ಶ್ರೀನಗರ : ಲಡಾಖ್ನ ಲೇಹ್ ಜಿಲ್ಲೆಯಲ್ಲಿ ಮಿಲಿಟರಿ ಬೆಂಗಾವಲು ವಾಹನದ ಮೇಲೆ ಬಂಡೆಯೊಂದು ಉರುಳಿ ಬಿದ್ದು ಇಬ್ಬರು ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಘಟನೆಯಲ್ಲಿ ಹುತಾತ್ಮರಾದ ಇಬ್ಬರು ಸೈನಿಕರನ್ನು ಲೆಫ್ಟಿನೆಂಟ್ ಕರ್ನಲ್ ಭಾನು ಪ್ರತಾಪ್ ಸಿಂಗ್ ಮತ್ತು ಲ್ಯಾನ್ಸ್ ದಫಾದರ್ ದಲ್ಜೀತ್ ಸಿಂಗ್ ಎಂದು ಗುರುತಿಸಲಾಗಿದೆ.

ಕರ್ತವ್ಯದ ವೇಳೆ ಲೇಹ್ನಿಂದ ಸುಮಾರು 200 ಕಿ.ಮೀ ದೂರದಲ್ಲಿರುವ ಗಾಲ್ವಾನ್ನ ಡರ್ಬುಕ್ ಬಳಿಯ ಚಾರ್ಬಾಗ್ನಲ್ಲಿ ದೊಡ್ಡ ಬಂಡೆಯೊಂದು ಉರುಳಿ ಮಿಲಿಟರಿ ಬೆಂಗಾವಲು ವಾಹನದ ಮೇಲೆ ಬಿದ್ದಿದೆ. ಇನ್ನು, ಘಟನೆಯಲ್ಲಿ ಇತರ ಮೂವರು ಸೇನಾ ಅಧಿಕಾರಿಗಳು ಗಾಯಗೊಂಡಿದ್ದು, ಗಾಯಾಳುಗಳನ್ನು ಲೇಹ್ನಲ್ಲಿರುವ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಕುರಿತು ಭಾರತೀಯ ಸೇನೆಯ ಫೈರ್ ಅಂಡ್ ಫ್ಯೂರಿ ಕಾರ್ಪ್ಸ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ಲಡಾಖ್ನಲ್ಲಿ ಕರ್ತವ್ಯದ ವೇಳೆ ಲೆಫ್ಟಿನೆಂಟ್ ಕರ್ನಲ್ ಭಾನು ಪ್ರತಾಪ್ ಸಿಂಗ್ ಮಂಕೋಟಿಯಾ ಮತ್ತು ಲ್ಯಾನ್ಸ್ ದಫದಾರ್ ದಲ್ಜಿತ್ ಸಿಂಗ್ ಹುತಾತ್ಮರಾಗಿದ್ದಾರೆ. ಈ ದುಃಖದ ಸಮಯದಲ್ಲಿ ಮೃತ ಕುಟುಂಬಗಳಿಗೆ ಆಳವಾದ ಸಂತಾಪವನ್ನು ಸೂಚಿಸುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಇಂದಿನಿಂದ ಆಟೋ ಚಾಲಕರ ವಿರುದ್ಧ ಬೃಹತ್ ಕಾರ್ಯಚರಣೆ ನಡೆಸಲಿರುವ ಪೊಲೀಸರು!







