ಬಹುನಿರೀಕ್ಷಿತ ‘ಜನ ನಾಯಕನ್’ ಚಿತ್ರದ ಟ್ರೈಲರ್ ಶನಿವಾರ ಸಂಜೆ ಬಿಡುಗಡೆಯಾಗಿದ್ದು, ಇಡೀ ಇಂಟರ್ನೆಟ್ ಲೋಕದಲ್ಲಿ ಸಂಚಲನ ಮೂಡಿಸಿದೆ. ಬಿಡುಗಡೆಯಾದ ಕೇವಲ 5 ನಿಮಿಷಗಳಲ್ಲಿ 5 ಮಿಲಿಯನ್ಗೂ ಹೆಚ್ಚು ರಿಯಲ್ ಟೈಮ್ ವೀಕ್ಷಣೆಗಳನ್ನು ಪಡೆಯುವ ಮೂಲಕ ಈ ಟ್ರೈಲರ್ ಹೊಸ ಇತಿಹಾಸ ಸೃಷ್ಟಿಸಿದೆ.

2 ನಿಮಿಷ 52 ಸೆಕೆಂಡುಗಳ ಈ ಟ್ರೈಲರ್ ಅದ್ಭುತ ಆಕ್ಷನ್, ರೋಮಾಂಚಕ ಸಂಗೀತ ಮತ್ತು ಭಾವನಾತ್ಮಕ ಸನ್ನಿವೇಶಗಳಿಂದ ಕೂಡಿದೆ. ಪ್ರೇಕ್ಷಕರು ಚಿತ್ರದ ಭರ್ಜರಿ ಮೇಕಿಂಗ್ ಮತ್ತು ವಿಜಯ್ ಅವರ ಸ್ವಾಗ್ಗೆ ಫಿದಾ ಆಗಿದ್ದು, ಇದೊಂದು ಕಂಪ್ಲೀಟ್ ಫ್ಯಾಮಿಲಿ ಎಂಟರ್ಟೈನರ್ ಆಗಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಈ ಚಿತ್ರದಲ್ಲಿ ತಲಪತಿ ವಿಜಯ್ ಅವರೊಂದಿಗೆ ಪೂಜಾ ಹೆಗ್ಡೆ, ಬಾಬಿ ಡಿಯೋಲ್, ಮಮಿತಾ ಬೈಜು, ಗೌತಮ್ ವಾಸುದೇವ್ ಮೆನನ್, ಪ್ರಕಾಶ್ ರಾಜ್, ಪ್ರಿಯಾಮಣಿ ಮತ್ತು ನರೇನ್ ಸೇರಿದಂತೆ ಘಟಾನುಘಟಿ ಕಲಾವಿದರ ದಂಡೇ ಇದೆ. ಎಚ್. ವಿನೋತ್ ನಿರ್ದೇಶನದ ಈ ಚಿತ್ರಕ್ಕೆ ವೆಂಕಟ್ ಕೆ. ನಾರಾಯಣ ಅವರು ಬಂಡವಾಳ ಹೂಡಿದ್ದಾರೆ. ಸತ್ಯನ್ ಸೂರ್ಯನ್ ಅವರ ಛಾಯಾಗ್ರಹಣ ಹಾಗೂ ಪ್ರದೀಪ್ ಇ. ರಾಘವ್ ಅವರ ಸಂಕಲನ ಈ ಚಿತ್ರಕ್ಕಿದೆ.

ನಿರ್ಮಾಪಕ ವೆಂಕಟ್ ಕೆ. ನಾರಾಯಣ (KVN) ಅವರು, “ಮಲೇಷ್ಯಾದಲ್ಲಿ ನಡೆದ ಆಡಿಯೋ ಲಾಂಚ್ಗೆ ಸಿಕ್ಕ ಅಭೂತಪೂರ್ವ ಸ್ಪಂದನೆಯೇ ವಿಜಯ್ ಸರ್ ಮತ್ತು ಅವರ ಅಭಿಮಾನಿಗಳ ನಡುವಿನ ಬಾಂಧವ್ಯಕ್ಕೆ ಸಾಕ್ಷಿ. ಮಲೇಷ್ಯಾ ಬುಕ್ ಆಫ್ ರೆಕಾರ್ಡ್ಸ್ಗೆ ನಮ್ಮ ಚಿತ್ರ ಸೇರ್ಪಡೆಯಾಗಿರುವುದು ಹೆಮ್ಮೆಯ ವಿಷಯ. ಈಗ ಟ್ರೈಲರ್ ಸೃಷ್ಟಿಸಿರುವ ಈ ಅಬ್ಬರವು ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಜನವರಿ 9, 2026 ರಂದು ಈ ಭವ್ಯ ಚಿತ್ರವನ್ನು ವಿಶ್ವದಾದ್ಯಂತ ಪ್ರೇಕ್ಷಕರ ಮುಂದೆ ತರಲು ನಾವು ಉತ್ಸುಕರಾಗಿದ್ದೇವೆ” ಎಂದರು.

‘ಜನ ನಾಯಕನ್’ ಚಿತ್ರವು ಜನವರಿ 9, 2026 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದು ತಲಪತಿ ವಿಜಯ್ ಅವರ ವೃತ್ತಿಜೀವನದ ಕೊನೆಯ ಚಿತ್ರ ಎಂದು ನಂಬಲಾಗಿರುವುದರಿಂದ, ಅಭಿಮಾನಿಗಳಲ್ಲಿ ಈ ಸಿನಿಮಾ ಬಗ್ಗೆ ಭಾವನಾತ್ಮಕ ಸಂಬಂಧ ಹಾಗೂ ಭಾರೀ ಕುತೂಹಲ ಮನೆಮಾಡಿದೆ.
‘ಜನ ನಾಯಕನ್’ ಚಿತ್ರದ ನಿರ್ದೇಶಕರು ಎಚ್. ವಿನೋತ್. ಇವರು ಈ ಹಿಂದೆ ಅಜಿತ್ ಕುಮಾರ್ ಅಭಿನಯದ ‘ವಲಿಮೈ’, ‘ತುನಿವು’ ಮತ್ತು ಕಾರ್ತಿ ನಟನೆಯ ‘ಧೀರನ್ ಅಧಿಗಾರಂ ಒಂಡ್ರು’ ಅಂತಹ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಈಗ ತಲಪತಿ ವಿಜಯ್ ಅವರ ಕೊನೆಯ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿರುವುದು ಸಿನಿಪ್ರಿಯರಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಇದನ್ನೂ ಓದಿ : ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ – 23 SPಗಳಿಗೆ DIGಯಾಗಿ ಬಡ್ತಿ ಜೊತೆ ಟ್ರಾನ್ಸ್ಫರ್!







