ಬೆಂಗಳೂರು : ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯನಟ, ರಂಗಕರ್ಮಿ ರಾಜು ತಾಳಿಕೋಟೆ ಅವರು ನಿನ್ನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ನಟನ ಅಂತಿಮ ಸಂಸ್ಕಾರ ಇಂದು ಸಂಜೆ ವಿಜಯಪುರ ಜಿಲ್ಲೆಯ ಚಿಕ್ಕಸಿಂಧಗಿ ಗ್ರಾಮದ ಅವರ ತೋಟದಲ್ಲಿ ನಡೆಯಲಿದೆ.
ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನಲ್ಲಿ ರಾಜು ತಾಳಿಕೋಟೆ ಚಿತ್ರಿಕರಣದಲ್ಲಿ ಭಾಗಿಯಾಗಿದ್ದರು. ಭಾನುವಾರ ರಾತ್ರಿ ಚಿತ್ರೀಕರಣ ಮುಗಿಸಿ ರಾತ್ರಿ 11:59 ರ ವೇಳೆಗೆ ವಿಶ್ರಾಂತಿಯಲ್ಲಿದ್ದಾಗ ಉಸಿರಾಟದ ಸಮಸ್ಯೆಯಾಗಿದೆ. ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಕಸ್ತೂರ್ಬಾ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ಕರೆ ತರಲಾಗಿತ್ತು. ವೆಂಟಿಲೇಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾರೆ.
ನೂರಾರು ಅಭಿಮಾನಿಗಳು ರಾಜು ತಾಳಿಕೋಟೆ ಮೃತ ದೇಹದ ದರ್ಶನಕ್ಕೆ ಬಂದಿದ್ದು, ಮೃತ ದೇಹ ಮಣಿಪಾಲ ಕೆಎಂಸಿಯಿಂದ ಧಾರವಾಡದತ್ತ ಹೊರಟಿದೆ. ಇನ್ನು ಕೆಲವೇ ಕ್ಷಣಗಳಲ್ಲಿ ತಾಳಿಕೋಟೆ ಪಾರ್ಥಿವ ಶರೀರ ಧಾರವಾಡ ತಲುಪಲಿದ್ದು, ಧಾರವಾಡ ರಂಗಾಯಣ ಆವರಣದಲ್ಲಿ ರಾಜುತಾಳಿಕೋಟೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ ರಾಜು ತಾಳಿಕೋಟೆ ಹುಟ್ಟೂರು ಚಿಕ್ಕಸಿಂಧಗಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.
ರಾಜುತಾಳೀಕೋಟೆ ಅವರು ಈ ಹಿಂದೆ ಎರಡು ಬಾರಿ ಹೃದಯಾಘಾತಕ್ಕೊಳಗಾಗಿದ್ದರು. ಉತ್ತರ ಕರ್ನಾಟಕ ಭಾಗದಲ್ಲಿ ಕಳೆದ 35 ವರ್ಷದಿಂದ ನಾಟಕ ಮಾಡುತ್ತಿದ್ದ ತಾಳಿಕೋಟೆ, ನಾಟಕದ ಜೊತೆ ಸುಮಾರು 70 ಕನ್ನಡ ಚಿತ್ರದಲ್ಲಿ ನಟಿಸಿದ್ದಾರೆ. ರಾಜುತಾಳಿಕೋಟೆ ಅವರು ಧಾರವಾಡ ರಂಗಾಯಣದ ನಿರ್ದೇಶಕರಾಗಿದ್ದರು.
ಇದನ್ನೂ ಓದಿ : ಬೆಳ್ಳಂಬೆಳಗ್ಗೆ ಭಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್ – ಬೆಂಗಳೂರು ಸೇರಿ 8 ಜಿಲ್ಲೆಗಳಲ್ಲಿ ‘ಲೋಕಾ’ ರೇಡ್!







