ನವದೆಹಲಿ : ಅತಿ ಹೆಚ್ಚು ಭದ್ರತೆ ಇರುವ ಸ್ಥಳ ಸಂಸತ್ ಭವನದಲ್ಲಿ ಮತ್ತೊಮ್ಮೆ ಭಾರೀ ಭದ್ರತಾ ವೈಫಲ್ಯವಾಗಿದೆ. ಅನಾಮಿಕ ವ್ಯಕ್ತಿಯೊಬ್ಬ ಮರವನ್ನು ಬಳಸಿ ಗೋಡೆ ಏರಿ ಸಂಸತ್ತಿನ ಆವರಣವನ್ನು ಅಕ್ರಮವಾಗಿ ಪ್ರವೇಶಿಸಿದ್ದಾನೆ.
ಇಂದು ಬೆಳಗ್ಗೆ 6:30ರ ಸಮಯಕ್ಕೆ ವ್ಯಕ್ತಿಯು ಮರದ ಸಹಾಯದಿಂದ ಸಂಸತ್ ಭವನದ ಗೋಡೆ ಏರಿದ್ದಾನೆ. ರೈಲು ಭವನದ ಕಟ್ಟಡದಿಂದ ಎಂಟ್ರಿ ಕೊಟ್ಟಿರುವ ಅನಾಮಿಕ, ಹೊಸ ಸಂಸತ್ ಭವನದ ಗರುಡ ಗೇಟ್ ಬಳಿಗೆ ಬಂದು ಒಳಗೆ ನುಗ್ಗಲು ಯತ್ನಿಸಿದ್ದಾನೆ. ಈ ವೇಳೆ ಭದ್ರತಾ ಅಧಿಕಾರಿಗಳು ಆತನನ್ನು ಬಂಧಿಸಿ ಕರೆದುಕೊಂಡು ಹೋಗಿದ್ದಾರೆ. ಸದ್ಯ ಬಂಧಿಸಿರುವ ವ್ಯಕ್ತಿಯನ್ನು ವಿಚಾರಣೆ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ. ಸಂಸತ್ತಿನ ಮುಂಗಾರು ಅಧಿವೇಶನವು ಹಲವು ಗದ್ದಲಗಳ ನಡುವೆ ನಿನ್ನೆ ಮುಕ್ತಾಯಗೊಂಡಿದ್ದು, ಇದೀಗ ಒಂದು ದಿನದ ಬಳಿಕ ಈ ಘಟನೆ ನಡೆದಿದೆ.
2023ರಲ್ಲಿ ಸಂಸದರ ಗ್ಯಾಲರಿಗೆ ನುಗ್ಗಿ ಪ್ರತಿಭಟನೆ ನಡೆಸಿದ್ದ ಇಬ್ಬರು ಯುವಕರು ಕಲರ್ ಬಾಂಬ್ ಸಿಡಿಸಿದ್ದರು. 2 ದಿನದ ಹಿಂದಷ್ಟೇ ದೆಹಲಿ ಸಿಎಂ ಮನೆಯೊಳಗೆ ಹಲ್ಲೆ ನಡೆದಿರುವ ಘಟನೆಯೂ ನಡೆದಿತ್ತು. 2001ರ ಪಾರ್ಲಿಮೆಂಟ್ ದಾಳಿಯ ವರ್ಷದ ದಿನವೇ ಈ ಘಟನೆ ನಡೆದಿದ್ದು, ಆತಂಕ ಮೂಡಿಸಿತ್ತು.
ಇದನ್ನೂ ಓದಿ : ಕಾಂಗ್ರೆಸ್ ನಾಯಕಿ ಕುಸುಮಾ ನಿವಾಸದ ಮೇಲೆ ED ರೇಡ್.. ಶಾಸಕ ವೀರೇಂದ್ರ ಪಪ್ಪಿ ಜೊತೆ ವ್ಯವಹಾರ ನಂಟಿನ ಆರೋಪ!







