ಬೆಂಗಳೂರು : ಬೆಂಗಳೂರಿನ ಯಲಹಂಕದಲ್ಲಿ ನಡೆದ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ ವಿವಾದ ಜೋರಾದೆ. ನೂರಾರು ಬಡವರ ಮನೆಗಳನ್ನು ನೆಲಸಮಗೊಳಿಸಿದ ಕರ್ನಾಟಕ ಸರ್ಕಾರದ ಕ್ರಮವನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತೀವ್ರವಾಗಿ ಖಂಡಿಸಿದ್ದು, ಇದು ಕಾಂಗ್ರೆಸ್ ಆಡಳಿತದ ಕರ್ನಾಟಕದಲ್ಲಿ ಯುಪಿ ಮಾದರಿಯ ಬುಲ್ಡೋಜರ್ ರಾಜಕಾರಣ ಎಂದು ಟೀಕಿಸಿದ್ದಾರೆ.
ಈ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಸಿಎಂ ಸಿದ್ದರಾಮಯ್ಯ, ಇಂದು ಸಂತ್ರಸ್ತರ ಪುನರ್ವಸತಿ ಕುರಿತು ತುರ್ತು ಸಭೆ ಕರೆದಿದ್ದಾರೆ. ಕೇರಳ ಸಿಎಂ ಹೇಳಿಕೆ ಬಳಿಕ ಕೆ ಸಿ ವೇಣುಗೋಪಾಲ್ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ಸಿಎಂ ಸಿದ್ದರಾಮಯ್ಯ ಗೃಹ ಕಚೇರಿ ಕೃಷ್ಣಾದಲ್ಲಿ ಅಧಿಕಾರಿಗಳ ಸಭೆ ಕರೆದಿದ್ದಾರೆ. ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಕುರಿತು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಸಭೆ ನಡೆಯಲಿದೆ.
ಕಳೆದ ಕೆಲವು ದಿನಗಳ ಹಿಂದೆ ಯಲಹಂಕದ ಕೋಗಿಲು ಬಳಿಯ ಫಕೀರ್ ಕಾಲೋನಿ ಮತ್ತು ವಸೀಮ್ ಲೇಔಟ್ನಲ್ಲಿ GBA ಭರ್ಜರಿ ಕಾರ್ಯಾಚರಣೆ ನಡೆಸಿತ್ತು. ಸುಮಾರು 200ಕ್ಕೂ ಹೆಚ್ಚು ಮನೆಗಳನ್ನು ಅಕ್ರಮ ಒತ್ತುವರಿ ಎಂಬ ಕಾರಣ ನೀಡಿ ನೆಲಸಮಗೊಳಿಸಲಾಗಿತ್ತು. ಇದರಿಂದಾಗಿ ಚಳಿಯ ನಡುವೆಯೇ ನೂರಾರು ಕುಟುಂಬಗಳು, ಮಕ್ಕಳು ಮತ್ತು ವೃದ್ಧರು ಬೀದಿಗೆ ಬಿದ್ದಿದ್ದರು. ಯಾವುದೇ ಮುನ್ಸೂಚನೆ ಅಥವಾ ಪರ್ಯಾಯ ವ್ಯವಸ್ಥೆ ಇಲ್ಲದೆ ನಡೆಸಿದ ಈ ಕಾರ್ಯಾಚರಣೆ ತೀವ್ರ ಆಕ್ರೋಶಕ್ಕೆ ಗುರಿಯಾಗಿತ್ತು.
ಇದನ್ನೂ ಓದಿ : ಗ್ರಾಹಕರ ಹೆಸರಲ್ಲಿ ಕೋಟಿ ಕೋಟಿ ಲೋನ್ ಪಡೆದು ಎಸ್ಕೇಪ್ – ಕೆನರಾ ಬ್ಯಾಂಕ್ ಮ್ಯಾನೇಜರ್ ವಿರುದ್ದ FIR ದಾಖಲು!







