ಬಿಹಾರ ರಿಸಲ್ಟ್ ಬೆನ್ನಲ್ಲೇ ದೆಹಲಿಗೆ ಸಿಎಂ & ಡಿಸಿಎಂ – ‘ಕೈ’ ಹೈಕಮಾಂಡ್ & ಅಮಿತ್ ಶಾ ಜೊತೆ ಚರ್ಚೆ!

ಬೆಂಗಳೂರು : ಬಿಹಾರ ವಿಧಾನಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನವದೆಹಲಿಗೆ ಪ್ರಯಾಣ ಕೈಗೊಂಡಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್ ಭೇಟಿ ಈ ಪ್ರವಾಸದ ಮುಖ್ಯ ಉದ್ದೇಶವಾಗಿದ್ದು. ಕರ್ನಾಟಕ ಸಿಎಂ ಗದ್ದುಗೆ ಗುದ್ದಾಟದ ಕುರಿತು ಹೈಕಮಾಂಡ್ ಜೊತೆ ಸಚಿವ ಸಂಪುಟ ಪುನಾರಚನೆ ಸೇರಿದಂತೆ ಆಂತರಿಕ ರಾಜಕೀಯ ವಿಚಾರಗಳ ಬಗ್ಗೆ ಮಾತುಕತೆ ನಡೆಸಲಿದ್ದಾರೆ.

ಕಾಂಗ್ರೆಸ್ ನಾಯಕರ ಭೇಟಿಯ ಬಳಿಕ ಸಿಎಂ ಮತ್ತು ಡಿಸಿಎಂ ಅವರು ಬಿಜೆಪಿ ನಾಯಕರನ್ನು ಸಹ ಭೇಟಿಯಾಗಲಿದ್ದಾರೆ. ಇಂದು ಸಂಜೆ 5.30ಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಉಭಯ ನಾಯಕರು ಮಾತುಕತೆ ನಡೆಸಲಿದ್ದಾರೆ. ಕರ್ನಾಟಕದ ಬೆಳೆಹಾನಿ ಸಂಬಂಧ ಪರಿಹಾರ ನೀಡುವಂತೆ ರಾಜ್ಯ ಸರ್ಕಾರದ ಪರವಾಗಿ ಮನವಿ ಸಲ್ಲಿಸಲಾಗುತ್ತದೆ. ಮುಂಗಾರು ಮಳೆ ಮತ್ತು ಪ್ರವಾಹದಿಂದ ಉಂಟಾದ ಬೆಳೆಹಾನಿಗಾಗಿ, ಕೇಂದ್ರ ಸರ್ಕಾರದಿಂದ 1,545 ಕೋಟಿ ರೂಪಾಯಿ ಪರಿಹಾರ ಕೋರಲು ರಾಜ್ಯ ಸರ್ಕಾರ ನಿರ್ಧರಿಸಿದೆ. ರಾಜ್ಯದ ವಿವಿಧ ಯೋಜನೆಗಳಿಗೆ ಅನುದಾನ ನೀಡುವಂತೆಯೂ ಈ ವೇಳೆ ಮನವಿ ಮಾಡಲಾಗುವುದು.

ಈ ಪ್ರವಾಸದ ಮತ್ತೊಂದು ಕಾರ್ಯಕ್ರಮವಾಗಿ, ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಖ್ಯಾತ ವಕೀಲ ಕಪಿಲ್ ಸಿಬಲ್ ಅವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಇದನ್ನೂ ಓದಿ : ‘ಲವ್ ಒಟಿಪಿ’ ಸಿನಿಮಾ ರಾಜ್ಯಾದ್ಯಂತ ರಿಲೀಸ್ – ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ..ಚಂದನವನದ ಪ್ರೇಕ್ಷಕರ ಮನ ಗೆದ್ದ ಅನೀಶ್ ತೇಜೇಶ್ವರ್ ಚಿತ್ರ!

Btv Kannada
Author: Btv Kannada

Read More