ಮಾರ್ಚ್​ ತ್ರೈಮಾಸಿಕದಲ್ಲಿ HDFC ಬ್ಯಾಂಕ್​ಗೆ ಭರ್ಜರಿ ಲಾಭ – ಶೇ 6.7 ಹೆಚ್ಚಳ.. ನಿವ್ವಳ ಲಾಭ 17,616 ಕೋಟಿ.. ಪ್ರತಿ ಷೇರಿಗೆ 22 ರೂ. ಲಾಭ!

ಬೆಂಗಳೂರು : ಭಾರತದ ಅತಿದೊಡ್ಡ ಖಾಸಗಿ ವಲಯದ ಬ್ಯಾಂಕ್ HDFC ಬ್ಯಾಂಕ್ ಏಪ್ರಿಲ್ 19ರಂದು ಶನಿವಾರ ಮಾರ್ಚ್ ತ್ರೈಮಾಸಿಕ ಫಲಿತಾಂಶವನ್ನು ಪ್ರಕಟಿಸಿದೆ. 2024-25ರ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಬ್ಯಾಂಕ್‌ ನಿವ್ವಳ ಲಾಭವು ವರ್ಷದಿಂದ ವರ್ಷಕ್ಕೆ 6.7 ಪರ್ಸೆಂಟ್ ಹೆಚ್ಚಾಗಿದ್ದು, ಏಕೀಕೃತ ನಿವ್ವಳ ಲಾಭ 17,616 ಕೋಟಿ ರೂಪಾಯಿ ದಾಖಲಾಗಿದೆ. ಈ ಮೂಲಕ ಬ್ಯಾಂಕ್‌ನ ಗಳಿಕೆಯು ಮಾರುಕಟ್ಟೆ ನಿರೀಕ್ಷೆಯನ್ನು ಮೀರಿಸಿದೆ.

ಮಾರುಕಟ್ಟೆ ನಿರೀಕ್ಷೆಯಂತೆ HDFC ಬ್ಯಾಂಕ್‌ ಮಾರ್ಚ್‌ ತ್ರೈಮಾಸಿಕ 17,072 ಕೋಟಿ ರೂಪಾಯಿ ನಿವ್ವಳ ಲಾಭ ದಾಖಲಿಸಬಹುದು ಎಂದು ಅಂದಾಜಿಸಲಾಗಿತ್ತು. ಆದ್ರೆ ಬ್ಯಾಂಕ್‌ 17,616 ಕೋಟಿ ರೂಪಾಯಿ ಲಾಭವನ್ನು ಕಂಡಿದೆ. HDFC ಬ್ಯಾಂಕ್ ಆಡಳಿತ ಮಂಡಳಿಯು 1 ರೂಪಾಯಿ ಮುಖಬೆಲೆಯ ಪ್ರತಿ ಈಕ್ವಿಟಿ ಷೇರಿಗೆ 22 ರೂಪಾಯಿ ಲಾಭಾಂಶವನ್ನು ಘೋಷಣೆ ಮಾಡಿದೆ. ಇಂದು ಕಳೆದ ಹಣಕಾಸು ವರ್ಷದ ಅಂತಿಮ ಡಿವಿಡೆಂಡ್ ಆಗಿದ್ದು, ಈ ಡಿವಿಡೆಂಡ್ ರೆಕಾರ್ಡ್ ದಿನಾಂಕವನ್ನು 27 ಜೂನ್‌ 2025ರಂದು ನಿಗದಿಪಡಿಸಿದೆ.

HDFC ಬ್ಯಾಂಕ್ ಆಸ್ತಿ ಗುಣಮಟ್ಟ : ಮಾರ್ಚ್‌ 31, 2025ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಬ್ಯಾಂಕ್‌ನ ಒಟ್ಟು ಅನುತ್ಪಾದಕ ಆಸ್ತಿಯು (NPA) ರೇಶಿಯೋ 1.33 ಪರ್ಸೆಂಟ್‌ನಷ್ಟು ದಾಖಲಾಗಿದೆ. ಈ ಮೂಲಕ ಕಳೆದ ಡಿಸೆಂಬರ್‌ 31, 2024ರ 1.42 ಪರ್ಸೆಂಟ್‌ಗಿಂತ ಇಳಿಕೆಗೊಂಡಿದೆ. ಆದಾಗ್ಯೂ ವರ್ಷದಿಂದ ವರ್ಷಕ್ಕೆ 1.24 ಪರ್ಸೆಂಟ್‌ನಷ್ಟು ವರದಿ ಮಾಡಿದೆ.

