ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ – ನೆಲಮಂಗಲದಲ್ಲಿ ಸ್ಥಳ ಪರಿಶೀಲಿಸಿದ ಎಐಐ ತಂಡ!

ನೆಲಮಂಗಲ : ರಾಜಧಾನಿ ಬೆಂಗಳೂರಿಗೆ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸ್ಥಳ ಆಯ್ಕೆ ಪ್ರಕ್ರಿಯೆ ತೀವ್ರಗೊಂಡಿದೆ. ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ಉನ್ನತ ಮಟ್ಟದ ತಂಡವು ರಾಜ್ಯ ಸರ್ಕಾರ ಗುರುತಿಸಿದ ಮೂರು ಸ್ಥಳಗಳನ್ನು ಪರಿಶೀಲಿಸಿತು.

ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣಕ್ಕಾಗಿ ಕೇಂದ್ರದ ತಂಡ ಮೋಟಗಾನಹಳ್ಳಿ ಸುತ್ತ ಮುತ್ತ ಸ್ಥಳ ವೀಕ್ಷಣೆ ಮಾಡಿದ್ದು, ನೆಲಮಂಗಲ ತಾಲೂಕಿನ ಗಡಿ ಬಸೇನಹಳ್ಳಿ ಬೆಟ್ಟದ ತುತ್ತ ತುದಿಯಲ್ಲಿ ವೀಕ್ಷಿಸಿದ್ದಾರೆ. 8 ಕಾರುಗಳಲ್ಲಿ ಬಂದಿರುವ 15 ಕ್ಕೂ ಹೆಚ್ಚು ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಸ್ಥಳ ವೀಕ್ಷಣೆ ಮಾಡಿದ್ದಾರೆ.

ಇನ್ನು ಸೋಲೂರು ಗುಡೇಮಾರನಹಳ್ಳಿ ಬಳಿ ಮತ್ತೊಂದು ಸ್ಥಳ ವೀಕ್ಷಣೆ ಮಾಡಿದ್ದು, ಅರಣ್ಯ ಪ್ರದೇಶ, ಗೋಮಾಳ, ವಸತಿ ಪ್ರದೇಶ, ತೋಟಗಾರಿಕೆ ಭೂಮಿಗಳನ್ನು ನೋಡಿದ್ದಾರೆ. ನೆಲಮಂಗಲ ತಾಲೂಕಿನ ಒಂದು ಭಾಗ ಹಾಗೂ ಸೋಲೂರು ಹೋಬಳಿಯ ಒಂದು ಭಾಗ ಹಾಗೂ ಹಾರೋಹಳ್ಳಿ, ನೆಲಮಂಗಲ ಬಳಿಯ ಜಾಗಗಳನ್ನು ಕೇಂದ್ರ ವಿಮಾನ ಪ್ರಾಧಿಕಾರದ ಅಧಿಕಾರಿಗಳ ತಂಡ ವೀಕ್ಷಣೆ ಮಾಡಿದೆ. ಒಟ್ಟು ಮೂರು ಜಾಗಗಳನ್ನು ಅದೀಕಾರಿಗಳು ಪರಿಶೀಲನೆ ಮಾಡಿದ್ದಾರೆ.

ಪರಿಶೀಲನೆ ಬಳಿಕ ಎಎಐ ತಂಡವು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಅವರನ್ನು ಭೇಟಿಯಾಗಿ ಚರ್ಚಿಸಿತು. ಸಚಿವರು ಉದ್ದೇಶಿತ ವಿಮಾನ ನಿಲ್ದಾಣದ ಅಗತ್ಯತೆಯನ್ನು ವಿವರಿಸಿದರು. “ಬೆಂಗಳೂರಿನ ನಾಗರಿಕ ಮತ್ತು ಕೈಗಾರಿಕಾ ಬೇಡಿಕೆಗಳು ದಿನದಿನಕ್ಕೆ ಹೆಚ್ಚುತ್ತಿವೆ. ಹೀಗಾಗಿ, ಎರಡನೇ ವಿಮಾನ ನಿಲ್ದಾಣವು ಈ ಅಗತ್ಯಗಳನ್ನು ಪೂರೈಸುವ ದೃಷ್ಟಿಯಿಂದ ನಿರ್ಮಾಣವಾಗಲಿದೆ,” ಎಂದು ಅವರು ತಂಡಕ್ಕೆ ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿದರು.

ಇದನ್ನೂ ಓದಿ : ಬೆಂಗಳೂರಿನ 2ನೇ ಏರ್‌ಪೋರ್ಟ್ ಶಿರಾದಲ್ಲಿ ನಿರ್ಮಾಣಕ್ಕೆ ಒತ್ತಾಯ – ಸಿಎಂ ಸಿದ್ದುಗೆ 30ಕ್ಕೂ ಹೆಚ್ಚು ಶಾಸಕರಿಂದ ಪತ್ರ!

 

Btv Kannada
Author: Btv Kannada

Read More