ತಾಳಿಯನ್ನು ಕಿತ್ತೆಸೆದ ಭಾಗ್ಯ.. ಗಂಡನ ದ್ರೋಹಕ್ಕೆ ಸ್ವಾಭಿಮಾನದ ಉತ್ತರ- ‘ಭಾಗ್ಯಲಕ್ಷ್ಮಿ’ಯಲ್ಲಿ ಹೈ ವೋಲ್ಟೇಜ್ ಎಪಿಸೋಡ್!

‘ಭಾಗ್ಯಲಕ್ಷ್ಮಿ’ ಕಲರ್ಸ್ ಕನ್ನಡದಲ್ಲಿ ಸದಾ ಮುಂಚೂಣಿಯಲ್ಲಿರುವ ಧಾರಾವಾಹಿ. ವಾರದ ಏಳು ದಿನವೂ ಸಂಜೆ 7ಕ್ಕೆ ಪ್ರಸಾರವಾಗುತ್ತಿರುವ ಈ ಧಾರಾವಾಹಿಯ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಭಾಗ್ಯ ಪಾತ್ರವು ಪ್ರತಿ ಮನೆ ಮಂದಿಯ ಮನ ಗೆದ್ದ ಪಾತ್ರ. ಭಾಗ್ಯಳ ಪ್ರತಿ ಗೆಲುವಿಗೆ ಜನ ಸಂತಸ ಪಟ್ಟಿದ್ದಾರೆ. ಅವಳು ಸೋತಾಗ ಗೆಲ್ಲಲಿ ಎಂದು ಹರಸಿದವರಿದ್ದಾರೆ. ಭಾಗ್ಯ ಅನೇಕ ಮಹಿಳೆಯರಿಗೆ ಪ್ರೇರಣೆ ಆಗಿರುವುದು ಸುಳ್ಳಲ್ಲ.

ಭಾಗ್ಯ -ತಾಂಡವ್ ವೈವಾಹಿಕ ಜೀವನ ಆರಂಭವಾದಾಗ ಅವಳು ಅಮಾಯಕ ಸದ್ಗ್ರುಹಿಣಿ. ತನ್ನ ಗಂಡನ ಬಗ್ಗೆ ಸದಭಿಪ್ರಾಯ ಮಾತ್ರ ಇದ್ದ ಹೆಣ್ಣು. ಆದರೆ ಕ್ರಮೇಣ ತಾಂಡವ್​ನ ಇನ್ನೊಂದು ಮುಖದ ಅರಿವಾದಾಗ ಭಾಗ್ಯ ಆ ಸಂದರ್ಭವನ್ನು “ನಾನು ಭಾಗ್ಯ” ಎಂದು ಎದುರಿಸಿ ನಿಂತಳು. ಜನರಿಗೂ ಈ ಒಂದು ಘಟ್ಟ ಬಹಳ ಮೆಚ್ಚುಗೆಯಾಯಿತು. ಇಂತಹ ಭಾಗ್ಯಳ ಬದುಕಿನಲ್ಲಿ ಮತ್ತೊಂದು ಅನಿರೀಕ್ಷಿತ ತಿರುವು ಬಂದಿದೆ! ಅದು ತನ್ನ ಗಂಡ ತಾಂಡವ್ – ಶ್ರೇಷ್ಠಾಳನ್ನು ಮದುವೆ ಆಗಿರುವುದು!

ಎಲ್ಲಾ ಸಂಕಷ್ಟಗಳಲ್ಲೂ ಜೊತೆಗಿರುತ್ತೇನೆ ಎಂದು ಮಾತು ಕೊಟ್ಟ ಗಂಡ ಇನ್ನೊಂದು ಮದುವೆ ಆದಾಗ ಒಬ್ಬ ಹೆಣ್ಣು ಮಗಳು ಅದಕ್ಕೆ ಹೇಗೆ ಪ್ರತಿಸ್ಪಂದಿಸಬಹುದು? ಇಂತಹ ಸಂದರ್ಭದಲ್ಲಿ ‘ಭಾಗ್ಯ’ ಕುಗ್ಗಿ ಹೋಗಬಹುದಾ? ಧೈರ್ಯ ಕಳೆದು ಕೊಳ್ಳಬಹುದಾ? ಹೀಗೆ ಮಾಡಬೇಡಿ ಅಂತೆಲ್ಲಾ ಪತಿಯ ಕಾಲಿಗೆ ಬಿದ್ದು ಗೋಳಾಡಬಹುದಾ? ಖಂಡಿತಾ ಅಲ್ಲ. “ಭಾಗ್ಯ’ ಹಾಗಲ್ಲ ! ಗಂಡನ ದ್ರೋಹಕ್ಕೆ ಭಾಗ್ಯ ಸ್ವಾಭಿಮಾನದ ಉತ್ತರ ಕೊಡುತ್ತಾಳೆ. ತಾಂಡವ್ ತತ್ತರಿಸಿ ಹೋಗುವಂತೆ ಅವನು ಬೆಲೆ ಕೊಡದ ತಾಳಿಯನ್ನು ಕುತ್ತಿಗೆಯಿಂದ ತೆಗೆಯುತ್ತಾಳೆ!

