ಬೆಂಗಳೂರು : ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್ ಅವರ ಬೆಂಗಾವಲು ವಾಹನ ಚಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 33 ವರ್ಷದ ಶರಣಗೌಡ ರಾಮಗೋಳ್ ಬೆಂಗಳೂರಿನ ಬಾಪೂಜಿನಗರದ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.
ನಿನ್ನೆ ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶರಣಗೌಡಗೆ ಎರಡು ಹೆಣ್ಣ ಮಕ್ಕಳು ಇದ್ದಾರೆ. ಇನ್ನು ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಕಳೆದ ಐದು ವರ್ಷಗಳಿಂದ ಅಶೋಕ್ ಅವರ ಬೆಂಗಾವಲು ವಾಹನ ಚಾಲಕನಾಗಿ ಶರಣಗೌಡ ಕರ್ತವ್ಯ ನಿರ್ವಹಿಸುತ್ತಿದ್ದರು. ಸದ್ಯ ಶರಣಗೌಡ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಈ ಬಗ್ಗೆ ಆರ್.ಅಶೋಕ್ ಪ್ರತಿಕ್ರಿಯಿಸಿ, ಇವಾಗ ವಿಚಾರ ಗೊತ್ತಾಯ್ತು. ನಾನು ಎರಡು ದಿನ ಊರಲ್ಲಿ ಇರಲಿಲ್ಲ. ವಿಚಾರ ತಿಳಿದ ಕೂಡಲೇ ಇಲ್ಲಿಗೆ ಬಂದೆ. ನನ್ನ ಜೊತೆ ಎರಡು ವರ್ಷಗಳಿಂದ ಕೆಲಸ ಮಾಡಿದ್ದಾರೆ. ತುಂಬಾ ಸೈಲೆಂಟ್ ವ್ಯಕ್ತಿ. ಮಾತು ಬಹಳ ಕಡಿಮೆ. ತನ್ನ ಕೆಲಸ ಆಯ್ತು, ತಾನಾಯ್ತು ಅಂತ ಇದ್ದವರು. ಇವತ್ತು ಡ್ಯೂಟಿಗೆ ಬರಲ್ಲ, ಮಂತ್ರಾಲಯಕ್ಕೆ ಹೋಗುತ್ತೇನೆ ಎಂದು ಹೇಳಿದ್ದರಂತೆ ಎಂದು ಬೇಸರ ವ್ಯಕ್ತಪಡಿಸಿದರು.
ಫ್ಯಾಮಿಲಿ ವೆಲ್ ಆಫ್ ಇದೆ, ಹಣಕಾಸಿನ ಸಮಸ್ಯೆ ಇರಲಿಲ್ಲ. ಈ ನವರಾತ್ರಿ ಹಬ್ಬಕ್ಕೆ ನಾನು ಸ್ವೀಟ್ಸ್ , ಬಟ್ಟೆ ಕೊಟ್ಟಿದ್ದೆ, ಆಗ ಅಚಾನಕ್ ಆಗಿ ನನಗೆ ನಮಸ್ಕಾರ ಮಾಡಿದ್ರು, ಸಾಮಾನ್ಯವಾಗಿ ಪೊಲೀಸ್ ಹಾಗೆ ಯಾರು ಕಾಲಿಗೆ ಬೀಳಲ್ಲ. ಆದರೆ ಅವತ್ತು ನನಗೆ ನಮಸ್ಕಾರ ಮಾಡಿದ್ರು. ಅಂತಹ ಒಳ್ಳೆಯ ವ್ಯಕ್ತಿಯನ್ನು ಇಂದು ಕಳೆದುಕೊಂಡಿದ್ದೇವೆ. ಡಿಸಿಪಿ ಜೊತೆ ಮಾತನಾಡಿದ್ದೇನೆ. ಡೆತ್ ನೋಟ್ ಏನಾದ್ರೂ ಸಿಕ್ಕಿದೆಯಾ ಎಂದು ನೋಡಬೇಕು ಎಂದು ಹೇಳಿದರು.
ಇದನ್ನೂ ಓದಿ : ಕನ್ನಡ ಹೋರಾಟಗಾರರಿಗೆ ಅವಮಾನ ಮಾಡಿದ ಮೆಂಟಲ್ ಸೋನು ವಿರುದ್ಧ ಭುಗಿಲೆದ್ದ ಆಕ್ರೋಶ – ಹುಡುಕಿಕೊಂಡು ಬಂದು ಹೊಡೆಯುತ್ತೇವೆ ಎಂದ ಹೋರಾಟಗಾರರು!