ಅದೇ ರೀತಿಯಲ್ಲಿ ನಿವ್ವಳ ಎನ್‌ಪಿಎ ರೇಶಿಯೋ 0.43 ಪರ್ಸೆಂಟ್‌ನಷ್ಟು ಮಾರ್ಚ್‌ ಕ್ವಾರ್ಟರ್‌ನಲ್ಲಿ ವರದಿಯಾಗಿದೆ. ಇದು ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ 0.46 ಪರ್ಸೆಂಟ್‌ಗಿಂತ ಕಡಿಮೆಯಾಗಿದ್ದು, ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ 0.33 ಪರ್ಸೆಂಟ್‌ಗಿಮತ ಹೆಚ್ಚಿದೆ. ಇದನ್ನು ಅಂಕಿ ಸಂಖ್ಯೆವಾರು ನೋಡಿದ್ರೆ ಒಟ್ಟು ಎನ್‌ಪಿಎ ಕಳೆದ ಡಿಸೆಂಬರ್ ತ್ರೈಮಾಸಿಕದಲ್ಲಿ 36,018.58 ಕೋಟಿ ರೂಪಾಯಿಗಳಿಂದ ಮಾರ್ಚ್‌ ತ್ರೈಮಾಸಿಕದಲ್ಲಿ 35,222.64 ಕೋಟಿ ರೂಪಾಯಿಗೆ ತಲುಪಿದೆ.

ನಿವ್ವಳ ಬಡ್ಡಿ ಆದಾಯ ಜಿಗಿತ : ಎಚ್‌ಡಿಎಫ್‌ಸಿ ಬ್ಯಾಂಕ್ ನಿವ್ವಳ ಬಡ್ಡಿ ಆದಾಯ (NII) ಮಾರ್ಚ್‌ ತ್ರೈಮಾಸಿಕದಲ್ಲಿ(FY25) 10.3 ಪರ್ಸೆಂಟ್ ಏರಿಕೆಗೊಂಡು 32,070 ಕೋಟಿ ರೂಪಾಯಿ ದಾಖಲಾಗಿದೆ. ಇದು ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ(FY24 Q4) 29,080 ಕೋಟಿ ರೂಪಾಯಿ ನಷ್ಟಿತ್ತು.
HDFC ಬ್ಯಾಂಕ್ ಡೆಪಾಸಿಟ್ ಬೆಳವಣಿಗೆ
ಬ್ಯಾಂಕ್‌ನ ಸರಾಸರಿ ಡೆಪಾಸಿಟ್ ಪ್ರಮಾಣವು 15.8 ಪರ್ಸೆಂಟ್ ಹೆಚ್ಚಾಗಿದ್ದು, ವರ್ಷದಿಂದ ವರ್ಷಕ್ಕೆ 25.28 ಲಕ್ಷ ಕೋಟಿ ರೂಪಾಯಿ ದಾಖಲಾಗಿದೆ (ಜನವರಿ-ಮಾರ್ಚ್‌). ವರ್ಷದ ಹಿಂದೆ ಇದೇ ತ್ರೈಮಾಸಿಕದಲ್ಲಿ ಬ್ಯಾಂಕ್‌ನ ಡೆಪಾಸಿಟ್‌ ಪ್ರಮಾಣವು 21.84 ಲಕ್ಷ ಕೋಟಿ ರೂಪಾಯಿನಷ್ಟಿತ್ತು.

ಇದನ್ನೂ ಓದಿ : ವಕ್ಪ್ ಪ್ರೊಟೆಸ್ಟ್ ವೇಳೆ ಪ್ರತಿಭಟನಾಕಾರರು ಪೊಲೀಸ್ ವಾಹನ ಬಳಸಿಲ್ಲ – ಮಂಗಳೂರು ಕಮಿಷನರ್ ಅನುಪಮ್ ಅಗರ್ವಾಲ್ ಸ್ಪಷ್ಟನೆ!

Btv Kannada
Author: Btv Kannada

Read More