‘ಸಾಹಸ ಸಿಂಹ’ ಡಾ. ವಿಷ್ಣುವರ್ಧನ್ ಅವರು ಸುಮಾರು 40 ವರ್ಷಗಳ ಕಾಲ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದರು. ನೂರಾರು ಹಿಟ್ ಸಿನಿಮಾಗಳಲ್ಲಿ ನಟಿಸಿದರು. ಆದರೆ ಅವರಿಗೆ ಕೇಂದ್ರ ಸರ್ಕಾರ ನೀಡುವ ಪದ್ಮಶ್ರೀ ಪ್ರಶಸ್ತಿ ನೀಡಿಲ್ಲ. ಇದೀಗ ಡಾ. ವಿಷ್ಣುವರ್ಧನ್ ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಷ್ಣು ಅಳಿಯ, ನಟ ಅನಿರುದ್ಧ್ ಜಟ್ಕರ್ ಅವರು ಮನವಿ ಮಾಡಿಕೊಂಡಿದ್ದಾರೆ.

ಸೆಪ್ಟೆಂಬರ್ 18 ರಂದು ವಿಷ್ಣುವರ್ಧನ್ ಅವರ 75ನೇ ಜನ್ಮದಿನ. ಈ ವಿಶೇಷ ಸಂದರ್ಭದಲ್ಲಿ ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಿ, ಇದು ಅವರ ಅಪಾರ ಅಭಿಮಾನಿಗಳ ಆಕಾಂಕ್ಷೆ ಎಂದು ಅನಿರುದ್ಧ್ ಕೇಳಿಕೊಂಡಿದ್ದಾರೆ.

ಪತ್ರದಲ್ಲಿ ಏನಿದೆ? ಅನಿರುದ್ಧ್ ಬರೆದಿರುವ ಮನವಿ ಪತ್ರದಲ್ಲಿ, “ನಾನು ಈ ಪತ್ರವನ್ನು ‘ಸಾಹಸ ಸಿಂಹ’ ಎಂದು ಹೆಮ್ಮೆಯಿಂದ ಕರೆಯಲ್ಪಡುವ ಕನ್ನಡಿಗರ ಹೃದಯ ಸಿಂಹಾಸನದಲ್ಲಿ ಸದಾ ಸ್ಥಾನ ಪಡೆದ ದಿಗ್ಗಜ ನಟರಾದ ಡಾ. ವಿಷ್ಣುವರ್ಧನ್ ಅವರ ಕೋಟ್ಯಾಂತರ ಅಭಿಮಾನಿಗಳ ಪರವಾಗಿ, ಗೌರವದೊಂದಿಗೆ ಹಾಗೂ ಹೃದಯಪೂರ್ವಕ ಮನವಿಯೊಂದಿಗೆ ಬರೆಯುತ್ತಿದ್ದೇನೆ. ಡಾ. ವಿಷ್ಣುವರ್ಧನ್ ಅವರು ನಮ್ಮನ್ನು ಭೌತಿಕವಾಗಿ ಅಗಲಿ 15 ವರ್ಷಗಳು ದಾಟಿದರೂ, ಜನರ ಹೃದಯದಲ್ಲಿ ಅವರು ಹೊಂದಿರುವ ಸ್ಥಾನ ಮಾತ್ರ ಆಚಲವಾಗಿದೆ. ಆದರೆ, ಇದುವರೆಗೆ ಅವರಿಗೆ ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ ಕೂಡ ದೊರಕಿಲ್ಲ. ನಮ್ಮ ರಾಜ್ಯದ ಅತ್ಯುನ್ನತ ಗೌರವವಾದ ಕರ್ನಾಟಕ ರತ್ನ ಪ್ರಶಸ್ತಿಯೂ ಇವರಿಗೆ ಕನಿಷ್ಟಪಕ್ಷ ಮರಣೋತ್ತರವಾಗಿಯಾದರೂ ಇನ್ನೂ ಲಭಿಸಿಲ್ಲ ಎಂಬುದು ವಿಷಾದನೀಯ. ಈ ವರ್ಷದ ಸೆಪ್ಟೆಂಬರ್ 18ರಂದು ಅವರ 75ನೇ ಜನ್ಮವಾರ್ಷಿಕೋತ್ಸವವಿದೆ. ಈ ವಿಶೇಷ ಸಂದರ್ಭದಲ್ಲಿ, ಅವರ ಅಪಾರ ಸಾಧನೆಗಳನ್ನು ಗೌರವಿಸಿ, ಅಭಿಮಾನಿಗಳ ಹಿತೈಷಿಗಳ ಇಚ್ಛೆ ಈಡೇರಿಸುವಂತೆ, ಅವರಿಗೆ “ಕರ್ನಾಟಕ ರತ್ನ’ ಪ್ರಶಸ್ತಿಯನ್ನು ನೀಡಬೇಕೆಂಬ ಮನವಿ ಇದಾಗಿದೆ” ಎಂದು ಅನಿರುದ್ಧ್ ಮನವಿಯಲ್ಲಿ ತಿಳಿಸಿದ್ದಾರೆ.

ಈ ಕನಸು ನನಸಾಗುವ ನಂಬಿಕೆ ನನಗಿದೆ : “ನಮ್ಮವರನ್ನು ಗೌರವಿಸುವುದು ಅಂದರೆ, ನಮ್ಮ ಗುರುತನ್ನು, ಬೇರುಗಳನ್ನು ಮತ್ತು ಬುನಾದಿಯನ್ನು ಗೌರವಿಸುವುದು. ಅವರ ಸಾಧನೆಗಳನ್ನು ನಾವು ಸ್ಮರಿಸಿದರೆ, ಅದು ನಾವು ನಮನ್ನೇ ಗೌರವಿಸುವಂತಾಗುತ್ತದೆ. ಈ ಕನಸು ನನಸಾಗುತ್ತದೆ ಎಂಬ ನಂಬಿಕೆ ನನಗಿದೆ. ಈ ಮನವಿಗೆ ಗೌರವಯುತವಾದ ಸ್ಪಂದನೆ ಲಭಿಸುವ ನಿರೀಕ್ಷೆಯಿದೆ” ಎಂದು ಅನಿರುದ್ಧ್ ಅವರು ಹೇಳಿದ್ದಾರೆ.
ಇದನ್ನೂ ಓದಿ : ನಟ ದರ್ಶನ್ ಜಾಮೀನಿಗೆ ಸುಪ್ರೀಂಕೋರ್ಟ್ ಅಸಮಾಧಾನ – ಜುಲೈ.22ಕ್ಕೆ ‘ಡಿ’ ಗ್ಯಾಂಗ್ಗೆ ಮತ್ತೆ ಜೈಲು ಫಿಕ್ಸ್?







