ಇಂದು ದೇಶಾದ್ಯಂತ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರ ಪ್ರಭುವಿನ ಹುಟ್ಟುಹಬ್ಬದ ಸಂಭ್ರಮ ಮನೆ ಮಾಡಿದೆ. ಭಕ್ತಿ, ಶ್ರದ್ಧೆ, ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಶ್ರೀರಾಮ ಮತ್ತು ಆಂಜನೇಯ ದೇವಸ್ಥಾನಗಳನ್ನು ವಿಶೇಷವಾಗಿ ಸಿಂಗರಿಸಲಾಗಿದ್ದು, ದೇವಾಲಯಗಳಲ್ಲಿ ವಿಶೇಷ ಪೂಜೆ ಮತ್ತು ಅಭಿಷೇಕ ಕಾರ್ಯಕ್ರಮಗಳು ನಡೆಯುತ್ತಿವೆ. ಭಕ್ತರು ಬೆಳಗಿನಿಂದಲೇ ಸರತಿ ಸಾಲಲ್ಲಿ ನಿಂತು ದೇವರ ದರ್ಶನ ಪಡೆಯುತ್ತಿದ್ದಾರೆ.
ಹಿಂದೂ ಹಬ್ಬಗಳಲ್ಲಿ ರಾಮನವಮಿಯೂ ಕೂಡ ಒಂದು ಪ್ರಮುಖವಾದ ಹಬ್ಬ. ರಾಮ ನವಮಿಯನ್ನು ಶ್ರೀ ರಾಮನ ಜನ್ಮದಿನವನ್ನಾಗಿ ಆಚರಿಸಲಾಗುತ್ತದೆ. ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ತಿಥಿಯಲ್ಲಿ ಅಂದರೆ ಚೈತ್ರ ಮಾಸದ ಒಂಬತ್ತನೇ ದಿನದಂದು ಶ್ರೀ ರಾಮನವಮಿ ಆಚರಿಸಲಾಗುತ್ತದೆ. ಅಥವಾ ಯುಗಾದಿ ಹಬ್ಬದ ಎಂಟು ದಿನಗಳ ನಂತರ ರಾಮನವಮಿ ಆಚರಿಸಲಾಗುತ್ತದೆ.
ರಾಮನವಮಿ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಸಂಭ್ರಮ ಮುಗಿಲು ಮುಟ್ಟಿದ್ದು, ಅಯೋಧ್ಯೆ ರಾಮಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಯಾಗಿರುವ ರಾಮಲಲ್ಲಾನ ದರ್ಶನಕ್ಕೆ ಸಾಗರೋಪಾದಿಯಲ್ಲಿ ಭಕ್ತರು ಹರಿದು ಬರುತ್ತಿದ್ದಾರೆ. ಬಾಲರಾಮನ ದರ್ಶನ ಪಡೆದು ಭಕ್ತಿಯಲ್ಲಿ ತಲ್ಲೀನರಾಗುತ್ತಿದ್ದಾರೆ. ಇಂದು ಸೂರ್ಯವಂಶಿ ಬಾಲ ರಾಮನ ಹಣೆಯನ್ನು ಸೂರ್ಯರಶ್ಮಿ ಸ್ಪರ್ಶಿಸಲಿದೆ. ಸೂರ್ಯನ ಕಿರಣಗಳು ರಾಮನ ವಿಗ್ರಹದ ಹಣೆಯ ಮೇಲೆ ಬೀಳುತ್ತಿದ್ದಂತೆ ಸೂರ್ಯ ತಿಲಕ ರಚನೆಯಾಗಲಿದೆ. ಈ ಅದ್ಭುತ ದೃಶ್ಯ ಕಣ್ತುಂಬಿಕೊಳ್ಳಲು ಎಲ್ಲರು ಕಾತುರದಿಂದ ಕಾಯುತ್ತಿದ್ದಾರೆ.
