ಬಾಗಲಕೋಟೆ : ಮುಧೋಳ ತಾಲೂಕಿನ ಲೋಕಾಪುರ ಸಮೀಪ ಇಂದು ಬಸ್ ಹಾಗೂ ಲಾರಿ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ 12 ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಇಳಕಲ್ನಿಂದ ಲೋಕಾಪುರ ಮಾರ್ಗವಾಗಿ ಬೆಳಗಾವಿಗೆ ತೆರಳುತ್ತಿದ್ದ KSRTC ಬಸ್ ಹಾಗೂ ಬೆಳಗಾವಿಯಿಂದ ಲೋಕಾಪುರ ಕಡೆಗೆ ಬರುತ್ತಿದ್ದ ಲಾರಿ ನಡುವೆ ಈ ಅಪಘಾತ ಸಂಭವಿಸಿದೆ. ಲೋಕಾಪುರ ಸಮೀಪದ ಮುಖ್ಯರಸ್ತೆಯಲ್ಲಿ ಎರಡೂ ವಾಹನಗಳು ಮುಖಾಮುಖಿ ಡಿಕ್ಕಿಯಾಗಿದ್ದು, ಬಸ್ಸಿನ ಮುಂಭಾಗ ಜಖಂಗೊಂಡಿದೆ.

ಅಪಘಾತ ಸಂಭವಿಸಿದ ಕೂಡಲೇ ಸ್ಥಳೀಯರು ರಕ್ಷಣೆಗೆ ಧಾವಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಗಾಯಗೊಂಡ 12 ಜನರನ್ನು ಲೋಕಾಪುರ ಹಾಗೂ ಬಾಗಲಕೋಟೆಯ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಸಿದ್ದಾರ್ಥ್ ಗೋಯಲ್ ಹಾಗೂ ಜಮಖಂಡಿ ಡಿವೈಎಸ್ಪಿ ಜಮೀರ್ ರೋಷನ್, ಮುಧೋಳ ಸಿಪಿಐ ಮಹಾದೇವ ಸಿರಹಟ್ಟಿ ಹಾಗೂ ಲೋಕಾಪುರ ಪಿಎಸ್ಐ ಕಾಡಪ್ಪ ಜಕ್ಕನ್ನವರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : BMTCಯಲ್ಲಿ ಹಣವಿಲ್ಲದಿದ್ದರೂ ಶೋಕಿಗೆ ಕಡ್ಮೆ ಇಲ್ಲ – ಅಧ್ಯಕ್ಷ-ಉಪಾಧ್ಯಕ್ಷರಿಗೆ ಹೊಸ ಕಾರು ಕ್ರೇಜ್!







