ಮಂಗಳೂರು : ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತುಹಾಕಿರುವುದಾಗಿ ಅನಾಮಿಕ ನೀಡಿದ ದೂರಿನ ಮೇರೆಗೆ ದಾಖಲಾದ ಪ್ರಕರಣದಲ್ಲಿ ಭಾರೀ ಬೆಳವಣಿಗೆಗಳು ನಡೆಯುತ್ತಿವೆ. ದೂರುದಾರ ತೋರಿಸಿದ ಮೊದಲ ಜಾಗದಲ್ಲಿ ಎಸ್ಐಟಿ ನೆಲ ಅಗೆದಾಗ ಪಾನ್ಕಾರ್ಡ್ ಕಾರ್ಡ್ ಪತ್ತೆಯಾಗಿತ್ತು. ಇದೀಗ ಅದರ ವಿವರಗಳು ಬಹಿರಂಗವಾಗಿವೆ.

ಹೌದು.. 1ನೇ ಪಾಯಿಂಟ್ನಲ್ಲಿ ಅಗೆಯುವಾಗ ಪುರುಷರೊಬ್ಬರ ಪ್ಯಾನ್ ಕಾರ್ಡ್ ಪತ್ತೆಯಾಗಿತ್ತು. ಈ ವ್ಯಕ್ತಿಯ ಕುಟುಂಬವನ್ನು ಪತ್ತೆ ಹಚ್ಚುವಲ್ಲಿ ಇದೀಗ ವಿಶೇಷ ತನಿಖಾ ತಂಡ ಯಶಸ್ವಿಯಾಗಿದೆ. ಇದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವ್ಯಕ್ತಿಯದ್ದು ಎಂದು ಗೊತ್ತಾಗಿದೆ. ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಡಾಬಸ್ ಪೇಟೆಯ ನಿವಾಸಿಯಾಗಿದ್ದ ಸುರೇಶ್ ಮಾರ್ಚ್ 2025ರಲ್ಲಿ ತನ್ನ ಸ್ವಂತ ಗ್ರಾಮದಲ್ಲಿ ಕಾಮಾಲೆಯಿಂದ ನಿಧನರಾಗಿದ್ದರು. ಅಲ್ಲಿಯೇ ಅವರ ಕುಟುಂಬಸ್ಥರೇ ಅಂತ್ಯಕ್ರಿಯೆಯನ್ನು ಸಹ ನಡೆಸಿದ್ದರು. ಈ ಪ್ಯಾನ್ ಕಾರ್ಡ್ ಅವರದ್ದೇ ಎಂದು ತಿಳಿದುಬಂದಿದೆ.

ಈ ಸಂಬಂಧ ಎಸ್ಐಟಿ ಅಧಿಕಾರಿಗಳು ಆ ವ್ಯಕ್ತಿಯ ಮನೆಗೆ ಭೇಟಿ ನೀಡಿದ್ದು, ತಂದೆ ಮಗನ ಪ್ಯಾನ್ ಕಾರ್ಡ್ ಅನ್ನು ದೃಢಪಡಿಸಿದ್ದಾರೆ. ಮೃತ ವ್ಯಕ್ತಿ ಮದ್ಯವ್ಯಸನಿಯಾಗಿದ್ದರು ಎಂದು ಎಸ್ಐಟಿ ಅಧಿಕಾರಿಗಳು ಹೇಳಿದ್ದು, ಸಾಯುವ ಮೊದಲು ಮನೆ ಬಿಟ್ಟು ಗೆಳೆಯರೊಂದಿಗೆ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅವರ ಪ್ಯಾನ್ ಕಾರ್ಡ್ ಕಳೆದುಹೋಗಿರಬಹುದು ಎಂದು ಶಂಕಿಸಿದ್ದಾರೆ.

6ನೇ ಸ್ಥಳದಲ್ಲಿ ಮೂಳೆಗಳು ಪತ್ತೆ : ನಿನ್ನೆ ದೂರುದಾರರು ಗುರುತಿಸಿದ್ದ 6ನೇ ಸ್ಥಳದಲ್ಲಿ ಗುರುವಾರ ವಿಶೇಷ ತನಿಖಾ ತಂಡಕ್ಕೆ ಮಾನವನ ದೇಹದ ಮೂಳೆಗಳು ಸಿಕ್ಕಿದೆ. ಇಲ್ಲಿ ತಲೆಬುರುಡೆ ಸಿಕ್ಕಿಲ್ಲ. ಆದರೆ 12 ಮೂಳೆಗಳು ಪತ್ತೆಯಾಗಿವೆ ಎಂದು ಎಸ್ಐಟಿ ಅಧಿಕಾರಿಗಳು ಹೇಳಿದ್ದು, ಸ್ಥಳದಲ್ಲೇ ಇದ್ದ ವಿಧಿವಿಜ್ಞಾನ ವೈದ್ಯರು ಮೇಲ್ನೋಟಕ್ಕೆ ನೋಡಿದಾಗ ಇದು ಪುರುಷನ ಮೂಳೆಗಳಂತೆ ಕಾಣಿಸುತ್ತವೆ ಎಂದು ಅಭಿಪ್ರಾಯ ನೀಡಿದ್ದಾರೆ. ಇದನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದ್ದು, ಇದರಲ್ಲಿ ಸರಿಯಾದ ವಿವರ ತಿಳಿದು ಬರಲಿದೆ. ವಿಧಿವಿಜ್ಞಾನ ವೈದ್ಯರು, ಸ್ಥಳದಲ್ಲಿದ್ದ ಅಧಿಕಾರಿಗಳು ಹಾಗೂ ಪೊಲೀಸರು ಈ ಮೂಳೆಗಳನ್ನು ವಶಕ್ಕೆ ಪಡೆದಿರುವುದಲ್ಲದೆ, ಅವು ಪತ್ತೆಯಾದ ರೀತಿ ಸೇರಿದಂತೆ ವಿವಿಧ ವಿವರಗಳನ್ನು ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ : ಪ್ರಯಾಣಿಕರಿಗೆ ಶಾಕ್.. ಇಂದಿನಿಂದ ಬೆಂಗಳೂರಲ್ಲಿ ಆಟೋ ಮೀಟರ್ ದರ ಏರಿಕೆ!







