ಮನೆಗೆ ನುಗ್ಗಿ, ಕಾರಲ್ಲಿ ಬಾಂಬ್‌ ಇಟ್ಟು ಸ್ಫೋಟಿಸುತ್ತೇವೆ – ಬಾಲಿವುಡ್ ನಟ ಸಲ್ಮಾನ್ ಖಾನ್​​ಗೆ ಮತ್ತೆ ಕೊಲೆ ಬೆದರಿಕೆ!

ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ಗೆ ಮತ್ತೆ ಕೊಲೆ ಬೆದರಿಕೆ ಬಂದಿದ್ದು, ವಿಷಯ ತಿಳಿದು ನಟನ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಮುಂಬೈನ ವರ್ಲಿಯಲ್ಲಿರುವ ಸಾರಿಗೆ ಇಲಾಖೆಯ ವಾಟ್ಸಾಪ್ ಸಂಖ್ಯೆಗೆ ಕಳುಹಿಸಲಾದ ಸಂದೇಶದಲ್ಲಿ ಸಲ್ಮಾನ್ ಖಾನ್ ಅವರ ಮನೆಗೆ ನುಗ್ಗಿ ಅವರನ್ನು ಕೊಲ್ಲುವುದಾಗಿ ಮತ್ತು ಕಾರನ್ನು ಬಾಂಬ್​ನಿಂದ ಸ್ಫೋಟಿಸುವುದಾಗಿ ದುಷ್ಕರ್ಮಿಗಳು ಬೆದರಿಕೆ ಹಾಕಿದ್ದಾರೆ.

ಬೆದರಿಕೆ ಸಂದೇಶ ಕಳುಹಿಸಿದ ದುಷ್ಕರ್ಮಿಗಳು ವಿರುದ್ಧ ವರ್ಲಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಬೆದರಿಕೆಯ ಹೊಣೆಯನ್ನೂ ಯಾರೂ ಹೊತ್ತುಕೊಂಡಿಲ್ಲ. ಸಲ್ಮಾನ್‌ ಖಾನ್‌ ಅವರಾಗಲಿ, ಅವರ ಕುಟುಂಬಸ್ಥರಾಗಲಿ ಯಾವುದೇ ಪ್ರತಿಕ್ರಿಯೆ ಸಹ ನೀಡಿಲ್ಲ. ಬೆದರಿಕೆಯ ಮೂಲ ಮತ್ತು ಸತ್ಯಾಸತ್ಯತೆಯ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಬಾಲಿವುಡ್ ನಟನಿಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್​ನಿಂದ ನೇರ ಮತ್ತು ಪರೋಕ್ಷವಾಗಿ ಹಲವಾರು ಬೆದರಿಕೆಗಳು ಬಂದಿವೆ. 1998ರ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಗ್ಯಾಂಗ್ ಅವರನ್ನು ಗುರಿಯಾಗಿಸಿಕೊಂಡಿದೆ. ಏಕೆಂದರೆ ಈ ಪ್ರಾಣಿ ಬಿಷ್ಣೋಯ್ ಸಮುದಾಯಕ್ಕೆ ಧಾರ್ಮಿಕ ಮಹತ್ವದ್ದಾಗಿದೆ.

ಇನ್ನು 2024ರಲ್ಲಿ, ಖಾನ್‌ಗೆ ಬಿಷ್ಣೋಯ್ ಗ್ಯಾಂಗ್‌ನಿಂದ ಹೊಸ ಬೆದರಿಕೆ ಬಂದಿತ್ತು. ಅವರು ದೇವಸ್ಥಾನಕ್ಕೆ ಭೇಟಿ ನೀಡಿ ಕೃಷ್ಣಮೃಗ ಹತ್ಯೆಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಅಥವಾ 5 ಕೋಟಿ ರೂ. ಪಾವತಿಸಬೇಕು ಎಂದು ಒತ್ತಾಯಿಸಿದ್ದರು. ಅಕ್ಟೋಬರ್ 30ರಂದು, ನಟನಿಗೆ ಮತ್ತೆ ಅಪರಿಚಿತ ವ್ಯಕ್ತಿಯೊಬ್ಬರು 2 ಕೋಟಿ ರೂ. ಸುಲಿಗೆ ನೀಡುವಂತೆ ಒತ್ತಾಯಿಸಿದ್ದರು.

ಇದನ್ನೂ ಓದಿ : ಭಾರತದಿಂದ ಪರಾರಿಯಾಗಿದ್ದ ಭ್ರಷ್ಟ ವಜ್ರೋದ್ಯಮಿ ಮೆಹುಲ್ ಚೋಕ್ಸಿ ಬೆಲ್ಜಿಯಂನಲ್ಲಿ ಬಂಧನ!

Btv Kannada
Author: Btv Kannada

Read More

Read More