ಬೆಂಗಳೂರು : ಸರ್ಕಾರದ ವಿರುದ್ಧ ಗುತ್ತಿಗೆದಾರರ ಸಂಘ ಈಗ ಸಿಡಿದೆದ್ದಿದೆ. ಹಣ ಬಿಡುಗಡೆಗೆ ಮಧ್ಯವರ್ತಿಗಳ ಕಾಟ ಹೆಚ್ಚಾಗಿದೆ ಎಂದು ಕರ್ನಾಟಕ ಸ್ಟೇಟ್ ಕಂಟ್ರಾಕ್ಟರ್ಸ್ ಅಸೋಸಿಯೇಷನ್ ಬಾಂಬ್ ಸಿಡಿಸಿದೆ.
ಸಣ್ಣ ಮತ್ತು ಮಧ್ಯಮ ವರ್ಗದ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಧ್ಯವರ್ತಿಗಳ ಕಾಟ ಕೊಡುತ್ತಿದ್ದಾರೆ. ಜೇಷ್ಠತೆ ಪಾಲಿಸದೇ ಸ್ಪೆಷಲ್ ಎಲ್ಓಸಿ ಸೃಷ್ಟಿ ಮಾಡಿ ಹಣ ಬಿಡುಗಡೆ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಸಿಎಂ ಸಿದ್ದರಾಮಯ್ಯನವರಿಗೆ ಪತ್ರ ಬರೆದ ಸಂಘ ಲೋಕೋಪಯೋಗಿ ಇಲಾಖೆ, ನಾಲ್ಕು ನೀರಾವರಿ ನಿಗಮ ಮತ್ತು ಸಣ್ಣ ನೀರಾವರಿ ಇಲಾಖೆಯಲ್ಲಿ ಕಾಣದ ಕೈಗಳ ಬಗ್ಗೆ ಚರ್ಚೆ ಮಾಡಿ ಸಣ್ಣ ಗುತ್ತಿಗೆದಾರರಿಗೆ ನ್ಯಾಯ ಒದಗಿಸುವಂತೆ ಪತ್ರ ಬರೆದಿದೆ.
ಪತ್ರದಲ್ಲಿ ಏನಿದೆ? ಲೋಕೋಪಯೋಗಿ, ನಾಲ್ಕು ನೀರಾವರಿ ನಿಗಮಗಳಲ್ಲಿ ಮತ್ತು ಸಣ್ಣ ನೀರಾವರಿ ಇಲಾಖೆಯಲ್ಲಿ “ಜೇಷ್ಠತೆ ಆಧಾರದಲ್ಲಿ” ಹಣ ಬಿಡುಗಡೆ ಮಾಡದೆ, “Special L.O.C.’ಯನ್ನು ಸೃಷ್ಟಿಸಿ, ಸಣ್ಣ ಮತ್ತು ಮಧ್ಯಮ ವರ್ಗದ ಗುತ್ತಿಗೆದಾರರಿಗೆ ರೂ.5.00 ಲಕ್ಷದಿಂದ ರೂ.50.00ಲಕ್ಷದ ವರೆಗೆ ಹಣ ಬಿಡುಗಡೆ ಮಾಡದೆ, “Special L.O.C.’ಯ ನೆಪದಲ್ಲಿ ಮೇಲೆ ತಿಳಿಸಿದ ಎಲ್ಲಾ ಇಲಾಖೆಗಳು ಬಲಾಡ್ಯ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡುವ ಪರಿಪಾಠವನ್ನು ಬೆಳೆಸಿಕೊಂಡು ಬಂದಿರುತ್ತಾರೆ. ಮಾನ್ಯ ಸಚಿವರುಗಳ ಜೊತೆಗೆ ಹಲವಾರು ಸಭೆಗಳನ್ನು ನೆಡೆಸಿ, ಸಣ್ಣ ಮತ್ತು ಮಧ್ಯಮ ವರ್ಗದ ಗುತ್ತಿಗೆದಾರರು ಸುಮಾರು ಮೂರು ವರ್ಷಗಳಿಂದ ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿದರೂ ಸಹ, “ಜೇಷ್ಠತೆ ಆಧಾರದ ” ಮೇಲೆ ಹಣ ಬಿಡುಗಡೆ ಮಾಡಲು ಸಭೆ ತೀರ್ಮಾನಿಸಿದರೂ, ಜೇಷ್ಠತೆಯನ್ನು ಲೆಕ್ಕಿಸದೆ “Special L.O.C.”ಯನ್ನು ಕೊಡುತ್ತಿದ್ದಾರೆ.
ಇತ್ತೀಚೆಗೆ ಸುಮಾರು 3-4 ತಿಂಗಳುಗಳಿಂದ ಮೇಲ್ಕಂಡ ಇಲಾಖೆಗಳಲ್ಲಿ ಮಧ್ಯವರ್ತಿಗಳು ಅಂದರೆ ಕಾಣದ “ಕಾಣದ ಕೈಗಳು” ಹಿಂದಿನ ವ್ಯವಸ್ಥೆಯನ್ನು ಹದಗೆಡಿಸುತ್ತಿದ್ದಾರೆ. ಸುಮಾರು ಮೂರು ವರ್ಷಗಳಿಂದ ಗುತ್ತಿಗೆದಾರರು ಹಣ ಬಿಡುಗಡೆಯಾಗದೆ ಸಂಕಷ್ಟದಲ್ಲಿದ್ದಾರೆ. ಈ ವಿಚಾರವನ್ನು ತಮಗೂ ಸಹ ಹಲವಾರು ಸಾರಿ ಮುಕ್ತವಾಗಿ ತಿಳಿಸಿರುತ್ತೇವೆ. ಆದ್ದರಿಂದ ತಾವುಗಳು ಮೇಲ್ಕಂಡ ಇಲಾಖೆಗಳ ಸಚಿವರುಗಳನ್ನು ಹಾಗೂ ಸಂಬಂದಪಟ್ಟ ಅಧಿಕಾರಿಗಳನ್ನು ಮತ್ತು ನಮ್ಮ ಸಂಘದ ಪದಾಧಿಕಾರಿಗಳ ಜೊತೆಗೆ ಅಧಿಕೃತವಾಗಿ ಸಭೆಯನ್ನು ಕರೆದು “Special L.O.C.” ಮತ್ತು “ಕಾಣದ ಕೈಗಳ” ಬಗ್ಗೆ ಚರ್ಚಿಸಿ ಸಣ್ಣ ಮತ್ತು ಮಧ್ಯಮ ವರ್ಗದ ಗುತ್ತಿಗೆದಾರರಿಗೆ ನ್ಯಾಯ ಒದಗಿಸಿಕೊಡಬೇಕೆಂದು ತಮ್ಮಲ್ಲಿ ಪ್ರಾರ್ಥಿಸಿಕೊಳ್ಳುತ್ತೇವೆ.
ಇದನ್ನೂ ಓದಿ : ಮಂಡ್ಯದಲ್ಲಿ ಮತ್ತೆ ಭುಗಿಲೆದ್ದ ಹನುಮಧ್ವಜ ವಿವಾದ – ಏ.12ಕ್ಕೆ ಶೋಭಾಯಾತ್ರೆ ನಡೆಸಲು ಹಿಂದೂ ಸಂಘಟನೆಗಳ ನಿರ್ಧಾರ!
