ಬೆಂಗಳೂರು : ಕನ್ನಡ ಚಿತ್ರರಂಗ ಕಂಡ ಅಪರೂಪದ ಕಲಾವಿದ, ಹಾಸ್ಯ ನಟ ಬ್ಯಾಂಕ್ ಜನಾರ್ಧನ್ (76) ಅವರು ನಿಧನರಾಗಿದ್ದಾರೆ. ಮಧ್ಯರಾತ್ರಿ 2.30ರ ಸುಮಾರಿಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಟ ಬ್ಯಾಂಕ್ ಜನಾರ್ಧನ್ ಅವರು ಕೊನೆಯುಸಿರೆಳೆದಿದ್ದಾರೆ.
76 ವರ್ಷದ ಬ್ಯಾಂಕ್ ಜನಾರ್ಧನ್ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಈ ಹಿನ್ನೆಲೆ ಕುಟುಂಬಸ್ಥರು ಅವರುನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದರು. ಇದೀಗ ಚಿಕಿತ್ಸೆ ಫಲಿಸದೆ ಬ್ಯಾಂಕ್ ಜನಾರ್ಧನ್ ಅವರು ನಿಧನರಾಗಿದ್ದಾರೆ. ಇಂದು ಬೆಳಗ್ಗೆ 10 ಗಂಟೆಯ ಬಳಿಕ ನಟ ಬ್ಯಾಂಕ್ ಜನಾರ್ಧನ್ ಅವರ ಮನೆ ಬಳಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. 2023ರ ಸೆಪ್ಟಂಬರ್ 26ರಂದು ಇವರಿಗೆ ಹೃದಯಘಾತವಾಗಿತ್ತು. ನಂತರ ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿದ್ದರು.
ಚಂದನವನದಲ್ಲಿ ಪೋಷಕ ನಟನಾಗಿಯೇ ಗುರುತಿಸಿಕೊಂಡಿದ್ದ ಬ್ಯಾಂಕ್ ಜನಾರ್ಧನ್ ಅವರು, ಸುಮಾರು 800ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು. 1949ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಬ್ಯಾಂಕ್ ಜನಾರ್ಧನ್ 1991ರವರೆಗೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ತದನಂತರ ಬಣ್ಣದ ಲೋಕದಿಂದ ದೂರ ಉಳಿದುಕೊಂಡಿದ್ದರು. ಉಪೇಂದ್ರ ನಿರ್ದೇಶನದ ಶ್, ತರ್ಲೆ ನನ್ ಮಗ, ಬೆಳ್ಳಿಯಪ್ಪ ಬಂಗಾರಪ್ಪ, ಜೀ ಬೂಂಬಾ, ಗಣೇಶ ಸುಬ್ರಮಣ್ಯ, ಕೌರವ ಸೇರಿದಂತೆ 800ಕ್ಕೂ ಅಧಿಕ ಸಿನಿಮಾಗಳಲ್ಲಿ ಜನಾರ್ಧನ್ ನಟಿಸಿದ್ದಾರೆ.
ಹಿರಿತೆರೆ ಜೊತೆ ಕಿರುತೆರೆಯಲ್ಲಿಯೂ ಬ್ಯಾಂಕ್ ಜನಾರ್ಧನ್ ಕೆಲಸ ಮಾಡಿದ್ದಾರೆ. ಪಾಪ ಪಾಂಡು, ಜೋಕಾಲಿ, ರೋಬೋ ಫ್ಯಾಮಿಲಿ, ಮಾಂಗಲ್ಯ ಧಾರಾವಾಹಿಗಳಲ್ಲಿಯೂ ಬ್ಯಾಂಕ್ ಜನಾರ್ಧನ್ ನಟಿಸಿದ್ದರು. 1949ರಲ್ಲಿ ಬೆಂಗಳೂರಿನಲ್ಲಿ ಜನಿಸಿದ್ದ ಬ್ಯಾಂಕ್ ಜನಾರ್ಧನ್ ತಮ್ಮ ವಿದ್ಯಾಭ್ಯಾಸವನ್ನೆಲ್ಲಾ ಬೆಂಗಳೂರಿನಲ್ಲಿಯೇ ಪೂರೈಸಿದ್ದರು. ರಂಗಭೂಮಿ ಕಲಾವಿದರಾಗಿ ದೊಡ್ಡ ಮಟ್ಟದ ಹೆಸರು ಗಳಿಸಿದ್ದ ಅವರು, ಕನ್ನಡದ 60ಕ್ಕೂ ಅಧಿಕ ಚಿತ್ರಗಳು ಹಾಗೂ ಟಿವಿ ಸಿರಿಯಲ್ಗಳಲ್ಲಿ ನಟಿಸಿ ಜನಪ್ರಿಯರಾಗಿದ್ದರು.
ಇದನ್ನೂ ಓದಿ : ಡೆಲ್ಲಿ ಕ್ಯಾಪಿಟಲ್ಸ್ ಅಜೇಯ ಓಟಕ್ಕೆ ಬ್ರೇಕ್ – ಕನ್ನಡಿಗ ಕರುಣ್ ಹೋರಾಟ ವ್ಯರ್ಥ.. ಮುಂಬೈಗೆ ರೋಚಕ ಜಯ!
