ಇಂದಿನಿಂದ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಜನಾಕ್ರೋಶ ಯಾತ್ರೆ.. ಜಿಲ್ಲೆ ಜಿಲ್ಲೆಯಲ್ಲೂ ಪಾದಯಾತ್ರೆ!

ಬೆಂಗಳೂರು : ರಾಜ್ಯ ಸರ್ಕಾರದ ವಿರುದ್ಧ ಇಂದಿನಿಂದ ಬಿಜೆಪಿಯು 2ನೇ ಹಂತದ ಹೋರಾಟ ಕೈಗೆತ್ತಿಕೊಂಡಿದೆ. ಜನಾಕ್ರೋಶ ಯಾತ್ರೆ ಹೆಸರಿನಲ್ಲಿ ಸರ್ಕಾರದ ವಿರುದ್ಧ ನಾಲ್ಕು ಹಂತಗಳಲ್ಲಿ ಹೋರಾಟಕ್ಕೆ ಬಿಜೆಪಿ ಮುಂದಾಗಿದ್ದು, ಇಂದು ಮೈಸೂರಿನಲ್ಲಿ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಜನಾಕ್ರೋಶ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಸರ್ಕಾರದ ದರ ಏರಿಕೆ ನೀತಿ, ಭ್ರಷ್ಟಾಚಾರ, ಕಮೀಷನ್, ದುರಾಡಳಿತ, ಕಾನೂನು ಅವ್ಯವಸ್ಥೆ, ಮುಸ್ಲಿಂ ಓಲೈಕೆ ಖಂಡಿಸಿ ಜನಾಕ್ರೋಶ ಯಾತ್ರೆ ನಡೆಯಲಿದೆ.

ಮೈಸೂರಿನಿಂದ ಜನಾಕ್ರೋಶಕ್ಕೆ ಯಾತ್ರೆಗೆ ಕಮಲ ಪಾಳಯ ಸಜ್ಜಾಗಿದ್ದು, ಈ ಮೂಲಕ ರಾಜ್ಯಾದ್ಯಂತ ಹೋರಾಟಕ್ಕೆ ತಂತ್ರ ಹೆಣೆಯಲಾಗಿದೆ. ಇಂದು ಮೈಸೂರು ಮತ್ತು ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಯಲಿದ್ದು, ಜಿಲ್ಲಾ ಕೇಂದ್ರದಲ್ಲಿ ಒಂದೆರಡು ಕಿಲೋ ಮೀಟರ್ ಪಾದಯಾತ್ರೆ ನಡೆಸಿ, ಪ್ರತಿಭಟನಾ ಸಮಾವೇಶ ನಡೆಸಲು ಕೇಸರಿ ಪಡೆ ತೀರ್ಮಾನಿಸಿದೆ. ಸುಮಾರು ಹದಿನೈದು ದಿನಗಳ ಕಾಲ ನಡೆಯುವ ಈ ಹೋರಾಟದಲ್ಲಿ ಪ್ರತಿ ದಿನ ಎರಡು ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಲು ಬಿಜೆಪಿ ತಯಾರಿ ಮಾಡಿಕೊಂಡಿದೆ.

