ಬೆಂಗಳೂರು : ಅಕ್ರಮ ಅದಿರು ರಫ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರಿಗೆ ಭಾರೀ ಹಿನ್ನಡೆಯಾಗಿದ್ದು, ನಿನ್ನೆ ಸತೀಶ್ ಸೈಲ್ ಅವರ ಜಾಮೀನನ್ನು ರದ್ದುಪಡಿಸಿ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.
ವೈದ್ಯಕೀಯ ಕಾರಣಗಳನ್ನು ನೀಡಿ ತಾತ್ಕಾಲಿಕ ಜಾಮೀನು ಪಡೆದಿದ್ದ ಸೈಲ್ ಅವರ ಜಾಮೀನನ್ನು ಇದೀಗ ಕೋರ್ಟ್ ರದ್ದುಗೊಳಿಸಿದೆ. ಈವರೆಗೆ ಈ ಪ್ರಕರಣ ತನಿಖೆಯಲ್ಲಿ ಶಾಸಕ ಸತೀಶ್ ಸೈಲ್ ಅವರ 64 ಕೋಟಿ ಆಸ್ತಿಯನ್ನು ED ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಸತೀಶ್ ಸೈಲ್ ಅವರು ಗಣಿ ಭೂವಿಜ್ಞಾನ ಮತ್ತು ಅರಣ್ಯ ಇಲಾಖೆಗಳ ಪರವಾನಿಗೆ ಇಲ್ಲದ ಅದಿರನ್ನು ಅಕ್ರಮವಾಗಿ ಸಂಗ್ರಹಿಸಿ, ಚೀನಾ ಸೇರಿದಂತೆ ಹಲವು ವಿದೇಶಗಳಿಗೆ ರಫ್ತು ಮಾಡುತ್ತಿದ್ದರು ಎಂಬ ಆರೋಪ ಎದುರಿಸುತ್ತಿದ್ದಾರೆ. 2010ರಲ್ಲಿ ಅರಣ್ಯ ಇಲಾಖೆಯು ಮಂಗಳೂರಿನ ಬಂದರಿಗೆ ಭೇಟಿ ನೀಡಿ ಅನಧಿಕೃತವಾಗಿ ಸಂಗ್ರಹಿಸಿದ್ದ ಸುಮಾರು 5 ಲಕ್ಷ ಮೆಟ್ರಿಕ್ ಟನ್ ಅದಿರನ್ನು ವಶಪಡಿಸಿಕೊಂಡು ವರದಿ ಸಲ್ಲಿಸಿತ್ತು. ಈ ಪ್ರಕರಣವನ್ನು ಕೈಗೆತ್ತಿಕೊಂಡ ED, PMLA ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದೆ.
ಸದ್ಯ ಈ ಪ್ರಕರಣ ಸಂಬಂಧ ED ಕರ್ನಾಟಕ, ಗೋವಾ, ದೆಹಲಿ, ಮುಂಬೈ ರಾಜ್ಯದ 15 ಸ್ಥಳಗಳಲ್ಲಿ ಶೋಧ ನಡೆಸಿತ್ತು. ಸತೀಶ್ ಸೈಲ್ ಬಂಧಿಸಿ ED 8 ಕೋಟಿ ನಗದು, ಚಿನ್ನ ವಶಪಡಿಸಿಕೊಂಡಿತ್ತು. ಅಕ್ರಮ ಅದಿರು ಪ್ರಕರಣದ ತನಿಖೆ ತೀವ್ರಗೊಂಡಿರುವ ನಡುವೆಯೇ ಶಾಸಕರ ಜಾಮೀನು ರದ್ದಾಗಿದೆ.
ಇದನ್ನೂ ಓದಿ : ಪೊಲೀಸರ ಮೇಲೆಯೇ ಅಟ್ಯಾಕ್ ಮಾಡಿ ಎಸ್ಕೇಪ್ಗೆ ಯತ್ನ – ಕೊಲೆ ಆರೋಪಿಗೆ ಗುಂಡೇಟು!







