ಕನ್ನಡ ಚಿತ್ರರಂಗದಲ್ಲಿ ಪ್ರಸ್ತುತವಾಗಿ ವಿಭಿನ್ನ ಶೀರ್ಷಿಕೆಯ ಸಿನಿಮಾಗಳು ಸದ್ದು ಮಾಡುತ್ತಿದೆ. ಆ ಸಾಲಿನಲ್ಲಿ ‘ಕರಿಕಾಡ’ ಎನ್ನುವ ಹೊಸ ಸಿನಿಮಾವು ಒಂದು. ಬಿಡುಗಡೆಗೂ ಮುನ್ನವೇ ಸಂಚಲನ ಮೂಡಿಸುತ್ತಿರುವ ಈ ಸಿನಿಮಾವು ಇದೀಗ ತೆರೆ ಮೇಲೆ ಬರಲು ಸಜ್ಜಾಗಿದೆ.

ಹೌದು, ಕಾಡ ನಟರಾಜ್ ನಾಯಕನಾಗಿ ಹಾಗೂ ನಿರೀಕ್ಷಾ ಶೆಟ್ಟಿ ನಾಯಕಿಯಾಗಿ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈಗಾಗಲೇ ಸಿನಿಮಾದ ಹಾಡು ಕೇಳಿರುವ ಸಿನಿ ಪ್ರಿಯರು ಇಬ್ಬರ ಆನ್ ಸ್ಕ್ರೀನ್ ಕೆಮಿಸ್ಟ್ರಿಯನ್ನು ಇಷ್ಟ ಪಟ್ಟಿದ್ದಾರೆ. ಹಾಗಾಗಿ ಎರಡು ನಟರ ನಟನೆಯ ಮೇಲೆ ನಿರೀಕ್ಷೆಗಳು ಹೆಚ್ಚಿದೆ.
ಇನ್ನು ಸಿನಿಮಾಗೆ ಗಿಲ್ಲಿ ವೆಂಕಟೇಶ್ ಅವರು ಆಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾವನ್ನು ರಿದ್ದಿ ಎಂಟರ್ಟೈನ್ ಮೆಂಟ್ ಬ್ಯಾನರ್ ಅಡಿಯಲ್ಲಿ , ದೀಪ್ತಿ ದಾಮೋದರ್ ನಿರ್ಮಾಪಿಸಿದ್ದಾರೆ.

ಸದ್ಯಕ್ಕೆ ಸಿನಿಮಾ ರಂಗದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳು ಸದ್ದು ಮಾಡುತ್ತಿದೆ. ಈ ಲಿಸ್ಟ್ ನಲ್ಲಿ ಕರಿಕಾಡವು ಒಂದು. ಕನ್ನಡ ಸೇರಿ ಹಿಂದಿ, ತೆಲುಗು, ತಮಿಳ್ ಮತ್ತು ಮಲಯಾಳಂನಲ್ಲಿ ಫೆಬ್ರವರಿ 6 ರಂದು ತೆರೆ ಕಾಣುತ್ತಿದೆ. ಈಗಾಗಲೇ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಟೀಸರ್ ನೋಡಿದಾಗ ಇದು ಒಂದು ಅಡ್ವೆಂಚರಸ್ ಜೊತೆಗೆ ಪಕ್ಕ ಹಳ್ಳಿ ಸೊಗಡಿನ ಸಿನಿಮಾವೆಂದು ಕಾಣುತ್ತಿದೆ. ಒಂದು ಕಾಡಿನಲ್ಲಿ ನಡೆಯುವ ಕಥೆ. ದ್ವೇಷ, ಪ್ರತಿಕಾರ ಮತ್ತು ಪ್ರೀತಿ ಎಲ್ಲ ಭಾವನೆಗಳ ಮಿಶ್ರಣವೆಂದು ತಿಳಿದು ಬರುತ್ತಿದೆ. ಹಾಗಾಗಿ ಟೀಸರ್ ಸಿನಿಮಾದ ಮೇಲಿನ ಕುತೂಹಲವನ್ನು ದುಪ್ಪಟ್ಟಾಗುವಂತೆ ಮಾಡಿದೆ.
ಸಿನಿಮಾಗೆ ಅತೀಶಯ ಜೈನ್ ಮತ್ತು ಶಶಾಂಕ್ ಶೇಷಗಿರಿ ಸಂಗೀತ ಸಂಯೋಜನೆಯನ್ನು ಮಾಡಿದ್ದು, ಈಗಾಗಲೇ ಬಿಡುಗಡೆಯಾದ ‘ರತುನಿ ರತುನಿ’ ಮತ್ತು ‘ಕಬ್ಬಿನ್ ಜಲ್ಲೆ’ ಎನ್ನುವ ಎರಡು ಹಾಡುಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇನ್ನು ಸಿನಿಮಾದ ಮೂರನೇ ಹಾಡು ‘ನೀ ಯಾರೇ ನನಗೆ ‘ ಜನವರಿ 28ರಂದು ಬಿಡುಗಡೆಯಾಗಲು ಸಜ್ಜಾಗಿದೆ.

ಒಂದು ರೀತಿಯಲ್ಲಿ ಹಲವಾರು ಹೊಸ ಪ್ರತಿಭೆಗಳಿರುವ ಈ ಸಿನಿಮಾವು ಬಿಡುಗಡೆಗು ಮುನ್ನವೇ ಅಬ್ಬರಿಸುತ್ತಿದೆ. ಜೊತೆಗೆ ಸಿನಿಮಾದ ಕಥೆ ಹಾಗೂ ನಟನೆಯ ಬಗ್ಗೆ ಸಿನಿ ಪ್ರಿಯರಲ್ಲಿ ದೊಡ್ಡ ಮಟ್ಟದ ಕುತೂಹಲ ಮೂಡಿದೆ.







