ ಪತ್ತೆಯಾಗಿದ್ದು ಆರೋಪಿ ನಿರಪರಾಧಿಯಾಗಿ, ಪೊಲೀಸರೇ ಆರೋಪಿಗಳಾಗಿದ್ದಾರೆ. 5ನೇ ಜಿಲ್ಲಾ ಹೆಚ್ಚುವರಿ & ಸೆಷನ್ಸ್ ಕೋರ್ಟ್ಲ್ಲಿ ಪೊಲೀಸರೇ ವಿಚಾರಣೆ ಎದುರಿಸಿದ್ದಾರೆ. ಮಹಿಳೆ ಮಲ್ಲಿಗೆ ಪತ್ತೆ ಪ್ರಕರಣದ ವಿಚಾರಣೆ ವೇಳೆ ನ್ಯಾ. ಗುರುರಾಜ್ ಸೋಮಕ್ಕಳವರ್ ಅವರು ಪೊಲೀಸರ ಕರ್ತವ್ಯ ಲೋಪಕ್ಕೆ ಅಸಮಾಧಾನ ಹೊರ ಹಾಕಿದ್ರು. 2 ಗಂಟೆ ಕಾಲ ವಾದ ಆಲಿಸಿ ಏ. 23ಕ್ಕೆ ಆದೇಶ ಕಾಯ್ದಿರಿಸಿ ವಿಚಾರಣೆ ಮುಂದೂಡಿದರು.
ಕೊಲೆ ಆರೋಪಿ ಸುರೇಶ್ ನಿರಪರಾಧಿಯಾಗಿದ್ದು, ಆತನನ್ನು ಗೌರವಯುತವಾಗಿ ಬಿಡುಗಡೆ ಮಾಡಬೇಕು. ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ಸೂಕ್ತ ಪರಿಹಾರ ದೊರಕಿಸಬೇಕು ಎಂದು ಸರ್ಕಾರಿ ಅಭಿಯೋಜಕ ಬಿ.ಇ.ಯೋಗೇಶ್ವರ್ ಅವರು ಕೋರಿಕೆ ಸಲ್ಲಿಸಿದ್ರು.
ತನಿಖಾಧಿಕಾರಿಗೆ ತರಾಟೆ : ಮಹಿಳೆ ಮಲ್ಲಿಗೆ ಪತ್ತೆಯಾದ ಬಳಿಕ ಪ್ರಕರಣದ ಬಗ್ಗೆ ವಿವರಣೆ ನೀಡುವಂತೆ ಎಸ್ಪಿ ಎನ್.ವಿಷ್ಣುವರ್ಧನ್ ಅವರಿಗೆ ನ್ಯಾಯಾಲಯ ಸೂಚಿಸಿತ್ತು. ಅವರ ಪರ ಬೈಲಕುಪ್ಪೆ ಸಿಪಿಐ ದೀಪಕ್ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದರು.
‘ವರದಿಯಲ್ಲಿ ತನಿಖಾಧಿಕಾರಿ ತಾವು ಹಿಂದೆ ನ್ಯಾಯಾಲಯಕ್ಕೆ ಸಲ್ಲಿಸಿದ್ದ ದೋಷಾರೋಪ ಪಟ್ಟಿ ಸಮರ್ಥಿಸಿಕೊಂಡಿದ್ದರು. ಈ ಬಗ್ಗೆ ನ್ಯಾಯಾಧೀಶರು ತನಿಖಾಧಿಕಾರಿಗಳಾದ ಅಂದಿನ ಬೈಲಕುಪ್ಪೆ ಸರ್ಕಲ್ ಇನ್ಸ್ಪೆಕ್ಟರ್ ಬಿ.ಜಿ.ಪ್ರಕಾಶ್, ಬೆಟ್ಟದಪುರ ಪಿಎಸ್ಐ ಮಹೇಶ್ ಕುಮಾರ್, ಎಸ್ಐ ಪ್ರಕಾಶ್ ಎತ್ತಿಮನಿ ಅವರನ್ನು ತರಾಟೆಗೆ ತೆಗೆದುಕೊಂಡರು’ ಎಂದು ಆರೋಪಿ ಪರ ವಕೀಲ ಪಾಂಡು ಪೂಜಾರಿ ತಿಳಿಸಿದರು.
ನೀವು ಸಲ್ಲಿಸಿರುವ ದೋಷಾರೋಪ ಪಟ್ಟಿ ಸುಳ್ಳೆಂದು ಸಾಬೀತಾಗಿದೆ. ಮಲ್ಲಿಗೆ ಕಾಣೆಯಾಗಿದ್ದಾಳೆ ಎಂದು ದೂರು ದಾಖಲಾದ 25 ದಿನದಲ್ಲಿ ಕೊಳೆತ ಮೃತದೇಹ ಪತ್ತೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದೀರಿ, ಅಷ್ಟು ಬೇಗ ದೇಹ ಕೊಳೆತು ಹೋಗಲು ಹೇಗೆ ಸಾಧ್ಯ. ಅಷ್ಟು ಶೀಘ್ರ ತನಿಖೆ ಮುಗಿಸುವ ಒತ್ತಡ ಏನಿತ್ತು ಎಂದು ನ್ಯಾಯಾಧೀಶರು ಅಸಹನೆ ವ್ಯಕ್ತಪಡಿಸಿದರು.
ಯಾವುದೋ ಕೊಲೆ ಪ್ರಕರಣ ಮುಚ್ಚಿ ಹಾಕಲು ಪೊಲೀಸರು ಹಾಡಿ ಜನರನ್ನು ಗುರಿ ಮಾಡಿದ್ದಾರೆ. ಅಧಿಕಾರಿಗಳ ವಿರುದ್ಧ ಸುಮೊಟೊ ಪ್ರಕರಣ ದಾಖಲಿಸಬೇಕು ಎಂದು ಮನವಿ ಮಾಡಿದ್ರು.
ಇನ್ನು 4 ವರ್ಷದ ಹಿಂದೆ ಮಲ್ಲಿಗೆಯನ್ನು ಪತಿ ಸುರೇಶ್ ಕೊಲೆ ಮಾಡಿದ್ದಾನೆ ಎಂದು ಬೆಟ್ಟದಪುರ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಜಿಲ್ಲಾ ಕೋರ್ಟ್ ಆರೋಪಿಗೆ ಜೈಲು ಶಿಕ್ಷೆ ವಿಧಿಸಿತ್ತು. ಏ.1ರಂದು ಮಲ್ಲಿಗೆ ತನ್ನ ಪ್ರಿಯತಮ ಗಣೇಶ್ನೊಂದಿಗೆ ಪತ್ತೆ ಬಳಿಕ ಟ್ವಿಸ್ಟ್ ಸಿಕ್ಕಿದೆ.
ಇದನ್ನೂ ಓದಿ : ಈಶ್ವರಪ್ಪ ಕೊರಳಿಗೆ ಮತ್ತೆ ಅಕ್ರಮ ಆಸ್ತಿ ಉರುಳು – 13 ವರ್ಷಗಳ ಬಳಿಕ ಆಸ್ತಿ ತನಿಖೆಗೆ ಕೋರ್ಟ್ ಆದೇಶ!
