ಬಳ್ಳಾರಿ : ಬೆಳ್ಳಂಬೆಳಗ್ಗೆ ಬಳ್ಳಾರಿಯಲ್ಲಿ ಮಾಜಿ ಸಚಿವ ಬಿ. ನಾಗೇಂದ್ರ ಆಪ್ತ ವಿಶ್ವನಾಥ್ ನಿವಾಸದ ಮೇಲೆ CBI ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಬೆಂಗಳೂರಿನಿಂದ ಆಗಮಿಸಿದ 4 ಹಿರಿಯ ಅಧಿಕಾರಿಗಳ ತಂಡವು ಬಳ್ಳಾರಿಯ ಹಳೆ ಬ್ರೂಸ್ಪೇಟೆ ಪೊಲೀಸ್ ಠಾಣೆ ಬಳಿ ಇರುವ ವಿಶ್ವನಾಥ್ ನಿವಾಸದ ಮೇಲೆ ದಾಳಿ ನಡೆಸಿದೆ. ಮನೆಯ ಇಂಚಿಂಚೂ ಜಾಗವನ್ನು ಜಾಲಾಡುತ್ತಿರುವ ಅಧಿಕಾರಿಗಳು, ಮಹತ್ವದ ದಾಖಲೆಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

CBI ತನಿಖೆಯ ವೇಳೆ ಈಗಾಗಲೇ ಹಲವು ಮಹತ್ವದ ಸುಳಿವುಗಳು ಲಭ್ಯವಾಗಿದ್ದು, ಅದರ ಆಧಾರದ ಮೇಲೆ ಈ ದಾಳಿ ನಡೆದಿದ್ದು, ಮನೆಯಲ್ಲಿದ್ದ ಪ್ರಮುಖ ಕಡತ ಹಾಗೂ ಡಿಜಿಟಲ್ ಪುರಾವೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ದಾಳಿಯ ವೇಳೆ ಲಭ್ಯವಾದ ಮಾಹಿತಿಯ ಹಿನ್ನೆಲೆಯಲ್ಲಿ, ಹೆಚ್ಚಿನ ವಿಚಾರಣೆಗಾಗಿ ವಿಶ್ವನಾಥ್ ಅವರನ್ನು ಅಧಿಕಾರಿಗಳು ಪಕ್ಕದಲ್ಲೇ ಇರುವ ಬ್ರೂಸ್ ಪೇಟೆ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಸದ್ಯ ಬ್ರೂಸ್ ಪೇಟೆ ಠಾಣೆಯಲ್ಲಿ ಅಧಿಕಾರಿಗಳು ವಿಶ್ವನಾಥ್ ಅವರನ್ನು ಕೂರಿಸಿಕೊಂಡು ತೀವ್ರ ವಿಚಾರಣೆ ನಡೆಸುತ್ತಿದ್ದು, ಈ ಬೆಳವಣಿಗೆ ಮಾಜಿ ಸಚಿವ ನಾಗೇಂದ್ರ ಆಪ್ತವಲಯದಲ್ಲಿ ಆತಂಕ ಮೂಡಿಸಿದೆ.
ಇದನ್ನೂ ಓದಿ : ‘ರಕ್ಕಸಪುರದೋಳ್’ನಲ್ಲಿ ರಾಜ್ ಬಿ ಶೆಟ್ಟಿ ದರ್ಶನ – ಚಿತ್ರದಲ್ಲಿ ಶೆಟ್ರು ರಕ್ಷಕನೋ.. ರಾಕ್ಷಸನೋ?







