ಬೆಂಗಳೂರು : ವಿಧಾನಮಂಡಲದ ಅಧಿವೇಶನದ ನಡುವೆಯೇ ರಾಜ್ಯ ಕಾಂಗ್ರೆಸ್ನಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿ ಹುದ್ದೆಯ ಗುಸುಗುಸುಗಳು ಜೋರಾಗಿವೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮುಖ್ಯಮಂತ್ರಿ ಕನಸಿಗೆ ಬಲ ತುಂಬುವ ನಿಟ್ಟಿನಲ್ಲಿ 40ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ಡಿನ್ನರ್ ಮೀಟಿಂಗ್ ನಡೆಸಿದ್ದಾರೆ ಎಂಬ ಮಾಹಿತಿ.

ಡಿಕೆಶಿ ಸಿಎಂ ಆಗಬೇಕೆಂಬ ಆಶಯದೊಂದಿಗೆ ಶಾಸಕರು ಈ ಗುಪ್ತ ಸಭೆ ನಡೆಸಿದ್ದು, ಇದನ್ನು ‘ಡಿನ್ನರ್ ಪಾಲಿಟಿಕ್ಸ್’ ಎಂದು ವಿಶ್ಲೇಷಿಸಲಾಗಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉಪಸ್ಥಿತಿಯಲ್ಲಿ ನಡೆದ ಈ ಸಭೆಯಲ್ಲಿ 40ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ಭಾಗವಹಿಸಿದ್ದರು. ಡಿ.ಕೆ. ಸುರೇಶ್, ಎಂಎಲ್ಸಿ ಚೆನ್ನರಾಜ್ ಹಟ್ಟಿಹೊಳಿ, ಇಕ್ಬಾಲ್ ಹುಸೇನ್, ಸಿ.ಪಿ. ಯೋಗೇಶ್ವರ್, ಶ್ರೀನಿವಾಸ್ ಮಾನೆ, ಎನ್.ಎ. ಹ್ಯಾರೀಸ್, ಶಿವರಾಂ ಹೆಬ್ಬಾರ್ ಮತ್ತು ಗಣೇಶ್ ಹುಕ್ಕೇರಿ ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.

ಈ ಭೋಜನ ಕೂಟದ ಉದ್ದೇಶ ಡಿಕೆಶಿ ಅವರನ್ನು ಸಿಎಂ ಮಾಡುವ ಪ್ರಯತ್ನ. ಡಿನ್ನರ್ ಪಾಲಿಟಿಕ್ಸ್ ಬಗ್ಗೆ ಪ್ರಶ್ನಿಸಿದಾಗ, ಡಿಸಿಎಂ ಡಿ.ಕೆ. ಶಿವಕುಮಾರ್ ಇದನ್ನು ತಳ್ಳಿಹಾಕಿದರು. ಆತ್ಮೀಯರೆಲ್ಲರೂ ಊಟಕ್ಕೆ ಸೇರಿದ್ದೇವೆ, ಅಷ್ಟೇ, ಎಂದು ಹೇಳಿಕೆ ನೀಡಿದ ಡಿ.ಕೆ. ಶಿವಕುಮಾರ್, ಸಿಎಂ ಫೈಟ್ ವಿಚಾರ ಮುಚ್ಚಿಡುವ ಪ್ರಯತ್ನ ಮಾಡಿದರು. ಇದೇ ವೇಳೆ, ಸಚಿವ ಸಂತೋಷ್ ಲಾಡ್ ಅವರಿಗೆ ಈ ಡಿನ್ನರ್ ಪಾಲಿಟಿಕ್ಸ್ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದರು.

ಡಿ.ಕೆ. ಶಿವಕುಮಾರ್ ಅವರ ನಿವಾಸದಲ್ಲಿ ನಡೆದ ಶಾಸಕರ ಡಿನ್ನರ್ ಪಾಲಿಟಿಕ್ಸ್ ಬಗ್ಗೆ ವಿಪಕ್ಷ ನಾಯಕ ಆರ್. ಅಶೋಕ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿವೇಶನದ ಸಮಯದಲ್ಲಿ, ಅಭಿವೃದ್ಧಿ ಕುರಿತು ಚರ್ಚಿಸಬೇಕಾದಾಗ, ಕಾಂಗ್ರೆಸ್ ಶಾಸಕರು ಸಿಎಂ ಕುರ್ಚಿಗಾಗಿ ಗುಪ್ತ ಸಭೆ ನಡೆಸಿರುವುದು ರಾಜ್ಯದ ಆಡಳಿತಕ್ಕೆ ಮಾಡಿದ ಅಪಮಾನ. ಮುಖ್ಯಮಂತ್ರಿ ಸ್ಥಾನಕ್ಕಾಗಿ ಈಗಿನಿಂದಲೇ ಡಿಕೆಶಿ ಫೈಟ್ ಶುರು ಮಾಡಿದ್ದು ಸ್ಪಷ್ಟವಾಗಿದೆ ಎಂದು ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ : ಲೋನ್ಗೆ ಅಧಿಕ ಬಡ್ಡಿ ವಿಧಿಸಿ ಕಿರುಕುಳ – ‘ವಾಸ್ತು ಫೈನಾನ್ಸ್’ ವಿರುದ್ಧ ಸಾರ್ವಜನಿಕರ ಆಕ್ರೋಶ!







