‘ಎಂಪುರಾನ್’ ನಿರ್ಮಾಪಕ ಗೋಕುಲಂ ಗೋಪಾಲನ್ ಮನೆ, ಕಚೇರಿಗಳ ಮೇಲೆ ED ರೇಡ್ – 1.50 ಕೋಟಿ ನಗದು, ಮಹತ್ವದ ದಾಖಲೆಗಳು ವಶ!

ಈ ವರ್ಷದ ಬಹುನಿರೀಕ್ಷಿತ ಚಿತ್ರ ಎಂಪುರಾನ್ ಬಿಡುಗಡೆಯಾಗಿ ದೊಡ್ಡ ಹಿಟ್ ಆಗಿ ಹೊರಹೊಮ್ಮಿದೆ. ಚಿತ್ರದ ವಿರುದ್ಧ ಹಲವಾರು ವಿವಾದಗಳು ಎದ್ದರೂ ಸಹ ಬಾಕ್ಸ್ ಆಫೀಸ್‌ನಲ್ಲಿ ಮಾತ್ರ ಅಬ್ಬರ ಚೂರೂ ಕಡಿಮೆ ಆಗಿಲ್ಲ. ಕೇರಳ ರಾಜಕೀಯವನ್ನು ಉತ್ತರ ಭಾರತದ ಕೋಮುವಾದಿ ನಾಯಕರು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಯತ್ನಿಸುವ ವಿಭಿನ್ನ ಕಥಾಹಂದರವಿರುವ ಪೊಲಿಟಿಕಲ್ ಎಂಟರ್‌ಟೈನರ್ ಇದಾಗಿದ್ದು, ಸೌತ್ ಸಿನಿ ಪ್ರೇಕ್ಷಕರು ವಿವಾದಗಳಿಗೆ ಕಿವಿಗೊಡದೇ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ.

ಅಂದಹಾಗೆ ಚಿತ್ರದ ಆರಂಭದಲ್ಲಿ ಬರುವ ರೈಲಿಗೆ ಬೆಂಕಿ ಹಚ್ಚುವ ದೃಶ್ಯ ಗೋದ್ರಾ ಹತ್ಯಾಕಾಂಡವನ್ನು ಹೋಲುವ ಹಾಗಿದ್ದು, ಗುಜರಾತ್ ಗಲಭೆಯಲ್ಲಿ ಹಲವಾರು ಮುಸ್ಲಿಮರ ಸಾವಿಗೆ ಕಾರಣನಾಗಿದ್ದ ಬಾಬು ಭಜರಂಗಿ ಹೆಸರನ್ನು ಚಿತ್ರದಲ್ಲಿ ತುಸು ವಿಭಿನ್ನವಾಗಿ ಬಳಸಲಾಗಿತ್ತು. ಇದೇ ಕಾರಣಕ್ಕೆ ಚಿತ್ರದ ವಿರುದ್ಧ ಒಂದು ಪಂಥ ತಿರುಗಿಬಿದ್ದಿತ್ತು. ಕೊನೆಗೆ ಚಿತ್ರದ ಕೆಲವೊಂದಷ್ಟು ದೃಶ್ಯಗಳಿಗೆ ಕತ್ತರಿ ಹಾಕಿದ ಚಿತ್ರತಂಡ ಖಳನಾಯಕನ ಹೆಸರನ್ನು ಬದಲಿಸುವುದಾಗಿ ಹೇಳಿತ್ತು. ಇಷ್ಟರಮಟ್ಟಿಗೆ ವಿವಾದ ಎಬ್ಬಿಸಿದ್ದ ಎಂಪುರಾನ್ ನಿರ್ಮಾಪಕ ಆಶೀರ್ವಾದ್ ಸಿನಿಮಾಸ್‌ನ ಮಾಲೀಕ ಗೋಕುಲಂ ಗೋಪಾಲನ್ಗೆ ಏಪ್ರಿಲ್ 4ರಂದು ಜಾರಿ ನಿರ್ದೇಶನಾಲಯದ(ED) ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ.

ಗೋಪಾಲನ್ ಒಡೆತನದ ಶ್ರೀ ಗೋಕುಲಂ ಚಿಟ್ ಫಂಡ್ ಕಂಪನಿಯಲ್ಲಿ ಅಕ್ರಮ ಹಣ ವರ್ಗಾವಣೆಯಾಗಿದೆ ಎಂಬ ಆರೋಪದ ಮೇರೆಗೆ ಇಡಿ ಅಧಿಕಾರಿಗಳು ಗೋಪಾಲನ್‌ಗೆ ಸೇರಿದ ಕೇರಳ ಹಾಗೂ ತಮಿಳುನಾಡಿನಲ್ಲಿನ ಕಂಪನಿ ಹಾಗೂ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿದೆ. ದಾಳಿ ವೇಳೆ ಸುಮಾರು 1.50 ಕೋಟಿ ರೂ. ನಗದು ಹಾಗೂ ಕೆಲವು ಮಹತ್ವದ ದಾಖಲೆಗಳು ವಶವಾಗಿವೆ ಎಂದು ಜಾರಿ ನಿರ್ದೇಶನಾಲಯ(ಇ.ಡಿ)ದ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ : ಮುಂದಿನ 5 ದಿನ ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಎಚ್ಚರಿಕೆ!

Btv Kannada
Author: Btv Kannada

Read More