ಬೆಂಗಳೂರು : ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಫೈಟ್ ತೀವ್ರಗೊಂಡಿರುವ ನಡುವೆಯೇ, ಇಂದು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಹತ್ವದ ಬ್ರೇಕ್ ಫಾಸ್ಟ್ ಮೀಟಿಂಗ್ನಲ್ಲಿ ಮುಖಾಮುಖಿಯಾಗಲಿದ್ದಾರೆ. ಹೈಕಮಾಂಡ್ನ ಸೂಚನೆಯ ಮೇರೆಗೆ ಸಿಎಂ ಸಿದ್ದರಾಮಯ್ಯ ಅವರ ಕಾವೇರಿ ನಿವಾಸದಲ್ಲಿ ಉಪಹಾರ ಸಭೆ ನಡೆಯಲಿದ್ದು, ಇದು ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ಸಿಎಂ ಕುರ್ಚಿ ವಿಚಾರವನ್ನು ಇಬ್ಬರೂ ನಾಯಕರು ಪರಸ್ಪರ ಮಾತನಾಡಿ ಬಗೆಹರಿಸಿಕೊಳ್ಳಬೇಕು ಎಂದು ಹೈಕಮಾಂಡ್ ಸೂಚನೆ ನೀಡಿದ್ದು, ಈ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಅವರು ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಕರೆ ಮಾಡಿ ಕಾವೇರಿ ನಿವಾಸಕ್ಕೆ ಉಪಹಾರಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ.

ಇನ್ನು ಕೆಲ ಹೊತ್ತಲ್ಲೇ ಕಾವೇರಿ ನಿವಾಸದಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗ್ ಆರಂಭವಾಗಲಿದ್ದು, ಇಬ್ಬರೂ ನಾಯಕರು ತಿಂಡಿ ತಿನ್ನುತ್ತಾ ಸಿಎಂ ಸ್ಥಾನದ ಬಗ್ಗೆ ಮಹತ್ವದ ಚರ್ಚೆ ನಡೆಸುವ ಸಾಧ್ಯತೆಯಿದೆ. ಈಗಾಗಲೇ ಹೈಕಮಾಂಡ್ ಮಾತಿಗೆ ಬದ್ಧ ಎಂದು ಹೇಳಿರುವ ಸಿಎಂ ಸಿದ್ದು ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್, ತಮ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ ಎಂದಿದ್ದಾರೆ.
ಬ್ರೇಕ್ ಫಾಸ್ಟ್ ಮೀಟಿಂಗ್ ಬಳಿಕ ಹೈಕಮಾಂಡ್ ನಾಯಕರ ಜೊತೆ ಚರ್ಚೆ ಮಾಡುವ ಸಾಧ್ಯತೆಯಿದೆ. ಡಿಕೆಶಿ ಮುಂದಿನ ಮುಖ್ಯಮಂತ್ರಿ ಆಗಲು ಒಪ್ಪಿಕೊಳ್ತಾರಾ ಸಿದ್ದರಾಮಯ್ಯ? ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರಿತೀನಿ ಅಂತಾ ಪಟ್ಟು ಹಿಡಿತಾರಾ? ಈ ‘ಪಟ್ಟ’ದಾಟಕ್ಕೆ ಇಂದಿನ ಉಪಹಾರ ಕೂಟ ಬ್ರೇಕ್ ಹಾಕುತ್ತಾ? ಮದಗಜಗಳ ನಡುವೆ ಸಂಧಾನ ನಡೆಯುತ್ತಾ ಎಂಬುದು ಇಡೀ ರಾಜ್ಯದ ಕುತೂಹಲವಾಗಿದೆ.
ಇದನ್ನೂ ಓದಿ : ಬೆಂಗಳೂರಲ್ಲಿ ಸ್ಪೆಷಲ್ ತಹಶೀಲ್ದಾರ್ ಲಂಚಾವತಾರ – ಕಂದಾಯ ಅಧಿಕಾರಿಯ ಮೇಲೆ ಲೋಕಾಯುಕ್ತ ದಾಳಿ!







