ಮಂಗಳೂರು : ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಡಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧ ಪ್ರಕರಣ ಕೂಡ ದಾಖಲಾಗಿದೆ. SIT ತಂಡ ದೂರುದಾರ ತೋರಿಸಿರುವ ಸ್ಥಳದಲ್ಲಿ ಶೋಧ ಕಾರ್ಯ ನಡೆಸುತ್ತಿದೆ. ಇದೀಗ ಈ ಬಗ್ಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು PTI ನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

PTI ನ್ಯೂಸ್ ಸಂದರ್ಶನದಲ್ಲಿ ಮಾತನಾಡಿದ ಅವರು, ಧರ್ಮಸ್ಥಳದಲ್ಲಿ ಶವಗಳನ್ನು ಹೂಳಲಾಗಿದೆ ಎಂಬ ಆರೋಪಗಳು ಸಂಪೂರ್ಣವಾಗಿ ಆಧಾರರಹಿತವಾಗಿವೆ. ಈ ರೀತಿಯ ಆರೋಪಗಳಿಂದ ನಮ್ಮ ಮನಸ್ಸಿಗೆ ತೀವ್ರ ನೋವಾಗಿದೆ. ಇವೆಲ್ಲವೂ ಧರ್ಮಸ್ಥಳದ ಖ್ಯಾತಿಗೆ ಕಳಂಕ ತರುವ ಷಡ್ಯಂತ್ರದ ಭಾಗವಾಗಿದೆ. ಈ ರೀತಿಯ ಹೋರಾಟಗಳಿಗೆ ಯಾವುದೇ ನೈತಿಕ ಬೆಲೆ ಇಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಅನಾಮಿಕ ದೂರುದಾರನು ತೋರಿಸಿದ 17 ಸ್ಥಳಗಳಲ್ಲಿ SIT ತನಿಖೆ ನಡೆಸಿದೆ. ಆದರೆ, ಕೇವಲ ಒಂದೇ ಒಂದು ಸ್ಥಳದಲ್ಲಿ ಮೂಳೆ ಸಿಕ್ಕಿದೆ. ಇದಕ್ಕೂ ಧರ್ಮಸ್ಥಳದ ಆಡಳಿತಕ್ಕೆ ಯಾವುದೇ ಸಂಬಂಧವಿಲ್ಲ. ಬಾಹುಬಲಿ ಬೆಟ್ಟ ಮತ್ತು ನೇತ್ರಾವತಿ ದಡದಲ್ಲಿ ನಡೆದ ತನಿಖೆಯ ಬಗ್ಗೆಯೂ ಯಾವುದೇ ಆಧಾರಭೂತ ಸಾಕ್ಷ್ಯ ಸಿಕ್ಕಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
ಇನ್ನು ವಿಶೇಷ ತನಿಖಾ ತಂಡದ ರಚನೆಯನ್ನು ನಾವು ಸ್ವಾಗತಿಸುತ್ತೇವೆ. ಎಲ್ಲಾ ಅನುಮಾನಗಳಿಗೆ ಉತ್ತರ ಸಿಗಬೇಕು ಎಂಬುದು ನಮ್ಮ ಆಶಯ. ತನಿಖೆಯಿಂದ ಸತ್ಯ ಹೊರಬರಬೇಕು ಮತ್ತು ಆದಷ್ಟು ಬೇಗ ನ್ಯಾಯ ಒದಗಬೇಕು. ನಾವು ಎಲ್ಲಾ ದಾಖಲೆಗಳನ್ನು ತೆರೆದಿಟ್ಟಿದ್ದೇವೆ ಮತ್ತು SITಗೆ ಸಂಪೂರ್ಣ ಸಹಕಾರ ನೀಡಲು ಸಿದ್ಧರಿದ್ದೇವೆ ಎಂದರು.
ಇದೇ ವೇಳೆ ಡಾ. ವೀರೇಂದ್ರ ಹೆಗ್ಗಡೆ ಅವರು ತಮ್ಮ ಸಹೋದರರ ಕೆಲಸದ ಬಗ್ಗೆ ವಿವರಣೆ ನೀಡಿದರು. ನನಗೆ ಮೂವರು ಸಹೋದರರು ಮತ್ತು ಒಬ್ಬ ಸಹೋದರಿ ಇದ್ದಾರೆ. ನನ್ನ ಎರಡನೇ ಸಹೋದರ ಶಿಕ್ಷಣ ಸಂಸ್ಥೆಗಳ ಆಡಳಿತವನ್ನು ನೋಡಿಕೊಳ್ಳುತ್ತಾರೆ, ಮತ್ತು ಮೂರನೇ ಸಹೋದರ ಧರ್ಮಸ್ಥಳದ ಆಡಳಿತದ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ. ನಮ್ಮ ಕುಟುಂಬವು ಧರ್ಮಸ್ಥಳದ ಸೇವೆಗೆ ಸಮರ್ಪಿತವಾಗಿದೆ ಎಂದು ಹೇಳಿದರು.
ಇದನ್ನೂ ಓದಿ : ಬಿಬಿಎಂಪಿ ಅಧಿಕಾರಿಗಳ ಮತ್ತೊಂದು ಯಡವಟ್ಟು – ಡೆಡ್ಲಿ ನಾಯಿಗಳಿಗೆ ಟ್ರೈನಿಂಗ್ ಪ್ಲ್ಯಾನ್!