ರಾಮನವಮಿ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಅಯೋಧ್ಯೆಯಲ್ಲಿ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿದೆ. ಪ್ರಯಾಗ್ರಾಜ್ನಲ್ಲಿ ನಡೆದಿದ್ದ ಮಹಾಕುಂಭ ಮೇಳಕ್ಕೆ ಮಾಡಿದ್ದ ಭದ್ರತಾ ವ್ಯವಸ್ಥೆ ಸೇರಿದಂತೆ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಬಿಸಿಲ ಝಳ ಹಿನ್ನೆಲೆಯಲ್ಲಿ ರಾಮ ಮಂದಿರಕ್ಕೆ ಭೇಟಿ ನೀಡುವ ಭಕ್ತರಿಗೆ ನೆರಳು ನೀಡಲು ಹನುಮಾನ್ ಗಢಿ, ರಾಮ ಮಂದಿರದ ಪ್ರಮುಖ ಸ್ಥಳಗಳಲ್ಲಿ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಶ್ರೀರಾಮನವಮಿ ದಿನದಂದು ಭಗವಾನ್ ಶ್ರೀರಾಮ ಅವರು ದಶರಥ ಮಹಾರಾಜ ಮತ್ತು ಕೌಸಲ್ಯಾದೇವಿಯ ಪುತ್ರನಾಗಿ ಅಯೋಧ್ಯೆಯಲ್ಲಿ ಜನಿಸಿದ. ಈ ಹಬ್ಬದ ಆಚರಣೆಯು ಭಾರತದಾದ್ಯಂತ ವ್ಯಾಪಕವಾಗಿದೆ ಮತ್ತು ಅದರದೇ ಆದ ಸಂಪ್ರದಾಯಗಳು ಮತ್ತು ವಿಧಾನಗಳನ್ನು ಹೊಂದಿದೆ. ಶ್ರೀರಾಮನವಮಿಯಂದು ಭಕ್ತರು ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಉಪವಾಸ ಮತ್ತು ಪೂಜೆಗಳನ್ನು ಮಾಡುತ್ತಾರೆ. ಶ್ರೀರಾಮನವಮಿಯನ್ನು ಅಯೋಧ್ಯೆ, ಭದ್ರಾಚಲಂ, ರಾಮೇಶ್ವರಂ ಮುಂತಾದ ಪವಿತ್ರ ಸ್ಥಳಗಳಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ.
ಶ್ರೀರಾಮ ನವಮಿಯಂದು ಭಕ್ತರು ಉಪವಾಸ ಮಾಡಿ ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ರಾಮಾಯಣ ಪಾರಾಯಣ ಮಾಡುವುದು ಈ ಹಬ್ಬದ ಇನ್ನೊಂದು ವಿಶೇಷ. ಜೊತೆಗೆ ಭಜನೆ ರಾಮನ ಕೀರ್ತನೆಗಳನ್ನು 30 ಪಠಿಸುತ್ತಾರೆ. ಅನೇಕ ಕಡೆಗಳಲ್ಲಿ ರಾಮನ ದೇಗುಲಗಳಲ್ಲಿ ಕೀರ್ತನೆ, ರಥೋತ್ಸವ, ಪಲ್ಲಕ್ಕಿ ಉತ್ಸವ ಹಾಗೂ ಜಾತ್ರೆಯನ್ನು ಆಯೋಜಿಸಲಾಗುತ್ತದೆ. ಕೆಲವು ಕಡೆ 9 ದಿನದ ರಾಮನ ಉತ್ಸವವನ್ನು ಆಚರಿಸಲಾಗುತ್ತದೆ. ಸಾಮಾನ್ಯವಾಗಿ ರಾಮ ಪಟ್ಟಾಭಿಷೇಕ ಹಾಗೂ ರಾಮ ಪಂಚಾಯತನದ ಪಟವನ್ನು ಇಟ್ಟು ಪೂಜೆ ಮಾಡುತ್ತಾರೆ. ರಾಮನವಮಿಯಂದು ಪಾನಕ ಕೋಸಂಬರಿ ನೈವೇದ್ಯ ಇಟ್ಟು ಪೂಜೆ ಮಾಡೋದು ವಿಶೇಷ. ಇನ್ನು ಕೆಲವರು ರಾಮನವಮಿಯಂದು ರಾಮ ನಾಮ ಬರೆಯುತ್ತಾರೆ.
ಇದನ್ನೂ ಓದಿ : ದಾವಣಗೆರೆಯಲ್ಲಿ ಕಾರು-ಖಾಸಗಿ ಬಸ್ ನಡುವೆ ಭೀಕರ ಅಪಘಾತ – ಮೂವರ ದುರ್ಮರಣ!
