ಬೆಂಗಳೂರು : ಬೆಂಗಳೂರಿನಲ್ಲಿ ಹಾಡಹಗಲೇ ಕೋಟಿ ಕೋಟಿ ಹಣ ದರೋಡೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಜಯನಗರದ ಅಶೋಕ ಪಿಲ್ಲರ್ ಬಳಿ ಎಟಿಎಂಗಳಿಗೆ ಹಣ ತುಂಬಿಸುವ ವಾಹನವನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಏಳು ಕೋಟಿ ರೂಪಾಯಿ ಹಣ ದೋಚಿ ಪರಾರಿಯಾಗಿದ್ದಾರೆ.

ಸಿಎಂಎಸ್ ಕಂಪನಿಯ ವಾಹನವು ಅಶೋಕ ಪಿಲ್ಲರ್ ಬಳಿ ಬರುತ್ತಿದ್ದಾಗ, ದುಷ್ಕರ್ಮಿಗಳು ಇನ್ನೋವಾ ಕಾರಿನಲ್ಲಿ ಬಂದು ವಾಹನವನ್ನು ಅಡ್ಡಗಟ್ಟಿದ್ದಾರೆ. ಈ ವೇಳೆ ದರೋಡೆಕೋರರು ಸೆಂಟ್ರಲ್ ಟ್ಯಾಕ್ಸ್ ಆಫೀಸರ್ಸ್ ಎಂದು ಪರಿಚಯಿಸಿಕೊಂಡಿದ್ದಾರೆ. ನಾವು ತೆರಿಗೆ ಇಲಾಖೆಯ ಅಧಿಕಾರಿಗಳು, ನಿಮ್ಮಲ್ಲಿರುವ ದಾಖಲೆಗಳನ್ನು ಪರಿಶೀಲಿಸಬೇಕು ಎಂದು ನಂಬಿಸಿದ್ದಾರೆ.

ವಾಹನದಲ್ಲಿದ್ದ ಹಣದ ಸಮೇತ ಸಿಎಂಎಸ್ ಸಿಬ್ಬಂದಿಯನ್ನು ಬಲವಂತವಾಗಿ ತಮ್ಮ ಇನ್ನೋವಾ ಕಾರಿನಲ್ಲಿ ಕೂರಿಸಿಕೊಂಡು ಕರೆದೊಯ್ದಿದ್ದಾರೆ. ಸಿಎಂಎಸ್ ಸಿಬ್ಬಂದಿಯನ್ನು ಡೈರಿ ಸರ್ಕಲ್ ಬಳಿ ಬಿಟ್ಟು, ಹಣದ ಸಮೇತ ದರೋಡೆಕೋರರು ಪರಾರಿಯಾಗಿದ್ದಾರೆ. ಈ ದರೋಡೆ ಪ್ರಕರಣ ದಾಖಲಾಗಿದ್ದು, ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.








