ಮಂಡ್ಯ : ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುವ ಬಗ್ಗೆ ಬಿಜೆಪಿ ನಾಯಕರು ‘ಗಿಳಿ ಶಾಸ್ತ್ರ’ ಕೇಳಿಸಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಇದು ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗೆ ಡಿ.ಕೆ.ಶಿ ಅವರೇ “ಬಿಜೆಪಿಯವರು ಗಿಳಿ ಶಾಸ್ತ್ರ ಕೇಳಿ” ಎಂದು ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಈ ಕಾರ್ಯವನ್ನು ಮಾಡಿ, ಫಲಿತಾಂಶದ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಗಿಳಿ ಶಾಸ್ತ್ರದ ಮೂಲಕ ಡಿ.ಕೆ. ಶಿವಕುಮಾರ್ ಅವರು ಮುಂದಿನ ಮುಖ್ಯಮಂತ್ರಿ ಆಗುತ್ತಾರೆಯೇ ಎಂಬ ಪ್ರಶ್ನೆಗೆ, ಗಿಳಿಯು ‘ಚಂಬು’ ಇರುವ ಕಾರ್ಡ್ ಅನ್ನು ತೆಗೆದಿದೆ. ಗಿಳಿ ಆರಿಸಿದ ಕಾರ್ಡ್ ಅನ್ನು ಉಲ್ಲೇಖಿಸಿರುವ ಬಿಜೆಪಿ ನಾಯಕರು, “ಡಿ.ಕೆ. ಶಿವಕುಮಾರ್ ಅವರು ಸಿಎಂ ಆಗಲ್ಲ. ಡಿಕೆಶಿ ಕೈಗೆ ಚಂಬು ಎಂದು ಲೇವಡಿ ಮಾಡಿದ್ದಾರೆ.

ಇದಾದ ಬಳಿಕ, “ಸಿದ್ದರಾಮಯ್ಯ ಅವರು ಸಿಎಂ ಆಗಿ ಮುಂದುವರಿದರೆ ರಾಜ್ಯದ ಜನರಿಗೆ ಒಳಿತಾಗುವುದೇ?” ಎಂಬ ಪ್ರಶ್ನೆಯನ್ನು ಸಹ ಗಿಳಿ ಶಾಸ್ತ್ರದ ಮುಂದೆ ಇಡಲಾಗಿದೆ. ಈ ಪ್ರಶ್ನೆಗೆ ಗಿಳಿಯು ‘ಹೂವು’ ಇರುವ ಕಾರ್ಡ್ ಅನ್ನು ತೆಗೆದಿದೆ. ಈ ಫಲಿತಾಂಶದ ಬಗ್ಗೆಯೂ ಬಿಜೆಪಿ ನಾಯಕರು ತೀವ್ರ ವಿಡಂಬನೆ ಮಾಡಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆದರೆ ಜನರ ಕಿವಿಗೆ ಹೂವು”ಎಂದು ಬಿಜೆಪಿ ವಿಡಂಬನೆ ಮಾಡಿದ್ದಾರೆ.

ಇದನ್ನೂ ಓದಿ : ಡಿಕೆಶಿ ಮುಖ್ಯಮಂತ್ರಿಯಾಗಲು ಹರಕೆ – ದೇವರಗುಡ್ಡದಲ್ಲಿ ಅಭಿಮಾನಿಯಿಂದ ‘ಚಾಟಿ ಸೇವೆ’!