“ಕಟ್ಟಿರೋ ತಾಳಿಗೆ ಗಂಡನೇ ಬೆಲೆ ಕೊಡಲಿಲ್ಲ ಅಂದ್ಮೇಲೆ, ಈ ತಾಳಿ ಭಾರ ಆಗ್ತಿದೆ, ಅತ್ತೆ! ಇವರಿಗೆ ಬೇಡದಿರೋ ಸಂಬಂಧ ನನಗೂ ಬೇಡ, ಇದು ನನಗೆ ಬೇಡ! ಇದು ನನಗೆ ಬೇಡ!” ಎಂದು ತನ್ನ ಅತ್ತೆ ಕುಸುಮಾಳಿಗೆ ಹೇಳುವ ಭಾಗ್ಯ ಒಂದು ದಿಟ್ಟ ನಿರ್ಧಾರ ತೆಗೆದುಕೊಳ್ಳುತ್ತಾಳೆ. ಅದು ಭಾಗ್ಯಳ ಮಹಾ ನಿರ್ಧಾರ! ತಾಳಿಯನ್ನು ತೆಗೆದು ತಾಂಡವ್​ನ ಕೈಗಿಡುತ್ತಾಳೆ !

ಭಾಗ್ಯ ತನ್ನ ಗಂಡ ಮಾಡಿದ ಮೋಸದಿಂದ ದಿಗ್ಭ್ರಾಂತಳಾಗುವುದಿಲ್ಲ, ಆದರೆ ಅವಳು ತೆಗೆದುಕೊಳ್ಳುವ ಈ ದಿಟ್ಟ ನಿರ್ಧಾರ ಅವಳನ್ನು ದಿಗ್ವಿಜಯಕ್ಕೆ ಸಿದ್ಧ ಮಾಡುವಂಥದ್ದು. ಭಾಗ್ಯ ಎಷ್ಟೊಂದು ಗಟ್ಟಿಗಿತ್ತಿ ಎಂದು ಬಿಂಬಿಸುವ, ಯಾವುದೇ ಕಷ್ಟ ಬಂದರೂ ಸ್ವತಂತ್ರವಾಗಿ ಯೋಚಿಸುವ – ಎದುರಿಸುವ ಭಾಗ್ಯಳನ್ನು ಇಲ್ಲಿ ಚಿತ್ರಿಸಲಾಗಿದೆ.
ತೆರೆಯ ಮೇಲೆ ಬರಲಿರುವ ಈ ಅಪರೂಪದ ಸನ್ನಿವೇಶ ಮುಂದಿನ ದಿನಗಳಲ್ಲಿ ಹಲವಾರು ಚರ್ಚೆ, ವಿವಾದಗಳನ್ನು ಹುಟ್ಟು ಹಾಕಬಹುದು. ಆದರೆ ಅಪರೂಪವಾದದ್ದು ಒಂದು ಆಗುತ್ತಲೇ ಇರುವುದು – ಭಾಗ್ಯಳ ಬದುಕು ಅಲ್ಲವೇ?

ಸೋಮವಾರ (24 ಫೆಬ್ರವರಿ) ಸಂಜೆ 7ಕ್ಕೆ ಕಲರ್ಸ್ ಕನ್ನಡದಲ್ಲಿ ” ಭಾಗ್ಯ, ಮಹಾ ನಿರ್ಧಾರ’ ಒಂದು ಗಂಟೆಯ ವಿಶೇಷ ಎಪಿಸೋಡ್ ಪ್ರಸಾರವಾಗಲಿದ್ದು, ‘ಭಾಗ್ಯಲಕ್ಷ್ಮಿ’ ಧಾರಾವಾಹಿಯ ಅಭಿಮಾನಿಗಳಿಗೆ ಮೆಚ್ಚುಗೆಯಾಗುವುದರಲ್ಲಿ ಅನುಮಾನವಿಲ್ಲ.

ಇದನ್ನೂ ಓದಿ : http://ರಂಜಾನ್‌ಗೆ ಮುಸ್ಲಿಂ ಸರ್ಕಾರಿ ನೌಕರರಿಗೆ ಕೆಲಸದ ಅವಧಿಯಲ್ಲಿ 1 ಗಂಟೆ ವಿನಾಯಿತಿ ಕೊಡಿ – ಸಿಎಂಗೆ ಪತ್ರ!

Btv Kannada
Author: Btv Kannada

Read More