ಬೆಂಗಳೂರು : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (ಬಿಡಿಎ) ನಾಗರಿಕ ನಿವೇಶನ ಸೌಲಭ್ಯ (ಸಿಎ ಸೈಟ್) ಪಡೆದಿರುವ ವಿವಿಧ ಸಂಘ-ಸಂಸ್ಥೆಗಳು ನವೀಕರಣದ ಸಾಮಾನ್ಯ ಶುಲ್ಕವನ್ನು ಪಾವತಿಸಿದರೆ ನಿಯಮಾನುಸಾರ ವಿಧಿಸಲಾಗುವ ಬಡ್ಡಿಯನ್ನು ಸಂಪೂರ್ಣವಾಗಿ ಮನ್ನಾ ಮಾಡುವುದಾಗಿ ಬಿಡಿಎ ಘೋಷಿಸಿದೆ.
ಪ್ರತಿ ಮೂವತ್ತು ವರ್ಷಗಳಿಗೊಮ್ಮೆ ಸಿಎ ನಿವೇಶನಗಳ ನವೀಕರಣ ಕಡ್ಡಾಯವಾಗಿದೆ. ಬಿಡಿಎ ವ್ಯಾಪ್ತಿಯಲ್ಲಿ ಒಟ್ಟು 1600ಕ್ಕೂ ಹೆಚ್ಚು ಸಿಎ ನಿವೇಶನಗಳಿದ್ದು, ಇದರಲ್ಲಿ 250ಕ್ಕೂ ಹೆಚ್ಚು ನವೀಕರಣಕ್ಕೆ ಬಾಕಿ ಉಳಿದಿವೆ. ಈ ಹಿನ್ನೆಲೆ ನಿಗದಿತ ಅವಧಿಯಲ್ಲಿ ನವೀಕರಣ ಶುಲ್ಕ ಪಾವತಿಸಿದರೆ, ನಿವೇಶನದಾರ ಸಂಘ-ಸಂಸ್ಥೆಗಳಿಗೆ ವಿಧಿಸುವ ಬಡ್ಡಿಯನ್ನು ಸಂಪೂರ್ಣ ಮನ್ನಾ ಮಾಡಲು ರಾಜ್ಯ ಸರ್ಕಾರ ಅನುಮತಿ ನೀಡಿದೆ ಎಂದು ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಬಿಡಿಎದಿಂದ ನಿವೇಶನ ಪಡೆದ ಕೆಲ ಸಂಘ-ಸಂಸ್ಥೆಗಳು ನಷ್ಟದಲ್ಲಿವೆ. ಹಾಗಾಗಿ, ನವೀಕರಣದ ಮೊತ್ತ ಪಾವತಿಸಲು ಅವುಗಳಿಗೆ ಸಾಧ್ಯವಾಗುತ್ತಿಲ್ಲ. ಇದನ್ನರಿತ ರಾಜ್ಯ ಸರ್ಕಾರ ಬಿಡಿಎದಿಂದ ಸಿಎ ನಿವೇಶನದ ಸ್ಥಳ ಮತ್ತು ಮಾರ್ಗಸೂಚಿಗೆ ಅನುಗುಣವಾಗಿ ಭರಿಸಬೇಕಾದ ಶುಲ್ಕ ಪಾವತಿಸಿದರೆ, ನಿಯಮಾನುಸಾರ ವಿಧಿಸಲಾಗುತ್ತಿದ್ದ ಶೇಕಡಾ 18ರಷ್ಟು ಬಡ್ಡಿ ಮೊತ್ತವನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗುವುದು. ಇದು ಕೇವಲ ಒಂದು ಬಾರಿ ಕ್ರಮವಾಗಿದ್ದು, ಇದಕ್ಕೆ 120 ದಿನಗಳ ಕಾಲಾವಕಾಶ ನೀಡಲಾಗಿದೆ. ಈ ಯೋಜನೆಯಡಿ ಬಾಕಿ ಉಳಿಸಿಕೊಂಡ ಸಿಎ ನಿವೇಶನದಾರರು ಇದರ ಪ್ರಯೋಜನ ಪಡೆಯಬೇಕು’ ಎಂದು ಎನ್.ಎ. ಹ್ಯಾರಿಸ್ ಮನವಿ ಮಾಡಿದ್ದಾರೆ.
ಸಾರ್ವಜನಿಕರಿಗಾಗಿ ಸಹಾಯ ವಾಣಿ : ಪ್ರಾಧಿಕಾರದ ಆಯುಕ್ತ ಮಣಿವಣ್ಣನ್ ಅವರು ಮಾತನಾಡಿ, ಸಾರ್ವಜನಿಕರ ಅನುಕೂಲಕ್ಕಾಗಿ ನಾಗರಿಕ ಸಹಾಯ ಕೇಂದ್ರ ಕಾರ್ಯಾರಂಭ ಮಾಡಿದ್ದು, ಕುಂದು ಕೊರತೆಗಳು ಅಥವಾ ಮನವಿಗಳ ಕುರಿತು ಮೊ.9483166622 ಸಂಖ್ಯೆಗೆ ಕರೆ ಮಾಡಿ ತಿಳಿಸಬಹುದು.

ಬೆಳಗ್ಗೆ 10 ರಿಂದ ಸಂಜೆ 6ರ ವರೆಗೆ ಕಾರಸಿ ಕಾರನಿರ್ವಹಿ ಸಲಿದ್ದು, ಕರೆ ಸ್ವೀಕರಿಸಿ ಕೇಂದ್ರದ ಇ-ಆಡಳಿತ ಇಲಾಖೆ ಅಭಿವೃದ್ಧಿ ಪಡಿಸಿರುವ ಐಪಿಜಿಆರ್ಎಸ್ ಲಾಗಿನ್ ಬಳಸಿ ತಂತ್ರಾಂಶದಲ್ಲಿ ಅಳವಡಿಸಿ, ಪರಿಹಾರ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ನಿತ್ಯ ಕಚೇರಿಗೆ ಭೇಟಿ ನೀಡುವ ಅವಶ್ಯಕತೆ ಇಲ್ಲ ಅಹವಾಲುಗಳನ್ನು ಸರ್ಕಾರದ ಏಕೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆ ಅಥವಾ ನಾಗರಿಕ ಸಹಾಯ ಕೇಂದ್ರಕ್ಕೆ ಕರೆ ಮಾಡುವ ಮೂಲಕ ಅಥವಾ ನೇರವಾಗಿ ಪ್ರಾಧಿಕಾರಕ್ಕೆ ಸಲ್ಲಿಸಬಹುದು ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಮತ್ತೆ ಗೆದ್ದ ಹಿರಿಯ ವಕೀಲ ಅರುಣ್ ಶ್ಯಾಮ್ – MLC ರವಿಕುಮಾರ್ಗೆ ರಿಲೀಫ್.. ಜು. 8ರವರೆಗೆ ಬಂಧನ ಬೇಡ ಎಂದ ಹೈಕೋರ್ಟ್!
