ಬೆಂಗಳೂರು : ರಾಜ್ಯದಲ್ಲಿ ಚರ್ಚೆ ಆಗುತ್ತಿರುವ ಜಾತಿ ಗಣತಿ ವರದಿ ಬಗ್ಗೆ ಸ್ಪಷ್ಟ ತೀರ್ಮಾನಕ್ಕೆ ಬರುವಲ್ಲಿ ನಿನ್ನೆಯ ವಿಶೇಷ ಸಂಪುಟ ಸಭೆ ವಿಫಲವಾಗಿದೆ. ಪ್ರಬಲ ಸಮುದಾಯಗಳ ನಾಯಕರ ತೀವ್ರ ವಿರೋಧ ಹಿನ್ನೆಲೆ ಸಂಪುಟ ಸಭೆ ಅಪೂರ್ಣವಾಗಿದೆ. ಮೇ 2ಕ್ಕೆ ಜಾತಿ ಗಣತಿ ಏಕೈಕ ಅಜೆಂಡಾ ಸಭೆ ಮುಂದೂಡಿಕೆ ಮಾಡಲಾಗಿದೆ.
ಇನ್ನು ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯಗಳ ಸಚಿವರು ಜೋರಾದ ದನಿಯಲ್ಲಿ ಮಾತನಾಡಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಜಾತಿ ವರ್ಗೀಕರಣ ವಿಷಯ ಸಂಬಂಧ ಡಿಕೆ ಶಿವಕುಮಾರ್, ಜೋರಾದ ದನಿಯಲ್ಲೇ ಅಸಮಾಧಾನ ವ್ಯಕ್ತಪಡಿಸಿದ್ದು, ನಮ್ಮಲ್ಲೂ ಬಡವರಿಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಕೆಲವು ನಿಗದಿತ ಜಾತಿಗಳನ್ನು ಮಾತ್ರ ಕೆಟಗರಿ 1ಕ್ಕೆ ಸೇರ್ಪಡೆ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಡಿಕೆ ಶಿವಕುಮಾರ್, ಒಕ್ಕಲಿಗರಲ್ಲಿ ಬಡವರಿಲ್ವಾ? ಲಿಂಗಾಯತರಲ್ಲಿ ಬಡವರಿಲ್ವಾ ಎಂದು ಏರು ಧ್ವನಿಯಲ್ಲಿ ಪ್ರಶ್ನಿಸಿದ್ದಾರೆ. ಇದೇ ವೇಳೆ, ಡಿಕೆ ಶಿವಕುಮಾರ್ ಮಾತಿಗೆ ಲಿಂಗಾಯತ ಸಚಿವರು ದನಿಗೂಡಿಸಿದ್ದಾರೆ. ನಮ್ಮವರೂ ಕೇವಲ ಒಂದೇ ದನ ಕಟ್ಟಿಕೊಂಡು ಜೀವನ ನಡೆಸುವವರಿದ್ದಾರೆ, ಅವರೆಲ್ಲ ಶ್ರೀಮಂತರಲ್ಲ ಎಂದಿದ್ದಾರೆ.
ಇದನ್ನೂ ಓದಿ : ಹುಳಿಮಾವು ಕೋದಂಡರಾಮಸ್ವಾಮಿ ದೇವಸ್ಥಾನದ ಜಾತ್ರಾ ಉತ್ಸವ ಸಂದರ್ಭದಲ್ಲಿ ಹೆಲಿಕ್ಯಾಪ್ಟರ್ ಮೂಲಕ ಪುಷ್ಪಾರ್ಚನೆಗೆ ಹೈಕೋರ್ಟ್ ಸಮ್ಮತಿ!
