ಹುಬ್ಬಳ್ಳಿ : ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ಐದು ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಿ, ಹತ್ಯೆಗೈದ ಆರೋಪಿ ಬಿಹಾರ ಮೂಲದ ರಕ್ಷಿತ್ ಕಾಂತಿ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ. ಬಾಲಕಿಯನ್ನು ಕೊಲೆ ಮಾಡಿದ ಹಂತಕನನ್ನು ಮಹಿಳಾ ಪಿಎಸ್ಐ ಅನ್ನಪೂರ್ಣ ಎನ್ಕೌಂಟರ್ ಮಾಡಿ ಬಿಸಾಕಿದ್ದಾರೆ. ಅವರನ್ನೀಗ ಹುಬ್ಬಳ್ಳಿಯ ಜನ ಲೇಡಿ ಸಿಂಗಂ ಎಂದು ಹಾಡಿಹೊಗಳುತ್ತಿದ್ದಾರೆ.

ನಗರದಲ್ಲಿ ಭಾನುವಾರ ಬಾಲಕಿಯೊಬ್ಬಳನ್ನು ಬಿಹಾರ ಮೂಲದ ರಕ್ಷಿತ್ ಕಾಂತಿ ಎಂಬಾತ ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಮಾಡಿದ ಘಟನೆ ನಡೆಯುತ್ತಿದ್ದಂತೆ ಇಡೀ ಊರಿಗೆ ಊರೇ ರೊಚ್ಚಿಗೆದ್ದಿತ್ತು. ಸಾರ್ವಜನಿಕರು ಎಲ್ಲರೂ ಜಾತಿ, ಮತ, ಪಂಥಗಳನ್ನೆಲ್ಲ ಬಿಟ್ಟು ಬಾಲಕಿ ಸಾವಿಗೆ ನ್ಯಾಯ ಸಿಗಬೇಕೆಂಬ ಉದ್ದೇಶದಿಂದ ಬೀದಿಗಿಳಿದು ಪ್ರತಿಭಟನೆ ಶುರು ಮಾಡಿದ್ದರು. ಸಾರ್ವಜನಿಕರ ಪ್ರತಿಭಟನೆಯಿಂದ ಕಂಗೆಟ್ಟ ಪೊಲೀಸರ ಮೇಲೆ ಒತ್ತಡ ಹೆಚ್ಚಾಗಿತ್ತು.
ತಕ್ಷಣವೇ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು, ಐದು ಟೀಂ ಮಾಡಿ ಎಲ್ಲರಿಗೂ ‘ಏನೇ ಆಗಲಿ ಇನ್ನೆರಡು ಗಂಟೆಯಲ್ಲಿ ಆರೋಪಿಯನ್ನೇ ಬಂಧಿಸಲೇಬೇಕು’ ಎಂದು ಕಟ್ಟುನಿಟ್ಟಿನ ಆದೇಶ ರವಾನಿಸಿದ್ದರು. ಅದರಲ್ಲಿ ಒಂದು ಟೀಂನಲ್ಲಿ ಪಿಎಸ್ಐ ಅನ್ನಪೂರ್ಣಾ ಕೂಡ ಇದ್ದರು. ಮೂಲತಃ ಬೆಳಗಾವಿ ಜಿಲ್ಲೆಯ ಗೋಕಾಕನವರಾದ ಅನ್ನಪೂರ್ಣ, ಹುಬ್ಬಳ್ಳಿ ಶಹರ ಠಾಣೆ, ಸಿಇಎನ್ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸಿ ಸೈ ಎನಿಸಿಕೊಂಡಿದ್ದರು. ಪ್ರಸ್ತುತ ಅಶೋಕನಗರ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ತನಿಖೆ ಕೈಗೊಂಡ ಪೊಲೀಸರಿಗೆ ಆರೋಪಿ ತಾರಿಹಾಳ ಬ್ರಿಡ್ಜ್ ಬಳಿ ಮನೆಯೊಂದರಲ್ಲಿ ಅಡಗಿ ಕುಳಿತಿದ್ದಾನೆ ಎಂಬ ಮಾಹಿತಿ ಗೊತ್ತಾಗಿದೆ. ಅಡಗಿ ಕುಳಿತಿದ್ದ ಆರೋಪಿಯನ್ನು ಬಂಧಿಸಲು ಆತನ ಮನೆ ಬಳಿ ತೆರಳಿದಾಗ ಆತ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ. ಜತೆಗೆ ಪೊಲೀಸರ ವಾಹನದ ಮೇಲೂ ಕಲ್ಲು ತೂರಿದ್ದಾನೆ. ಇದರಿಂದ ಪಿಎಸ್ಐ ಅನ್ನಪೂರ್ಣ ಸೇರಿದಂತೆ ಮೂವರು ಸಿಬ್ಬಂದಿ ಗಾಯಗೊಂಡಿದ್ದಾರೆ.
