ನಕಲಿ “ರೇರಾ” ದಾಖಲೆ ಸೃಷ್ಟಿಸಿ ಕೋಟಿ ಕೋಟಿ ದೋಖಾ – ವಂಚಕ ಬಿಲ್ಡರ್ಸ್ ವಿರುದ್ಧ​ 7-8 ಕೇಸ್ ದಾಖಲು!

ಬೆಂಗಳೂರು : ಫ್ಲ್ಯಾಟ್ ಕಟ್ಟಿಸಿಕೊಡ್ತಿವೆಂದು ಕೋಟಿ ಕೋಟಿ ವಂಚಿಸಿರುವ ಆರೋಪದ ಮೇಲೆ ಇಬ್ಬರು ಕಿರಾತಕರ ವಿರುದ್ಧ ತಲಘಟ್ಟಪುರ ಠಾಣೆಯಲ್ಲಿ 7-8 ಕೇಸ್ ದಾಖಲಾಗಿದೆ. ಫೇಕ್ ಅಗ್ರಿಮೆಂಟ್ ಸೃಷ್ಟಿಸಿ ರೇರಾ ಅಗ್ರಿಮೆಂಟ್ (RERA- Real Estate Regularly Authority) ಎಂದು ನಂಬಿಸಿ ಜನರಿಗೆ ಮೋಸ ಮಾಡಿದ್ದಾರೆ.

ಅಜ್ಗರ್ ಮಹಮ್ಮದ್ ಮತ್ತು ಸಂಜಯ್ ಸೂರ್ಯ‌ನಾರಾಯಣ ವಿರುದ್ಧ 60 ಜನರಿಗೆ ₹50 ಕೋಟಿಗೂ ಅಧಿಕ ಹಣ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. ಜನರಿಗೆ ಕೋಟಿ ಕೋಟಿ ವಂಚನೆ ಮಾಡಿ ಇಬ್ಬರು ಕಿರಾತಕರು ಎಸ್ಕೇಪ್ ಆಗಿದ್ದಾರೆ. ಇದೀಗ ಅತ್ತ ಫ್ಲ್ಯಾಟೂ ಇಲ್ಲದೆ, ಇತ್ತ ದುಡ್ಡು ಇಲ್ಲದೆ ಜನರು ಕಂಗಾಲಾಗಿದ್ದಾರೆ.

ಏನಿದು ಪ್ರಕರಣ? ಮಾಂಗಲ್ಯ ವೆಂಚರ್ಸ್ ಪ್ರೈ.ಲಿಮಿಟೆಡ್ ಕಂಪನಿ ಹೆಸರಲ್ಲಿ ವಂಚನೆ ಮಾಡಿರುವ ಆರೋಪವಿದೆ. 2 ಎಕರೆ ಜಾಗದಲ್ಲಿ ಜಾಯಿಂಟ್ ಡೆವಲಪ್ಮೆಂಟ್ ಅಗ್ರೀಮೆಂಟ್ ಮಾಡ್ಕೊಂಡು ಅಪಾರ್ಟ್ಮೆಂಟ್ ನಿರ್ಮಾಣ ಮಾಡಿ ಕೊಡೋದಾಗಿ ಅಜ್ಗರ್ ಮತ್ತು ಸಂಜಯ್ ಜನರಿಗೆ ಪಂಗನಾಮ ಹಾಕಿದ್ದಾರೆ. 2019ರಲ್ಲಿ ಅಪಾರ್ಟ್ಮೆಂಟ್ ಕಟ್ಟಿಸಿ ಕೊಡೊದಾಗಿ ಮಾತುಕತೆ ನಡೆದಿತ್ತು, 2022ರ ಜೂನ್ 30ರೊಳಗಡೆ ಅಪಾರ್ಟ್ಮೆಂಟ್ ಕಟ್ಟಿಸಿ ಕೊಡೊದಾಗಿ ಮೊದಲಿಗೆ ಈ ಇಬ್ಬರು ಭರವಸೆ ನೀಡಿದ್ದರು. ಆದರೆ 2023 ಬಂದ್ರೂ 35% ಕಾಮಗಾರಿಯಾಗದ ಹಿನ್ನೆಲೆ ಅಂದು ಜನರು ದೂರು ನೀಡಿದ್ದರು.

