ಪ್ರಯಾಗ್ರಾಜ್ನಲ್ಲಿ 144 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭ ಮೇಳದಲ್ಲಿ ಬಹುಕೋಟಿ ಬಜೆಟ್ನ “ಕೊರಗಜ್ಜ” ಚಿತ್ರದ ನಿರ್ದೇಶಕ ಸುಧೀರ್ ಅತ್ತಾವರ್, ನಿರ್ಮಾಪಕ ತ್ರಿವಿಕ್ರಮ್ ಸಪಲ್ಯ ಹಾಗೂ ಕಾರ್ಯಕಾರಿ ನಿರ್ಮಾಪಕ ವಿದ್ಯಾಧರ್ ಶೆಟ್ಟಿ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದು, ಚಿತ್ರದ ಯಶಸ್ಸಿಗಾಗಿ ಪ್ರಾರ್ಥಿಸಿದ್ದಾರೆ.
“ಕೊರಗಜ್ಜ” ಚಿತ್ರತಂಡ ಬಂದಿರುವ ವಿಷಯ ತಿಳಿದ ಪ್ರಯಾಗ್ರಾಜ್ನ ಕೆಲ ಪತ್ರಕರ್ತರು ಆಸಕ್ತಿಯಿಂದ ಕೆಲ ಹೊತ್ತು ಕಾದು ತಂಡದೊಂದಿಗೆ ಮಾತುಕತೆ ನಡೆಸಿದ್ದಾರೆ. ಕೋಟ್ಯಾಂತರ ಜನ ಸಮೂಹದ ನಡುವೆಯೂ, ಚಿತ್ರ ತಂಡದೊಂದಿಗೆ ಸಂಪರ್ಕ ಸಾಧಿಸಿ, ಚಿತ್ರದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಕೆಲ ಚಾನೆಲ್ಗಳು “ಕೊರಗಜ್ಜ” ಚಿತ್ರದ ಬಗ್ಗೆ ವಿಷೇಷ ಕಾರ್ಯಕ್ರಮವನ್ನೂ ಬಿತ್ತರಿಸಿದ್ದಾರೆ.
“ಕೊರಗಜ್ಜ” ಸಿನಿಮಾದ ನ್ಯೂಸ್ ಉತ್ತರಪ್ರದೇಶದ ಪ್ರಯಾಗ್ರಾಜ್ವರೆಗೂ ತಲುಪಿರುವುದು ಸಹಜವಾಗಿಯೇ ಚಿತ್ರತಂಡಕ್ಕೆ ಸಂತಸ ತಂದಿದೆ.
ಇತ್ತೀಚಿನ ದಿನಗಳಲ್ಲಿ ದಕ್ಷಿಣ ಭಾರತದ ಸಿನಿಮಾಗಳು ಉದಾಹರಣೆಗೆ ಕಾಂತಾರ, RRR, ಪುಷ್ಪ ಮೊದಲಾದ ಪ್ಯಾನ್ ಇಂಡಿಯಾ ಚಿತ್ರಗಳಂತೆ “ಕೊರಗಜ್ಹ” ಕೂಡಾ ಅದೇ ರೀತಿಯಲ್ಲಿ ಸದ್ದು ಮಾಡುತ್ತಿರುವ ಬಗ್ಗೆ ಪತ್ರಕರ್ತರು ಬಳಿ ಪ್ರಶ್ನೆ ಕೇಳಿದಾಗ ನಿರ್ದೇಶಕ ಸುಧೀರ್ ಅತ್ತಾವರ್, ಪ್ಯಾನ್ ಇಂಡಿಯಾ ಸಿನಿಮಾ ಇವತ್ತು ನಿನ್ನೆಯ ಕಾನ್ಸೆಪ್ಟ್ ಅಲ್ಲ. ಮದ್ರಾಸಿನ ಪ್ರಸಾದ್ ಸ್ಟುಡಿಯೋ ಬಹಳ ಹಿಂದೆಯೇ ಪ್ಯಾನ್ ಇಂಡಿಯಾ ಸಿನಿಮಾ ಮಾಡಿ ಯಶಸ್ಸು ಕಂಡಿದ್ದರು. ಕಮಲ್ ಹಾಸನ್, ರಜನೀಕಾಂತ್ ಕೂಡಾ ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದರು. ಆದರೆ ಇತ್ತೀಚೆಗೆ ತಾಂತ್ರಿಕವಾಗಿ ದಕ್ಷಿಣ ಭಾರತದ ಸಿನಿಮಾಗಳು ಶ್ರೀಮಂತವಾಗಿ ಮೂಡಿಬರುತ್ತಿದೆ ಎಂದರು.
“ಕೊರಗಜ್ಜ” ಚಿತ್ರತಂಡವನ್ನು ಕಂಡು ಪುಳಕಿತಗೊಂಡ ಪ್ರಯಾಗ್ರಾಜ್ ಕುಂಭಮೇಳದಲ್ಲಿನ ಪತ್ರಕರ್ತರು, ದೇಶ- ವಿದೇಶಗಳಲ್ಲಿ ಹೆಸರು ಮಾಡುತ್ತಿರುವ ದಕ್ಷಿಣ ಭಾರತದ ಸಿನಿಮಾಗಳಂತೆಯೇ ಪ್ಯಾನ್ ಇಂಡಿಯಾ ಸಿನಿಮಾ “ಕೊರಗಜ್ಜ” ಕೂಡಾ ಯಶಸ್ವಿಯಾಗಲಿ ಎಂದು ಹಾರೈಸಿದರು.