ಇನ್ನು ಆರೋಪಿ ರಕ್ಷಿತ್ ಕಾಂತಿಗೆ ಎಚ್ಚರಿಕೆ ಸಂದೇಶ ನೀಡುವ ಉದ್ದೇಶದಿಂದ ಮಹಿಳಾ ಪಿಎಸ್ಐ ಅನ್ನಪೂರ್ಣ ಮೊದಲು ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೂ ಆತನ ದಾಳಿ ಮಾತ್ರ ಮುಂದುವರಿದಿತ್ತು. ಹೀಗಾಗಿ, ಬೆದರದೆ ತಪ್ಪಿಸಿಕೊಳ್ಳಲು ಯತ್ನಿಸಿದ ವೇಳೆ ಆತನ ಕಾಲಿಗೆ ಮೊದಲಿಗೆ ಗುಂಡು ಹಾರಿಸಲಾಗಿದೆ. ಆಗಲೂ ಆತ ತನ್ನ ಪ್ರಯತ್ನ ಮುಂದುವರಿಸಿದ್ದಾನೆ. ಆಗ ಹಾರಿಸಿದ ಗುಂಡು ಆತನ ಬೆನ್ನಿಗೆ ಬಿದ್ದಿದೆ. ಆತನಿಗೆ ಗುಂಡು ಹಾರಿಸದಿದ್ದರೆ ಪೊಲೀಸರ ಮೇಲೆ ಇನ್ನಷ್ಟು ದಾಳಿ ಮಾಡುತ್ತಿದ್ದ. ಹೀಗಾಗಿ, ಆತ್ಮರಕ್ಷಣೆಗಾಗಿ ಪಿಎಸ್ಐ ಅನ್ನಪೂರ್ಣ ಗುಂಡು ಹಾರಿಸಿದ್ದಾರೆ.
ಇದೀಗ ಆತ್ಮರಕ್ಷಣೆಗಾದರೂ ಹಾರಿಸಿರಲಿ ಅಥವಾ ಬೇಕಂತ ಹಾರಿಸಿರಲಿ, ಮಹಿಳಾ ಪಿಎಸ್ಐ ಕೈಗೊಂಡ ಕ್ರಮಕ್ಕೆ ಮಾತ್ರ ಇಡೀ ನಗರದಲ್ಲೇ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅನ್ನಪೂರ್ಣಾ ಹುಬ್ಬಳ್ಳಿಯ ಲೇಡಿ ಸಿಂಗಂ ಆಗಿದ್ದಾರೆ ಎಂಬ ಮಾತು ಇದೀಗ ಎಲ್ಲರ ಬಾಯಲ್ಲೂ ಕೇಳಿಬರುತ್ತಿದೆ. ಆರೋಪಿ ಹಲ್ಲೆಯಿಂದ ಗಾಯಗೊಂಡಿರುವ ಲೇಡಿ ಸಿಂಗಂ ಅನ್ನಪೂರ್ಣ ಸೇರಿದಂತೆ ಇನ್ನಿಬ್ಬರು ಸಿಬ್ಬಂದಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸದ್ಯ ಪಿಎಸ್ಐ ಅನ್ನಪೂರ್ಣ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗಳಾಗುತ್ತಿದ್ದು, ನೆಟ್ಟಿಗರು ಈ ಅಧಿಕಾರಿಯನ್ನು “ಭದ್ರಕಾಳಿ” ಎಂದು ಕೊಂಡಾಡಿದ್ದಾರೆ. ಅನೇಕರು ಆಕೆಯ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದು, ಆರೋಪಿಗೆ ತಕ್ಕ ಶಿಕ್ಷೆ ನೀಡಿದ “ಪಿಎಸ್ಐ ಅನ್ನಪೂರ್ಣ ಅವರಿಗೆ ಧನ್ಯವಾದ” ಎಂದು ಹೇಳಿದ್ದಾರೆ.

ಇದನ್ನೂ ಓದಿ : ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾಗಿ ಎಸ್.ರಘುನಾಥ್ ಆಯ್ಕೆ
