ಎಲ್ಲರನ್ನೂ ಮುನ್ನಡೆಸೋ ಲೀಡರ್​ ಬೇಕು.. ವಿಜಯೇಂದ್ರ ಬದಲಿಸದಿದ್ರೆ ಉಳಿಗಾಲವಿಲ್ಲ – ಬಿಜೆಪಿ ‘ಹೈ’ ನೋಟಿಸ್​ಗೆ ಶಾಸಕ ಯತ್ನಾಳ್​ ಉತ್ತರ!

ಬೆಂಗಳೂರು : ರಾಜ್ಯ ಬಿಜೆಪಿಯಲ್ಲಿ ಯತ್ನಾಳ್‌ ಬಣ ಹಾಗೂ ಬಿವೈ ವಿಜಯೇಂದ್ರ ನಡುವಿನ ಮುಸುಕಿನ ಗುದ್ದಾಟ ತಾರಕಕ್ಕೇರಿದ್ದು, ಬಣಗಳ ನಡುವಿನ ಸಂಘರ್ಷ ತೀವ್ರಗೊಂಡ ಬೆನ್ನಲ್ಲೇ ಪಕ್ಷಕ್ಕೆ ಮುಜುಗರ ತರುವಂಥ ಹೇಳಿಕೆಗಳನ್ನು ನೀಡುತ್ತಿರುವುದಕ್ಕಾಗಿ ಯತ್ನಾಳ್​​ಗೆ ಬಿಜೆಪಿ ಕೇಂದ್ರ ಶಿಸ್ತು ಸಮಿತಿ ನೋಟಿಸ್ ನೀಡಿತ್ತು. 72 ಗಂಟೆ ಒಳಗೆ ಉತ್ತರಿಸುವಂತೆ ಖಡಕ್ ಸೂಚನೆ ನೀಡಿತ್ತು.

ನೋಟಿಸ್ ಪಡೆದ ಮರುದಿನವೇ ಶಿಸ್ತು ಸಮಿತಿಗೆ ಯತ್ನಾಳ್ ಉತ್ತರ ನೀಡಿದ್ದರು ಎಂಬ ವಿಚಾರ ಈಗ ತಿಳಿದುಬಂದಿದೆ. ಕೇಂದ್ರ ಶಿಸ್ತು ಸಮಿತಿ ನೋಟಿಸ್​ಗೆ ಯತ್ನಾಳ್ ಇ-ಮೇಲ್ ಮೂಲಕ​ 9 ಪುಟಗಳ ಉತ್ತರ ನೀಡಿದ್ದಾರೆ. ‘ನಾನು ಯಾವುದೇ ಬಣ ರಾಜಕಾರಣ ಮಾಡಿಲ್ಲ. ಪಕ್ಷದ ಚೌಕಟ್ಟಿನಲ್ಲೇ ವಕ್ಸ್‌ ಹೋರಾಟ ನಡೆಸಿದ್ದೇವೆ. ಪಕ್ಷಕ್ಕೆ ಧಕ್ಕೆಯಾಗುವಂತಹ ಯಾವ ಕೆಲಸವನ್ನೂ ಮಾಡಿಲ್ಲ ಎಂದು ಉತ್ತರಿಸಿದ್ದಾರೆ’ ಎಂದು ತಿಳಿದುಬಂದಿದೆ.

‘ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸ್ವಜನ ಪಕ್ಷಪಾತ ಮಾಡುತ್ತಿದ್ದಾರೆ. ಹಿರಿಯರನ್ನು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಈ ಕಾರಣದಿಂದ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದೆ. ರಾಜ್ಯದಲ್ಲಿ ಕುಟುಂಬ ರಾಜಕಾರಣ ಮತ್ತು ಸ್ವಜನಪಕ್ಷಪಾತ ಕೊನೆಗೊಳ್ಳಬೇಕು ಎಂದು ಯತ್ನಾಳ ಪ್ರತಿಪಾದಿಸಿದ್ದಾರೆ’ ಎಂದು ತಿಳಿಸಿವೆ.

‘ರಾಜ್ಯ ಸರ್ಕಾರವು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿಲ್ಲ. ಮುಖ್ಯಮಂತ್ರಿ ವಿರುದ್ಧ ಮುಡಾ ಹಗರಣ, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಬುಡಕಟ್ಟುಗಳ ಅಭಿವೃದ್ಧ ನಿಗಮದ ಹಣ ದುರ್ಬಳಕೆ, ವಕ್ಸ್ ಪಹಣಿಗಳ ಬದಲಾವಣೆ, ರೈತರು-ಅಧಿಕಾರಿಗಳು ಮತ್ತು ಗುತ್ತಿಗೆದಾರರ ಆತ್ಮಹತ್ಯೆಗಳಂತಹ ಹೋರಾಟದ ಅವಕಾಶಗಳು ದೊರೆತಿದ್ದವು. ಆದರೆ ರಾಜ್ಯಾಧ್ಯಕ್ಷರ ಅಸಮರ್ಥತೆ ಕಾರಣದಿಂದ ಈ ಎಲ್ಲ ಹೋರಾಟಗಳಲ್ಲಿ ಪಕ್ಷವು ವಿಫಲವಾಗಿದೆ ಎಂದು ದೂರಿದ್ದಾರೆ’ ಎಂದಿವೆ.

‘ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಪಕ್ಷವನ್ನು ಬಲಪಡಿಸಲು ಈಗಲೇ ಅಧ್ಯಕ್ಷರನ್ನು ಬದಲಿಸಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಮುನ್ನಡೆಸುವವರಿಗೆ ಆ ಹೊಣೆಗಾರಿಕೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ’ ಎಂದು ಮೂಲಗಳು ಹೇಳಿವೆ.

ಇದನ್ನೂ ಓದಿ : http://ಎಲ್ಲರನ್ನೂ ಮುನ್ನಡೆಸೋ ಲೀಡರ್​ ಬೇಕು.. ವಿಜಯೇಂದ್ರ ಬದಲಿಸದಿದ್ರೆ ಉಳಿಗಾಲವಿಲ್ಲ – ಬಿಜೆಪಿ ‘ಹೈ’ ನೋಟಿಸ್​ಗೆ ಶಾಸಕ ಯತ್ನಾಳ್​ ಉತ್ತರ!

Btv Kannada
Author: Btv Kannada

Read More

Read More