ಮೆಟ್ರೋ ನಿಲ್ದಾಣಕ್ಕೆ ʻಬಸವಣ್ಣʼ ಹೆಸರು – ಕೇಂದ್ರಕ್ಕೆ ಶಿಫಾರಸ್ಸು ಮಾಡುವುದಾಗಿ ಘೋಷಿಸಿದ ಸಿಎಂ!

ಬೆಂಗಳೂರು : ಬೆಂಗಳೂರಿನ ನಮ್ಮ ಮೆಟ್ರೋಗೆ “ಬಸವ ಮೆಟ್ರೋ” ಎಂದು ಮರುನಾಮಕರಣ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.

ವಿಶ್ವಗುರು ಬಸವಣ್ಣ ಅವರನ್ನು ʻಕರ್ನಾಟಕದ ಸಾಂಸ್ಕೃತಿಕ ನಾಯಕʼ ಎಂದು ಘೋಷಿಸಿದ ವರ್ಷಾಚರಣೆ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ‘ಬಸವ ಸಂಸ್ಕೃತಿ ಅಭಿಯಾನ-2025’ರ ಸಮಾರೋಪ ಸಮಾರಂಭದಲ್ಲಿಂದು ಸಿಎಂ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಲಾಯಿತು. ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ಬೃಹತ್ ಕಾರ್ಯಕ್ರಮದಲ್ಲಿ ಶರಣ ಸಂಸ್ಕೃತಿಯ 301 ಶರಣರು, ಗುರುಗಳು, ಸ್ವಾಮೀಜಿಗಳ ಸಾನಿಧ್ಯದಲ್ಲಿ ಲಿಂಗಾಯತ ಧರ್ಮ ಚಳವಳಿಯ ಪ್ರಮುಖರು, ಪ್ರಗತಿಪರ ಚಿಂತಕರು, ಹೋರಾಟಗಾರರು ಹಾಗೂ 2 ಲಕ್ಷಕ್ಕೂ ಅಧಿಕ ಶರಣಾನುಯಾಯಿಗಳು ಉಪಸ್ಥಿತರಿದ್ದರು.

ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಸಿಎಂ, ಮುಂದುವರಿದು. ಮುಂದಿನ ವರ್ಷದ ಒಳಗೆ ಅನುಭವ ಮಂಟಪದ ನಿರ್ಮಾಣ ಪೂರ್ತಿ ಮಾಡ್ತೇವೆ. ವಚನ ವಿವಿ ಮಾಡುವ ಬೇಡಿಕೆ ಕೊಟ್ಟಿದ್ದೀರಿ, ಮುಂದಿನ ವರ್ಷದಿಂದ ವಚನ ವಿಶ್ವವಿದ್ಯಾಲಯ ಮಾಡ್ತೇವೆ. ನಾನು ರಾಜಕೀಯದಲ್ಲಿ ಏನು ಮಾತು ಕೊಡ್ತೀನೋ, ಆ‌ ಮಾತು ನಡೆಸಿಕೊಡ್ತೇನೆ ಎಂದು ಆಶ್ವಾಸನೆ ನೀಡಿದರು.

ಸಿಎಂ ಭಾಷಣ ಮಾಡುವ ವೇಳೆಯೇ ನಮ್ಮ ಮೆಟ್ರೋಗೆ ಬಸವಣ್ಣ ಹೆಸರು ಇಡಲು ಆಗ್ರಹ ಕೇಳಿಬಂದಿತು, ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಮೆಟ್ರೋ ನಿಲ್ದಾಣಕ್ಕೆ ನಮ್ಮ ಪಾಲು ಜಾಸ್ತಿ ಇರಬಹುದು. ಆದ್ರೆ ನಮ್ಮ ಮೆಟ್ರೋಗೆ ಬಸವಣ್ಣ ಹೆಸರು ಇಡುವುದು ನಮ್ಮ ಕೈಯಲ್ಲಿಲ್ಲ, ಕೇಂದ್ರ ಸರ್ಕಾರಕ್ಕೆ ಇದರ ಶಿಫಾರಸು ಮಾಡ್ತೇವೆ. ನಮ್ಮದೇ ಸರ್ಕಾರದ ವ್ಯಾಪ್ತಿಯಲ್ಲಿ ಇದ್ದಿದ್ರೆ ಈ ಸ್ಥಳದಲ್ಲೇ ಒಪ್ಪಿಗೆ ಕೊಡ್ತಿದ್ದೆ ಎಂದು ಹೇಳಿದರು.

 

ಇದನ್ನೂ ಓದಿ : ಚಿಕ್ಕಣ್ಣ ನಟನೆಯ ‘ಜೋಡೆತ್ತು’ ಟೈಟಲ್ ಟೀಸರ್ ರಿಲೀಸ್ – ಸಾಥ್ ಕೊಟ್ಟ ಶರಣ್!

Btv Kannada
Author: Btv Kannada

Read More