ಬೆಂಗಳೂರು : ಬಳ್ಳಾರಿ ನಗರ ಮಧ್ಯ ಭಾಗದಲ್ಲಿರುವ 100 ಕೋಟಿ ರೂ.ಗೂ ಅಧಿಕ ಮೌಲ್ಯದ ಸ್ಥಿರಾಸ್ತಿ ಕಬಳಿಕೆ ಆರೋಪದಡಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಪುತ್ರ ಜಿ. ಕಿರೀಟಿ ರೆಡ್ಡಿ ಹಾಗೂ ಆತನ ಸಹವರ್ತಿಗಳು ಭಾಗಿಯಾಗಿರುವ ಆರೋಪದ ಕ್ರಿಮಿನಲ್ ಕೇಸನ್ನು CID ಅಥವಾ SITಗೆ ಒಪ್ಪಿಸುವಂತೆ ಕೋರಿರುವ ಅರ್ಜಿ ಸಂಬಂಧ ಹೈಕೋರ್ಟ್, ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ಸ್ಥಿರಾಸ್ತಿಯ ಮಾಲೀಕ ಎಂ. ಗೋವರ್ಧನ ಸಲ್ಲಿಸಿರುವ ಅರ್ಜಿ ಕುರಿತು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಸೋಮವಾರ ಧಾರವಾಡ ಪೀಠದಲ್ಲಿ ವಿಚಾರಣೆ ನಡೆಸಿತು. ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರ ಗೋವರ್ಧನ ಅವರ ಜೀವ ರಕ್ಷಣೆಗಾಗಿ ಪೊಲೀಸ್ ಭದ್ರತೆ ಒದಗಿಸಲು ನಿರ್ದೇಶಿಸಿತು. ಅಂತೆಯೇ, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ, ಸಿಐಡಿ, ಕೌಲ್ ಬಜಾರ್ ಪೊಲೀಸ್ ಠಾಣೆ ಇನ್ಸ್ಪೆಕ್ಟರ್, ಧಾರವಾಡ ವಲಯ ಐಜಿಪಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆಯನ್ನು ಇದೇ 15ಕ್ಕೆ ಮುಂದೂಡಿತು.
ಅರ್ಜಿದಾರರ ಪರ ಹೈಕೋರ್ಟ್ ವಕೀಲ ಪಿ. ಪ್ರಸನ್ನ ಕುಮಾರ್, ಅರ್ಜಿದಾರರ 9 ಎಕರೆ ಜಾಗವನ್ನು ಸುಳ್ಳು ದಾಖಲೆ ಸೃಷ್ಟಿಸಿ ತಮ್ಮ ವಶಕ್ಕೆ ಪಡೆಯಲು ಜಿ. ಕಿರೀಟಿ ರೆಡ್ಡಿ ಮತ್ತು ಸಹವರ್ತಿಗಳು ಯತ್ನಿಸಿದ್ದಾರೆ. ಅರ್ಜಿದಾರರ ಜತೆ ಕಿರೀಟಿ ರೆಡ್ಡಿಯ ಸಹವರ್ತಿಗಳಾದ ಬಿ. ಸೀನ ಮತ್ತು ಮಂಜುನಾಥ್ 2005ರಲ್ಲಿ ಜಿಪಿಎ ಮತ್ತು ಕರಾರು ಪತ್ರ ಮಾಡಿಸಿಕೊಂಡು ದಾಖಲೆಗಳನ್ನು ತಿರುಚಿದ್ದಾರೆ ಎಂದು ವಿಧಿ ವಿಜ್ಞಾನ ಪ್ರಯೋಗಾಲಯದ ದಾಖಲೆಗಳನ್ನು ಉಲ್ಲೇಖಿಸಿ ಆರೋಪಿಸಿದರು.
ಅರ್ಜಿದಾರರ ಸ್ವಾಧೀನಾನುಭವದಲ್ಲಿರುವ 9 ಎಕರೆ ಬೆಲೆ ಬಾಳುವ ಆಸ್ತಿಯನ್ನು ಪ್ರತಿವಾದಿ ಬಿ. ಸೀನ ಮತ್ತಿತರರು ಶುದ್ಧ ಕ್ರಯಕ್ಕೆ ಮಾರಾಟ ಮಾಡಲಾಗಿದೆ ಎಂಬ ಪತ್ರ ಸೃಷ್ಟಿಸಿ 2008ರಲ್ಲಿ ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ, ಅಸಲು ದಾವೆ ಮೂಲಕ ಅರ್ಜಿದಾರರ ವಿರುದ್ಧ ಪ್ರತಿಬಂಧಕ ಆದೇಶ ಪಡೆದುಕೊಂಡು ಸಲ್ಲದ ವ್ಯಾಜ್ಯದಲ್ಲಿ ಸಿಲುಕಿಸಿ ಭಾರಿ ಮೊತ್ತದ ಆಸ್ತಿ ಕಬಳಿಕೆಗೆ ಪ್ರಯತ್ನಿಸಿದ್ದಾರೆ ಎಂದು ದೂರಿದರು.
ಈ ಸಂಬಂಧ ಕೌಲ್ ಬಜಾರ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಪ್ರತಿವಾದಿ ಜಿ. ಕಿರೀಟಿ ರೆಡ್ಡಿ ಪ್ರಭಾವಿ ವ್ಯಕ್ತಿಯಾಗಿದ್ದಾರೆ. ಅರ್ಜಿದಾರರಿಗೆ ಜೀವ ಭಯವಿದ್ದು, ಅಗತ್ಯ ರಕ್ಷಣೆ ಒದಗಿಸಬೇಕು ಮತ್ತು ಈ ಪ್ರಕರಣವನ್ನು ಸಿಐಡಿ ಅಥವಾ ಎಸ್ಐಟಿಯಂತಹ ಸೂಕ್ತ ತನಿಖಾ ಸಂಸ್ಥೆಗೆ ವಹಿಸಲು ಸೂಕ್ತ ನಿರ್ದೇಶನ ನೀಡಬೇಕು ಎಂದು ಅವರು ಕೋರಿದರು.
ಇದನ್ನೂ ಓದಿ : ಜಪಾನ್ನಲ್ಲಿ 7.6 ತೀವ್ರತೆಯ ಪ್ರಬಲ ಭೂಕಂಪ – ಸುನಾಮಿ ಎಚ್ಚರಿಕೆ!







