ಚಿತ್ರದುರ್ಗ : ಖಾಸಗಿ ಬಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಸ್ಥಳದಲ್ಲೇ ಬೈಕ್ ಸವಾರ ಜೀವ ಕಳೆದುಕೊಂಡ ಘಟನೆ ಚಿತ್ರದುರ್ಗ ಹೊರವಲಯದ ಮದಕರಿ ಪುರ ಬ್ರೀಡ್ಜ್ ಬಳಿ ನಡೆದಿದೆ.
ಬಚ್ಚಬೋರನಹಟ್ಟಿ ನಿವಾಸಿ ಬೈಕ್ ಸವಾರ ರಮೇಶ್ (32) ಪ್ರಾಣ ಕಳೆದುಕೊಂಡವರು. 40ಕ್ಕೂ ಹೆಚ್ಚು ಪ್ರಯಾಣಿಕರು ಇದ್ದಂತಹ ಗಣೇಶ ಟ್ರಾವೆಲ್ಸ್ ಖಾಸಗಿ ಬಸ್ ದಾವಣಗೆರೆ ಕಡೆಯಿಂದ ಬೆಂಗಳೂರು ಕಡೆಗೆ ಪ್ರಯಾಣಿಸುತ್ತಿತ್ತು. ಈ ವೇಳೆ ಬೈಕ್ ಹಾಗೂ ಬಸ್ ನಡುವೆ ಅಪಘಾತ ಸಂಭವಿಸಿದ್ದು ಸ್ಥಳದಲ್ಲೇ ಬೈಕ್ ಸವಾರ ರಮೇಶ್ ಕೊನೆಯುಸಿರೆಳೆದಿದ್ದಾರೆ.
ಬಸ್ ಕೆಳ ಭಾಗದಲ್ಲಿ ಬೈಕ್ ಸಿಲುಕಿರುವುದು, ಅಪಘಾತ ಸಂಭವಿಸಿದ್ದು ಬಸ್ ಚಾಲಕನಿಗೆ ತಕ್ಷಣಕ್ಕೆ ಗೊತ್ತಾಗಿಲ್ಲ. ಹೀಗಾಗಿ ಬಸ್ ಚಾಲನೆ ಮಾಡಿಕೊಂಡು ಹಾಗೇ ಸ್ವಲ್ಪ ದೂರ ಬಂದಿದ್ದಾರೆ. ಈ ವೇಳೆ ಬೈಕ್ ಮತ್ತು ಬಸ್ಸಿನ ನಡುವೆ ಸ್ಪಾರ್ಕ್ ಆಗಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲೇ ದೊಡ್ಡ ಮಟ್ಟದಲ್ಲಿ ಬೆಂಕಿ ಹೊತ್ತಿಕೊಂಡಿದ್ದು ಇಡೀ ಬಸ್ ಅನ್ನೇ ಸುಟ್ಟು ಕರಕಲು ಮಾಡಿದೆ.
ಬೆಂಕಿ ಕಾಣಿಸಿದ ತಕ್ಷಣವೇ ಪ್ರಯಾಣಿಕರೆಲ್ಲರೂ ಬಸ್ನಿಂದ ಹೊರ ಬಂದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಖಾಸಗಿ ಬಸ್ ನಡು ರಸ್ತೆಯಲ್ಲೆ ಧಗಧಗ ಉರಿದಿದೆ. ಈ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಚಿತ್ರದುರ್ಗ ಎಸ್ಪಿ ರಂಜಿತ್ ಕುಮಾರ್ ಬಂಡಾರೂ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು. ಚಿತ್ರದುರ್ಗ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ : ‘ಜೂನಿಯರ್’ ಚಿತ್ರದ ವೈರಲ್ ವಯ್ಯರಿ ಸಾಂಗ್ ರಿಲೀಸ್.. DSP ಮ್ಯೂಸಿಕ್ಗೆ ಕುಣಿದು ಕುಪ್ಪಳಿಸಿದ ಕಿರೀಟಿ-ಶ್ರೀಲೀಲಾ!
