ವಿಜಯಪುರ : ಕಾಂಗ್ರೆಸ್ ಸರ್ಕಾರದ ಎರಡು ವರ್ಷಗಳ ಆಡಳಿತ ವೈಫಲ್ಯ ಖಂಡಿಸಿ, ಬೆಲೆ ಏರಿಕೆ ಮತ್ತು ಮುಸ್ಲಿಮರಿಗೆ ಗುತ್ತಿಗೆಯಲ್ಲಿ ಶೇ4ರಷ್ಟು ಮೀಸಲಾತಿ ನೀಡಿರುವುದನ್ನು ವಿರೋಧಿಸಿ ನಾಳೆ (ಏಪ್ರಿಲ್ 17) ಸಂಜೆ 4 ಗಂಟೆಗೆ ವಿಜಯಪುರದಲ್ಲಿ ಬಿಜೆಪಿಯಿಂದ ಜನಾಕ್ರೋಶ ಯಾತ್ರೆ ಆಯೋಜಿಸಲಾಗಿದೆ. ಈ ಜನಾಕ್ರೋಶ ಯಾತ್ರೆ ಮೂಲಕ ಬಿಜೆಪಿಯಿಂದ ಶಾಸಕ ಯತ್ನಾಳ್ ಅವರು ಉಚ್ಚಾಟನೆಯಾದ ಬಳಿಕ ಮೊದಲ ಬಾರಿಗೆ ವಿಜಯಪುರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಎಂಟ್ರಿ ಕೊಡುತ್ತಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಪರಿಷತ್ ಸದಸ್ಯ ಸಿಟಿ ರವಿ, ಚಲವಾದಿ ನಾರಯಾಣಸ್ವಾಮಿ, ಗೋವಿಂದ ಕಾರಜೋಳ ಹಾಗೂ ಇತರ ನಾಯಕರು ಜನಾಕ್ರೋಶ ಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ನಗರದ ಶಿವಾಜಿ ಚೌಕ್ನಿಂದ ಗಾಂಧಿಚೌಕ್, ಬಸವೇಶ್ವರ ಸರ್ಕಲ್, ಅಂಬೇಡ್ಕರ್ ವೃತ್ತ, ಕನಕದಾಸ ಸರ್ಕಲ್ ಮಾರ್ಗವಾಗಿ ದರಬಾರ್ ಹೈಸ್ಕೂಲ್ ಮೈದಾನದವರೆಗೆ ಜನಾಕ್ರೋಶ ಯಾತ್ರೆ ಸಾಗಲಿದೆ. ನಂತರ ದರಬಾರ್ ಹೈಸ್ಕೂಲ್ ಮೈದಾನದಲ್ಲಿ ಬಹಿರಂಗ ಸಮಾವೇಶ ನಡೆಯಲಿದ್ದು, ಸಮಾವೇಶದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಕೇಸರಿ ಕಲಿಗಳು ವಾಗ್ದಾಳಿ ನಡೆಸಲಿದ್ದಾರೆ.
ಪ್ರತಿಭಟನಾ ಮೆರವಣಿಗೆಯಲ್ಲಿ ಹಾಗೂ ಬಹಿರಂಗ ಸಮಾವೇಶದಲ್ಲಿ ಉಚ್ಚಾಟಿತ ಶಾಸಕ ಯತ್ನಾಳ ಪರ ಜಯಘೋಷ, ಫೋಟೋ ಪ್ರದರ್ಶನ ನಡೆಯೋ ಸಾಧ್ಯತೆಯಿದ್ದು, ವಿಜಯೇಂದ್ರ ವಿರುದ್ದವೂ ಘೋಷಣೆ ಕೂಗುವ ಸಾಧ್ಯತೆಯಿದೆ. ಈ ಹಿನ್ನೆಲೆ ಪೊಲೀಸರು ಮುಂಜಾಗೃತಾ ಕ್ರಮಕ್ಕೆ ಮುಂದಾಗಿದ್ದು, ಮೆರವಣಿಗೆ ನಡೆಯೋ ಮಾರ್ಗ ಹಾಗೂ ಸಮಾವೇಶ ಸ್ಥಳದಲ್ಲಿ ಹೆಚ್ಚಿನ ಪೊಲೀಸರ ನಿಯೋಜನೆಗೆ ಇಲಾಖೆ ನಿರ್ಧರಿಸಿದೆ.
ಇದನ್ನೂ ಓದಿ : ಇಂದು-ನಾಳೆ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆ.. ಬೆಂಗಳೂರಿನಲ್ಲೂ ಅಬ್ಬರಿಸಲಿದ್ದಾನೆ ವರುಣ!