ನಿನ್ನೆಯಷ್ಟೇ ವಿಪಕ್ಷ ನಾಯಕ ಆರ್.ಅಶೋಕ್ ಜನಾಕ್ರೋಶ ಯಾತ್ರೆಯ ಲೋಗೋ ಬಿಡುಗಡೆ ಮಾಡಿದ್ದು, ನಾಲ್ಕು ಹಂತದಲ್ಲಿ ಈ ಹೋರಾಟ ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ಒಂದು ಜಿಲ್ಲೆಯಲ್ಲಿ ಹಾಗೂ ಮಧ್ಯಾಹ್ನ 3 ಗಂಟೆಗೆ ಇನ್ನೊಂದು ಜಿಲ್ಲೆಯಲ್ಲಿ ಜನಾಕ್ರೋಶ ಯಾತ್ರೆ ನಡೆಯಲಿದೆ. ಒಟ್ಟಾರೆ ಸರ್ಕಾರದ ವೈಫಲ್ಯವನ್ನು ಜನರ ಮುಂದಿಡಲು ಬಿಜೆಪಿ ಜನಾಕ್ರೋಶ ಯಾತ್ರೆ ಆರಂಭಿಸಿದೆ. ಆದ್ರೆ ಈ ಜನಾಕ್ರೋಶ ಕೇವಲ ಫೋಟೋಗಳಿಗಷ್ಟೇ ಸಿಮೀತವಾಗದೇ ಜನರ ನೈಜ ಸಿಟ್ಟನ್ನು ಸರ್ಕಾರಕ್ಕೆ ಮುಟ್ಟಿಸುತ್ತಾ? ಈ ಜನಾಕ್ರೋಶ ಯಾತ್ರೆಯಿಂದ ಸರ್ಕಾರ ದರ ಏರಿಕೆಯ ನೀತಿಯಲ್ಲಿ ಸಡಿಲ ಮಾಡುತ್ತಾ ಕಾದು ನೋಡಬೇಕಾಗಿದೆ.

ಎಲ್ಲಿ, ಯಾವಾಗ ಜನಾಕ್ರೋಶ ಯಾತ್ರೆ?

  • ಏಪ್ರಿಲ್ 7-12ರ ವರೆಗೆ ಮೊದಲ ಹಂತದ ಜನಾಕ್ರೋಶ ಯಾತ್ರೆಯು ಮೈಸೂರು/ಚಾಮರಾಜನಗರ, ಮಂಡ್ಯ,/ಹಾಸನ, ಕೊಡಗು/ಮಂಗಳೂರು, ಉಡುಪಿ/ ಚಿಕ್ಕಮಗಳೂರು, ಶಿವಮೊಗ್ಗ/ಉತ್ತರ ಕನ್ನಡ ಜಿಲ್ಲೆಗಳಲ್ಲಿ ನಡೆಯಲಿದೆ.
  • ಏಪ್ರಿಲ್ 15-18ರ ವರೆಗೆ ಎರಡನೇ ಹಂತದ ಜನಾಕ್ರೋಶ ಯಾತ್ರೆಯು ನಿಪ್ಪಾಣಿ/ಬೆಳಗಾವಿ/ಹುಬ್ಬಳ್ಳಿ, ಬೀದರ್/ಕಲಬುರ್ಗಿ, ವಿಜಯಪುರ/ಬಾಗಲಕೋಟೆಗಳಲ್ಲಿ ನಡೆಯಲಿದೆ.
  • ಏಪ್ರಿಲ್ 21-25ರ ವರೆಗೆ ಮೂರನೇ ಹಂತದ ಯಾತ್ರೆಯು ಯಾದಗಿರಿ/ರಾಯಚೂರು, ಬಳ್ಳಾರಿ/ವಿಜಯನಗರ, ಕೊಪ್ಪಳ/ಗದಗ, ಹಾವೇರಿ/ದಾವಣಗೆರೆ, ಚಿತ್ರದುರ್ಗ/ತುಮಕೂರು ಜಿಲ್ಲೆಗಳಲ್ಲಿ ನಡೆಯಲಿದೆ
  • ಏಪ್ರಿಲ್ 27- ಮೇ 03ರ ವರೆಗೆ ನಾಲ್ಕನೇ ಹಂತದ ಯಾತ್ರೆ ಚಿಕ್ಕಬಳ್ಳಾಪುರ/ಕೋಲಾರ, ಬೆಂಗಳೂರು/ಬೆಂಗಳೂರು ಗ್ರಾಮಾಂತರ/ರಾಮನಗರ ಜಿಲ್ಲೆಗಳಲ್ಲಿ ನಡೆಯಲಿದೆ.

ಇದನ್ನೂ ಓದಿ : ಇಲಾಖೆಯಲ್ಲಿ ಯಾವುದೇ ನೇಮಕಾತಿ ನಡೆಯುತ್ತಿಲ್ಲ, ಮೋಸ ಹೋಗಬೇಡಿ – ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮನವಿ

 

 

Btv Kannada
Author: Btv Kannada

Read More

Read More