7 ಕೋಟಿ ರಾಬರಿ ಕೇಸ್ – ದರೋಡೆಯಾದ ವಾಹನ ಪರಿಶೀಲನೆ.. CMS ವಾಹನ ಚಾಲಕ ಪೋಲೀಸರ ವಶಕ್ಕೆ!

ಬೆಂಗಳೂರು : ನಗರದಲ್ಲಿ ನಡೆದ ₹7 ಕೋಟಿ ಮೌಲ್ಯದ ಸಿಎಂಎಸ್ (CMS) ಹಣ ಸಾಗಾಣಿಕೆ ವಾಹನ ದರೋಡೆ ಪ್ರಕರಣವು ಕ್ಷಣಕ್ಕೊಂದು ತಿರುವು ಪಡೆಯುತ್ತಿದ್ದು, ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಈ ಸಂಬಂಧ ವಾಹನದ ಚಾಲಕನನ್ನು ಸಿದ್ದಾಪುರ ಠಾಣೆ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ದರೋಡೆಗೆ ಒಳಗಾದ ಸಿಎಂಎಸ್ ವಾಹನವನ್ನು ಪೊಲೀಸರು ಕೂಲಂಕುಷವಾಗಿ ಪರಿಶೀಲನೆ ನಡೆಸಿದ್ದಾರೆ. ವಿಧಿವಿಜ್ಞಾನ ಮತ್ತು ತಾಂತ್ರಿಕ ನೆರವು ಪಡೆಯಲು ವಾಹನದೊಳಗೆ ಸೋಕೋ ತಂಡದಿಂದ ಶೋಧ ಕಾರ್ಯ ನಡೆದಿದೆ. ಫಿಂಗರ್ ಪ್ರಿಂಟ್ ಅಧಿಕಾರಿಗಳು ವಾಹನದಲ್ಲಿದ್ದ ವ್ಯಕ್ತಿಗಳ ಮತ್ತು ದರೋಡೆಕೋರರ ಕೈಬೆರಳಿನ ಗುರುತುಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಸಿಎಂಎಸ್ ವಾಹನದಲ್ಲಿನ ಹಣದ ಬಾಕ್ಸ್‌ಗಳ ಸಂಖ್ಯೆ ಮತ್ತು ಈಗ ಲಭ್ಯವಿರುವ ಬಾಕ್ಸ್‌ಗಳ ಕುರಿತು ಸ್ಪಷ್ಟ ಮಾಹಿತಿ ಪಡೆಯಲು ತನಿಖೆ ಮುಂದುವರೆದಿದೆ.

ಪ್ರಕರಣದ ಪ್ರಮುಖ ಕೊಂಡಿಯಾದ ಸಿಎಂಎಸ್ (CMS) ವಾಹನದ ಚಾಲಕನನ್ನು ಸಿದ್ದಾಪುರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ. ಪೊಲೀಸರು ಚಾಲಕನಿಗೆ ಹಲವು ಮಹತ್ವದ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ದರೋಡೆಗೆ ಬಂದಿದ್ದು ಎಷ್ಟು ಜನ? ದರೋಡೆಕೋರರು ನಿಮಗೆ ಏನು ಹೇಳಿದರು? ವಾಹನವನ್ನು ನೀವು ಯಾಕೆ ನಿಲ್ಲಿಸಿದ್ರಿ? ದರೋಡೆಕೋರರಿಗೆ ಹಣದ ಬಗ್ಗೆ ಮಾಹಿತಿ ಕೊಟ್ಟವರು ಯಾರು? ವಾಹನ ಚಲಾಯಿಸಲು ಅವರಿಗೆ ಏಕೆ ಬಿಟ್ಟಿರಿ?

ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. ಸುಮಾರು 7 ಕೋಟಿ ಅಮೌಂಟ್ ಹೋಗಿದೆ ಅಂತ ಮಾಹಿತಿ ಬಂದಿದೆ ಎಂದು ಕಮಿಷನರ್ ದೃಢಪಡಿಸಿದ್ದಾರೆ. ಡ್ರೈವರ್ ಯಾರಿದ್ದರು ಎಂದು ಸರಿಯಾಗಿ ಮಾಹಿತಿ ನೀಡ್ತಿಲ್ಲ. ಇಡೀ ಸಿಲಿಕಾನ್ ಸಿಟಿಯಲ್ಲಿ ನಾಕಾಬಂದಿ ಮಾಡಿದ್ದೇವೆ. ನಮ್ಮ ಪ್ರಯತ್ನ ನಾವು ಮಾಡುತ್ತಾ ಇದ್ದೇವೆ. ನಮ್ಮ ಟೀಮ್ ಎಲ್ಲ ಕಡೆ ಸ್ಪ್ರೆಡ್ ಆಗಿದೆ ಎಂದು ತಿಳಿಸಿದ್ದಾರೆ. ಇದರಲ್ಲಿ ಬೇರೆ ಬೇರೆ ಟೀಮ್ ಮಾಡಿದ್ದೀವಿ. ಫಿಸಿಕಲಿ ಗ್ರೌಂಡ್‌ನಲ್ಲಿ ಕೆಲವರು ಇದ್ದಾರೆ, ಇನ್ನೂ ಕೆಲವರು ಕಂಟ್ರೋಲ್ ರೂಮ್‌ನಲ್ಲಿ ಇದ್ದಾರೆ. ಆದಷ್ಟು ಬೇಗ ಕೇಸ್ ಡಿಟೆಕ್ಟ್ ಮಾಡಲಿಕ್ಕೆ ಪ್ರಯತ್ನ ಮಾಡುತ್ತೇವೆ ಎಂದು ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರು ಹೇಳಿದ್ದಾರೆ.

ಇದನ್ನೂ ಓದಿ : “ಮಾರುತ” ಸಿನಿಮಾ ವೀಕ್ಷಿಸಿದ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ!

Btv Kannada
Author: Btv Kannada

Read More