ದೂರಿನ ಆಧಾರದ ಮೇಲೆ 2023ರಲ್ಲಿ ತಲಘಟ್ಟಪುರ ಠಾಣೆಯಲ್ಲಿ ಅಜ್ಗರ್ ಮಹಮ್ಮದ್, ಸಂಜಯ್ ಸೂರ್ಯ‌ನಾರಾಯಣ್ ವಿರುದ್ಧ FIR ದಾಖಲಾಗಿತ್ತು. ಈ ಕೇಸ್​ನಲ್ಲಿ ಇಬ್ಬರು ಅರೆಸ್ಟ್ ಆಗಿ, ಜೈಲು ಸೇರಿದ್ದರು. ಅಂದಿನ FIRನಲ್ಲಿ 60 ಜನರಿಗೆ ಸರಿಸುಮಾರು ₹50 ಕೋಟಿ ವಂಚನೆ ಮಾಡಿರುವ ಬಗ್ಗೆ ಉಲ್ಲೇಖಿಸಲಾಗಿದೆ. 2 ತಿಂಗಳ ಬೇಲ್ ಮೇಲೆ ಜೈಲಿನಿಂದ ಹೊರಬಂದ ಬಳಿಕ ಇಬ್ಬರೂ ಆಸಾಮಿಗಳು ಜನರಿಗೆ ಮತ್ತೊಂದು ಭರವಸೆ ನೀಡಿದರು. ಒಂದಾ ದುಡ್ಡು ಕೊಡ್ತೀವಿ ಇಲ್ಲ ಅಪಾರ್ಟ್ಮೆಂಟ್ ಕಟ್ಟಿಸಿ ಕೊಡ್ತೀವೆಂದರು. ನಂತರ ಅಪಾರ್ಟ್ಮೆಂಟ್ ನಿರ್ಮಾಣ ಕೆಲಸ ಮತ್ತೆ ಶುರು ಮಾಡಿ ಒಂದೇ ತಿಂಗಳಿಗೆ ಮತ್ತೆ ಕೆಲಸ ಬಂದ್ ಮಾಡಿದರು. 2025 ಬಂದ್ರೂ ಇನ್ನೂ ಫ್ಲ್ಯಾಟ್ ಸಿಗಲಿಲ್ಲ. ಈಗ ಅಜ್ಗರ್ ಮಹಮ್ಮದ್, ಸಂಜಯ್ ಸೂರ್ಯ‌ನಾರಾಯಣ್ ಎಸ್ಕೇಪ್ ಆಗಿರೋದರಿಂದ ಫ್ಲ್ಯಾಟ್ ನಂಬಿ ದುಡ್ಡು ಕೊಟ್ಟವರು ಕಂಗಾಲಾಗಿದ್ದಾರೆ.

ಆರೋಪಗಳೇನು? ಅಪಾರ್ಟ್ಮೆಂಟ್ ‌ನಿರ್ಮಾಣ ಮಾಡ್ತೀವೆಂದು 60 ಜನರಿಗೆ ₹50 ಕೋಟಿ ವಂಚನೆ ಮಾಡಿರುವ ಆರೋಪವಿದೆ. ರೇರಾ ಹೆಸರಲ್ಲಿ ನಕಲಿ ಅಗ್ರಿಮೆಂಟ್ ಸೃಷ್ಟಿಸಿ ಜನರಿಗೆ ನಂಬಿಕೆ ದ್ರೋಹ ಮಾಡಿದ್ದು, ರೇರಾ ಅಗ್ರಿಮೆಂಟ್ ನೋಡಿ ಜನರು ನಿಜ ಎಂದು ನಂಬಿದ್ದರು. ಹಾಗಾಗಿ ಜನರು ಬ್ಯಾಂಕ್​ನಿಂದ ಲೋನ್ ತಗೊಂಡು ಇನ್ವೆಸ್ಟ್ ಮಾಡಿದ್ದರು. ₹50 ಕೋಟಿಯ ಪೈಕಿ ಆರೋಪಿಗಳು ಸ್ವಂತ ಅಕೌಂಟ್​ಗೆ ₹6 ಕೋಟಿ, ತಮ್ಮದೇ ಸಹಭಾಗಿತ್ವದ ಮಾಂಗಲ್ಯ ಕನ್ಸ್ಟ್ರಕ್ಷನ್ ಕಂಪನಿಗೆ ₹25 ಕೋಟಿ ವರ್ಗಾವಣೆ ಮಾಡಿಸಿಕೊಂಡಿದ್ದರು. ಆರೋಪಿಗಳು ವರ್ಗಾವಣೆ ಮಾಡಿರುವ ವಿಚಾರ FIRನಲ್ಲಿ ಉಲ್ಲೇಖವಾಗಿದೆ. ಇಬ್ಬರು ಕಿರಾತಕರ ವಿರುದ್ಧ ನಕಲಿ ದಾಖಲೆ ಸೃಷ್ಟಿಸಿ ಜನರಿಗೆ ವಂಚನೆ ಮಾಡಿರುವ ಆರೋಪವಿದೆ.

Btv Kannada
Author: Btv Kannada

Read More