ಬೆಳಗಾವಿ : ಪ್ರತಿ ಟನ್ ಕಬ್ಬಿಗೆ 3,500 ರೂಪಾಯಿ ದರ ನಿಗದಿಪಡಿಸಿ ನಿನ್ನೆ ಚಿಕ್ಕೋಡಿಯ ಹತ್ತರಗಿ ಗ್ರಾಮದಲ್ಲಿ ಕಬ್ಬು ಬೆಳೆಗಾರರು ನಡೆಸುತ್ತಿದ್ದ ಪ್ರತಿಭಟನೆ ವೇಳೆ ಹಿಂಸಾಚಾರ ನಡೆದಿತ್ತು. ಪೊಲೀಸರ ಮೇಲೆ ನಡೆದ ಕಲ್ಲು ತೂರಾಟ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ 11 ಆರೋಪಿಗಳ ವಿರುದ್ಧ ಎಫ್ಐಆರ್ (FIR) ದಾಖಲಾಗಿದೆ. ಘಟನೆಯಲ್ಲಿ ಹನ್ನೊಂದು ಜನ ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿದ್ದು ಬಸ್, ಕಾರು ಸೇರಿ ಸರ್ಕಾರಿ ಆಸ್ತಿಗೆ ಹಾನಿಯಾಗಿದೆ.

ಯಮಕನಮರಡಿ ಪೊಲೀಸ್ ಠಾಣೆಯ PSI ಆರ್.ವಿ. ಪಾಟೀಲ್ ದೂರಿನ ಅನ್ವಯ ದೂರು ದಾಖಲಿಸಲಾಗಿದೆ. ನಿನ್ನೆ ನಡೆದ ಪ್ರತಿಭಟನೆಯಲ್ಲಿ ಪೊಲೀಸರನ್ನು ಕೊಲೆ ಮಾಡುವ ಉದ್ದೇಶದಿಂದ ಕಲ್ಲು ತೂರಾಟ ನಡೆಸಿ, ಹಲ್ಲೆ ಮಾಡಿ ತೀವ್ರ ಗಾಯಗೊಳಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. 11 ಜನ ಪೊಲೀಸ್ ಸಿಬ್ಬಂದಿ. ಆರೋಪಿಗಳು ಕಲ್ಲು ತೂರಾಟದ ವೇಳೆ ಎರಡು ಪೊಲೀಸ್ ಬಸ್ಗಳು ಮತ್ತು ನಾಲ್ಕು ಸರ್ಕಾರಿ ಬಸ್ಗಳಿಗೆ ಹಾನಿ ಮಾಡಿರುವುದು ದೃಢಪಟ್ಟಿದೆ. ಇದರಿಂದ ಸಾರ್ವಜನಿಕ ಆಸ್ತಿಗೆ ಭಾರೀ ನಷ್ಟ ಉಂಟಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ದಾಳಿಕೋರರ ಮೇಲೆ ಭಾರತೀಯ ನ್ಯಾಯ ಸಂಹಿತೆ (BNS) ಕಾಯ್ದೆಯಡಿ ಹಲವು ಗಂಭೀರ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. BNS ಕಾಯ್ದೆಯಡಿ 189(2), 191(2), 191(3), 285, 132, 121(1), 121(2), 109, 324, 194. ಕೇಂದ್ರ ಮತ್ತು ರಾಜ್ಯ ಸರ್ಕಾರದ ನೌಕರರ ಮೇಲಿನ ಹಲ್ಲೆ, ಕೊಲೆ ಯತ್ನ, ಕಾನೂನುಬಾಹಿರ ಗುಂಪುಗಾರಿಕೆ ಮತ್ತು ಸಾರ್ವಜನಿಕ ಆಸ್ತಿ ಹಾನಿ ನಿಯಮಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ಕಲ್ಲು ತೂರಾಟ ನಡೆಸಿರುವ 11 ಆರೋಪಿಗಳನ್ನು ಪತ್ತೆಹಚ್ಚಲು ವಿಶೇಷ ತಂಡವನ್ನು ರಚಿಸಲಾಗಿದೆ. ಸಿಸಿಟಿವಿ (CCTV) ದೃಶ್ಯಗಳು. ಮೊಬೈಲ್ ಮತ್ತು ಕ್ಯಾಮೆರಾಗಳಲ್ಲಿ ಸೆರೆಯಾದ ಘಟನೆಯ ದೃಶ್ಯಾವಳಿಗಳ ಆಧಾರದ ಮೇಲೆ ಶೋಧ ಕಾರ್ಯ ತೀವ್ರಗೊಳಿಸಲಾಗಿದೆ. ಸಾರ್ವಜನಿಕ ಆಸ್ತಿ ನಾಶ ಮತ್ತು ಕರ್ತವ್ಯ ನಿರತ ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಈ ಪ್ರಕರಣ ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಇದನ್ನೂ ಓದಿ : ಐಶ್ವರ್ಯ ರಂಗರಾಜನ್ ಕಂಠಸಿರಿಯಲ್ಲಿ ಮತ್ತೊಂದು ಹಿಟ್ ಸಾಂಗ್ – ‘ಧರ್ಮಂ’ ಚಿತ್ರದ ‘ನಾನು ದಿಲ್ಲಿ ಹಳ್ಳಿ’ ಐಟಂ ಹಾಡಿಗೆ ಭರ್ಜರಿ ರೆಸ್ಪಾನ್ಸ್!







