ಬೆಂಗಳೂರು : 26 ವರ್ಷದ ವಿಧವೆ ಜೊತೆ ಲಿವಿಂಗ್ ಟುಗೆದರ್ನಲ್ಲಿದ್ದ 52 ವರ್ಷದ ವ್ಯಕ್ತಿ ಮಧ್ಯೆ ಉಂಟಾದ ಬಿರುಕು ಕೊಲೆಯಲ್ಲಿ ಅಂತ್ಯವಾದ ದಾರುಣ ಘಟನೆ ಹುಳಿಮಾವು ಪೊಲೀಸ್ ಠಾಣಾ ವ್ಯಪ್ತಿಯಲ್ಲಿ ನಡೆದಿದೆ. ವಿಧವೆ ವನಜಾಕ್ಷಿ ಮೃತ ದುರ್ದೈವಿ. ವಿಠಲ ಬಂಧಿತ ಆರೋಪಿ.
ವೃತ್ತಿಯಲ್ಲಿ ಕ್ಯಾಬ್ ಚಾಲಕನಾಗಿದ್ದ ವಿಠಲನಿಗೆ ವನಜಾಕ್ಷಿಯ ಪರಿಚಯವಾಗಿತ್ತು. ಇಬ್ಬರು ಆನೇಕಲ್ ಬಳಿಯ ಮಳೆನಲ್ಲಸಂದ್ರದ ಗ್ರಾಮದ ನಿವಾಸಿಗಳಾಗಿದ್ದರು. ಮೃತ ವನಜಾಕ್ಷಿಗೆ ಮದುವೆಯಾಗಿದ್ದು, ಆಕೆಯ ಗಂಡ ಮೃತಪಟ್ಟಿದ್ದ. ವಿಠಲನಿಗೂ ಇಬ್ಬರು ಪತ್ನಿಯರಿದ್ದರು. ವಿಠಲನ ಮೊದಲ ಪತ್ನಿ ಮೃತಪಟ್ಟಿದ್ದು, ಎರಡನೇ ಪತ್ನಿ ಬೇರೊಬ್ಬರ ಜೊತೆ ಪರಾರಿಯಾಗಿದ್ದಳು.

ಈ ವಿಠಲ ಇಬ್ಬರು ಹೆಂಡತಿಯರ ನಂತರ ವನಜಾಕ್ಷಿಯ ಸಾಂಗತ್ಯ ಬೆಳೆಸಿದ್ದ. ಕಳೆದ ಮೂರ್ನಾಲ್ಕು ವರ್ಷಗಳಿಂದ ವನಜಾಕ್ಷಿ ಜೊತೆ ವಿಠಲ ಲಿವಿಂಗ್ ಟುಗೆದರ್ನಲ್ಲಿದ್ದ. ಮೃತ ವನಜಾಕ್ಷಿ ಇತ್ತೀಚಿಗೆ ವಿಠಲನನ್ನು ಅವಾಯ್ಡ್ ಮಾಡಲು ಶುರು ಮಾಡಿದ್ದಳು. ಅಲ್ಲದೇ ಅದೇ ಗ್ರಾಮದ ಮತ್ತೊಬ್ಬರ ಜೊತೆಗೆ ವನಜಾಕ್ಷಿ ಸಲುಗೆ ಬೆಳೆಸಿಕೊಂಡಿದ್ದಳು. ಕಳೆದೊಂದು ತಿಂಗಳಿನಿಂದ ಇದೇ ವಿಚಾರಕ್ಕೆ ಜಗಳ ಮಾಡ್ತಿದ್ದ ವಿಠಲ, ಕಳೆದ ಶನಿವಾರ ವನಜಾಕ್ಷಿ ತನ್ನ ಮತ್ತೊಬ್ಬ ಸ್ನೇಹಿತನ ಜೊತೆ ಕಾರಿನಲ್ಲಿ ತೆರಳುವನ್ನ ನೋಡಿದ್ದ.

ಬನ್ನೇರುಘಟ್ಟದಿಂದ ಬಸವನಪುರಕ್ಕೆ ಹೊಸ ಸ್ನೇಹಿತನ ಜೊತೆ ಸ್ಯಾಂಟ್ರೋ ಕಾರಲ್ಲಿ ವನಜಾಕ್ಷಿ ತೆರಳುತ್ತಿದ್ದಳು. ಹುಳಿಮಾವು ಠಾಣೆ ವ್ಯಾಪ್ತಿಯ ಹೊಮ್ಮದೇವನಹಳ್ಳಿ ಬಳಿ ಕಾರನ್ನ ಹಿಂಬಾಲಿಸಿದ್ದ ವಿಠಲ, ಪದೇ ಪದೇ ಹಾರ್ನ್ ಮಾಡಿ ಮುಂದೆ ಹೋಗ್ತಿದ್ದ ವನಜಾಕ್ಷಿ ಕೂತಿದ್ದ ಕಾರು ನಿಲ್ಲಿಸುವಂತೆ ಮಾಡಿ ಐದು ಲೀಟರ್ ಪೆಟ್ರೋಲ್ ತಂದಿದ್ದನ್ನು ಏಕಾಏಕಿ ಕಾರಿನ ಮೇಲೆ ಸುರಿಯಲು ಯತ್ನಿಸ್ತಾನೆ.
ಬಳಿಕ ಭಯದಿಂದ ಕಾರಿನಿಂದ ಇಳಿದು ವನಜಾಕ್ಷಿ ಹಾಗೂ ಆಕೆಯ ಸ್ನೇಹಿತ ಓಡಲು ಶುರು ಮಾಡಿದ್ದಾರೆ. ಇಷ್ಟಾದರೂ ಬಿಡದ ವಿಠಲ, ಹಿಂಬಾಲಿಸಿಕೊಂಡು ಹೋಗಿ ವನಜಾಕ್ಷಿ ಮೇಲೆ ಪೆಟ್ರೋಲ್ ಎರಚಿ ಲೈಟರ್ನಿಂದ ಬೆಂಕಿ ಹಚ್ಚಿದ್ದಾನೆ. 60% ಸುಟ್ಟ ಗಾಯಗಳಿಂದ ಚಿಕಿತ್ಸೆ ಫಲಕಾರಿಯಾಗದೇ ಖಾಸಗಿ ಆಸ್ಪತ್ರೆಯಲ್ಲಿ ವನಜಾಕ್ಷಿ ಸಾವನ್ನಪ್ಪಿದ್ದಾಳೆ. ಸದ್ಯ ಹುಳಿಮಾವು ಪೊಲೀಸ್ ಠಾಣೆಯಲ್ಲಿ ವಿಠಲ ವಿರುದ್ದ ಕೊಲೆ ಕೇಸ್ ದಾಖಲಾಗಿದ್ದು, ಆರೋಪಿ ವಿಠಲನನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.
ಇದನ್ನೂ ಓದಿ : ಸಚಿವ ಜಮೀರ್ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ರಾಧಿಕಾ ಕುಮಾರಸ್ವಾಮಿ ವಿಚಾರಣೆ.. ಕೋಟಿ ಕೋಟಿ ಹಣಕಾಸು ವ್ಯವಹಾರ ಪತ್ತೆ!







