ಮಧುಗಿರಿ : ನನ್ನ ಸಚಿವ ಸ್ಥಾನದಿಂದ ತೆಗೆಯುವುದು ಮುಖ್ಯಮಂತ್ರಿಗೆ ಗೊತ್ತಿರಲಿಲ್ಲ. ಮೂವರು ದೆಹಲಿಯಲ್ಲಿ ವ್ಯವಸ್ಥಿತವಾಗಿ ಪಿತೂರಿ ಮಾಡಿದ್ದಾರೆ. ಪಿತೂರಿ ಮಾಡುವುದು ನನಗೂ ಬರುತ್ತದೆ. ಪಿತೂರಿ ವಿದ್ಯೆ ಬರುವುದಿಲ್ಲ ಅಂದುಕೊಳ್ಳಬೇಕಿಲ್ಲ. ಈ ಸಂದರ್ಭದಲ್ಲಿ ಅದನ್ನು ಬಳಸುವುದಿಲ್ಲ. ಮುಂದೆ ಕಾಲ ಬರುತ್ತದೆ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಪರೋಕ್ಷವಾಗಿ ತಮ್ಮ ವಿರೋಧಿಗಳಿಗೆ ಎಚ್ಚರಿಕೆ ನೀಡಿದರು.
ಈ ಬಗ್ಗೆ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಕೆ.ಎನ್.ರಾಜಣ್ಣ ಮಾತನಾಡಿ, ಸಿದ್ದರಾಮಯ್ಯ ಬಡವರ ಪರವಾಗಿ ಕೆಲಸ ಮಾಡುತ್ತಾರೆ ಹಾಗಾಗಿ ಖುಷಿ ಇದೆ. ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಇದ್ದಾಗ ರಾಹುಲ್ ಗಾಂಧಿ ಅವರು ಕರೆ ಮಾಡಿದ್ದರು. ಕಾರಣ ಏನಿದೆ ಅಂತ ನನಗೆ ಗೊತ್ತಿಲ್ಲ. ಯಾವುದೇ ಸ್ಟೇಟ್ಮೆಂಟ್ ಅಂತಲ್ಲ, ಸತ್ಯವನ್ನೇ ನಾನು ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು.
ವಿಧಾನಸಭೆ ಅಧಿವೇಶನ ಮುಗಿದ ನಂತರ ದೆಹಲಿಗೆ ಹೋಗಿ ರಾಹುಲ್ ಗಾಂಧಿ ಅವರನ್ನು ಭೇಟಿಮಾಡಿ ಎಲ್ಲ ವಿಚಾರ ತಿಳಿಸುತ್ತೇನೆ. ಸಮಯ ಬಂದಾಗ ಸಚಿವ ಸ್ಥಾನ ತೆಗೆದುಕೊಳ್ಳುತ್ತೇನೆ. ಇದೇ ಅವಧಿಯಲ್ಲಿ ಸಚಿವನಾಗುತ್ತೇನೆ. ಹೈಕಮಾಂಡ್ ಒಪ್ಪಿಸುತ್ತೇನೆ. ದೆಹಲಿಗೆ ಹೋಗಿ ಬಂದ ಮೇಲೆ ಸಿಹಿ ಸುದ್ದಿ ಕೊಡುತ್ತೇನೆ ಎಂದು ಹೇಳಿದರು.
ನಾನು ಯಾವತ್ತೂ ಸುಳ್ಳು ಹೇಳುವುದಿಲ್ಲ. ಸ್ವಾರ್ಥಕ್ಕಾಗಿ ಸುಳ್ಳು ಹೇಳಿಲ್ಲ. ಬೇರೆಯವರ ಅನುಕೂಲಕ್ಕಾಗಿ ಸುಳ್ಳು ಹೇಳಿದ್ದೇನೆ. ಹೆಚ್ಚುವರಿಯಾಗಿ ಉಪಮುಖ್ಯಮಂತ್ರಿಗಳ ನೇಮಕ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಹೇಳಿಕೆ ನೀಡಿದ್ದೇನೆ. ನಾನು ಹೇಳಿದ್ದನ್ನು ದೆಹಲಿಗೆ ತಲುಪಿಸಿದ್ದಾರೆ. ನಾನೇನು ಮುಚ್ಚು ಮರೆ ಮಾಡಿಲ್ಲ. ಪಕ್ಷದ ವಿಚಾರವನ್ನು ಸಾರ್ವತ್ರಿಕವಾಗಿ ಮಾತನಾಡಬಾರದು. ವಾತಾವರಣ, ಪರಿಸ್ಥಿತಿ ಸತ್ಯವನ್ನು ಕಹಿ ಮಾಡುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ : ಕಾದಿದ್ದು ಸಾಕು.. ಬಿಗ್ ಬಾಸ್ ಈಸ್ ಬ್ಯಾಕ್ – ಸೀಸನ್ 12ರ ಲೋಗೋ ರಿಲೀಸ್!







