ಬೆಂಗಳೂರು : ಲಿಫ್ಟ್ನಲ್ಲಿ ನಾಯಿಮರಿಯನ್ನು ನೆಲಕ್ಕೆ ಬಡಿದು ಕೊಲೆ ಮಾಡಿದ್ದ ಮಹಿಳೆಯನ್ನು ಬಾಗಲೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಪುಷ್ಪಲತಾ ಬಂಧಿತ ಮನೆಕೆಲಸದಾಕೆ.
ಶ್ವಾನದ ಮಾಲೀಕರ ದೂರಿನ ಮೇರೆಗೆ ತನಿಖೆಗಿಳಿದ ಪೊಲೀಸರಿಗೆ ಪುಷ್ಪಲತಾ ನಾಯಿ ಕೊಲೆ ಮಾಡಿದ್ದಾಳೆ ಅನ್ನೋದು ಗೊತ್ತಾಗಿದೆ. ರಾಶಿಕಾ ಎಂಬವರು ತಮ್ಮ ‘ಗೂಸಿ’ ಹೆಸರಿನ ನಾಯಿಯನ್ನು ನೋಡಿಕೊಳ್ಳಲು ಪುಷ್ಪಲತಾಳನ್ನು ಮನೆ ಕೆಲಸದಾಕೆಯಾಗಿ ನೇಮಿಸಿಕೊಂಡಿದ್ದರು. ಇದಕ್ಕಾಗಿ ಪುಷ್ಪಲತಾಳಿಗೆ ಮಾಸಿಕ 23 ಸಾವಿರ ರೂ. ಸಂಬಳವನ್ನೂ ನೀಡುತ್ತಿದ್ದರು.

ಪುಷ್ಪಲತಾ ಲಿಫ್ಟ್ನಲ್ಲಿ ನಾಯಿಯನ್ನು ಅಮಾನವೀಯವಾಗಿ ಕೊಲೆ ಮಾಡಿದ್ದಳು. ಬಟ್ಟೆ ಒಗೆಯುವಂತೆ ನಾಯಿಯನ್ನು ಹಿಡಿದು ನೆಲಕ್ಕೆ ಬಡಿದು ಉಸಿರುಗಟ್ಟಿಸಿ ಸಾಯಿಸಿದ್ದಾಳೆ. ಈ ಕೃತ್ಯದ ನಂತರ ನಾಯಿ ಸತ್ತು ಹೋಗಿದೆ ಎಂದು ಮಾಲೀಕರಿಗೆ ಸುಳ್ಳು ಕಥೆ ಹೇಳಿ ಆಕೆಯನ್ನು ನಂಬಿಸಲು ಯತ್ನಿಸಿದ್ದಾಳೆ. ನಾಯಿಯ ಸಾವಿನ ಬಗ್ಗೆ ಮಾಲೀಕರಿಗೆ ಅನುಮಾನ ಮೂಡಿದ್ದು, ಕಟ್ಟಡದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಪುಷ್ಪಲತಾಳ ಕ್ರೂರ ಕೃತ್ಯ ಬೆಳಕಿಗೆ ಬಂದಿದೆ.
ದೃಶ್ಯಗಳಲ್ಲಿ ನಾಯಿಯನ್ನು ಕೊಲೆ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ತಕ್ಷಣ ರಾಶಿಕಾ, ಆರೋಪಿತೆ ಪುಷ್ಪಲತಾ ವಿರುದ್ಧ ಬಾಗಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನನ್ವಯ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ನಾಯಿಯನ್ನ ಎಷ್ಟು ಎಳೆದ್ರೂ ಲಿಫ್ಟ್ ಒಳಗೆ ಬರಲಿಲ್ಲ. ಹೀಗಾಗಿ ಕೋಪಗೊಂಡು ನೆಲಕ್ಕೆ ಬಡಿದಿದ್ದಾಗಿ ಆರೋಪಿತೆ ಪುಷ್ಪಲತಾ ಹೇಳಿದ್ದಾಳೆ.







