ಮಂಗಳೂರು : ಮಂಗಳೂರು ನಗರದಲ್ಲಿ ನಕಲಿ ಆಸ್ತಿ ತೆರಿಗೆ ನೋಂದಾಣಿ ಹಾಗೂ ಉದ್ದಿಮೆ ಪರವಾನಿಗೆ ಸರ್ಟಿಫಿಕೇಟ್ ಜಾಲವೊಂದು ಪತ್ತೆ ಆಗಿದ್ದು, ನಕಲಿ ಪ್ರಮಾಣಪತ್ರಗಳನ್ನು ಸೃಷ್ಟಿಸಿ ಲಕ್ಷಾಂತರ ರೂ. ವಂಚನೆ ಮಾಡಿರುವಂತಹ ಘಟನೆ ಬೆಳಕಿಗೆ ಬಂದಿದೆ. ನಕಲಿ ಸರ್ಟಿಫಿಕೇಟ್ ಜಾಲದ ಭಾರೀ ವಂಚನೆಗೆ ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಬೆಚ್ಚಿ ಬಿದ್ದಿದ್ದು, ಬರೋಬ್ಬರಿ 4,500 ಉದ್ದಿಮೆ ಪರವಾನಿಗೆ ನವೀಕರಣ ಸರ್ಟಿಫಿಕೇಟ್ಗಳ ನಕಲಿ ಸೃಷ್ಟಿ ಅನುಮಾನ ಹುಟ್ಟಿಸಿದೆ.
ಮಧ್ಯವರ್ತಿಗಳು, ಏಜೆಂಟರಿಂದ ಮಂಗಳೂರು ಪಾಲಿಕೆಗೆ ಕೋಟ್ಯಾಂತರ ರೂ. ದೋಖಾ ಆಗಿರುವ ಅನುಮಾನ ಹುಟ್ಟಿಕೊಂಡಿದ್ದು, ಉದ್ಯಮಿಗಳಿಂದ ಟ್ರೇಡ್ ಲೈಸೆನ್ಸ್ ಹಾಗೂ ಆಸ್ತಿ ತೆರಿಗೆ ನೋಂದಾಣಿ ನವೀಕರಣಕ್ಕೆ ಹಣ ಸಂಗ್ರಹಿಸಿ ಭಾರೀ ವಂಚನೆ ಮಾಡಲಾಗಿದೆ. ಮಂಗಳೂರು ಪಾಲಿಕೆಯ ಅಸಲಿ ಸರ್ಟಿಫಿಕೇಟ್ಗಳನ್ನು ನಕಲಿ ಸೃಷ್ಟಿಸಿ ಕೋಟಿ ಕೋಟಿ ಲೂಟಿ ಮಾಡಲಾಗಿದ್ದು, ಪಾಲಿಕೆಯ ಟ್ರೇಡ್ ಲೈಸೆನ್ಸ್ ಹಾಗೂ ಆಸ್ತಿ ತೆರಿಗೆ ನೋಂದಾಣಿ ನವೀಕರಣ ಸರ್ಟಿಫಿಕೇಟ್ ನಕಲಿ ಸೃಷ್ಟಿ ಪತ್ತೆಯಾಗಿದೆ.
ಮಂಗಳೂರಿನ ದೇವಂಗ್ ಪಾಟೀಲ್ ಹಾಗೂ ಬಾಲಕೃಷ್ಣ ಎಂಬುವವರಿಗೆ ಏಜೆಂಟ್ ಒಬ್ಬ ನಕಲಿ ಸರ್ಟಿಫಿಕೇಟ್ ಮಾಡಿಸಿದ್ದಾನೆ. ಸಾವಿರಾರು ರೂ. ಹಣ ಪಡೆದು ಏಜೆಂಟ್ ಪ್ರಥ್ವಿರಾಜ್ ಶೆಟ್ಟಿ ನಕಲಿ ಟ್ರೇಡ್ ಲೈಸೆನ್ಸ್ ಹಾಗೂ ಆಸ್ತಿ ತೆರಿಗೆ ಸರ್ಟಿಫಿಕೇಟ್ ಕೊಟ್ಟಿದ್ದಾನೆ. ಪಾಲಿಕೆಯ ಸರ್ಟಿಫಿಕೇಟ್ ಮಾದರಿಯಲ್ಲೇ ಕಂಪ್ಯೂಟರ್ ತಂತ್ರಜ್ಞಾನ ಬಳಸಿ ಯಥಾವತ್ ನಕಲಿಸರ್ಟಿಫಿಕೇಟ್ ಸೃಷ್ಟಿ ಮಾಡಿದ್ದು, ಕಳೆದ 15 ವರ್ಷಗಳ ತೆರಿಗೆ ದಾಖಲೆಗಾಗಿ ಮಂಗಳೂರು ಪಾಲಿಕೆಗೆ ಬಂದಾಗ ಏಜೆಂಟ್ನ ಅಕ್ರಮ ಬಯಲಾಗಿದೆ.
ಪ್ರಥ್ವಿರಾಜ್ ಶೆಟ್ಟಿ ನೀಡಿದ ಉದ್ಯಮ ಪರವಾನಿಗೆ ಹಾಗೂ ಅಸ್ತಿ ತೆರಿಗೆ ಸರ್ಟಿಫಿಕೇಟ್ ನಕಲಿ ಎನ್ನುವುದು ಬೆಳಕಿಗೆ ಬಂದಿದೆ. ಸದ್ಯ ವಂಚನೆಗೆ ಒಳಗಾದವರಿಂದ ಮಂಗಳೂರು ಮಹಾನಗರ ಪಾಲಿಕೆ ಕಮಿಷನರ್ ಹಾಗೂ ಬರ್ಕೆ ಠಾಣೆಗೆ ದೂರು ನೀಡಿದ್ದಾರೆ. ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಬರೋಬ್ಬರಿ 4,500 ಉದ್ದಿಮೆ ಪರವಾನಿಗೆ ನವೀಕರಣಕ್ಕೆ ಬಾಕಿಯಿದ್ದು, ಬಾಕಿಯಿರುವ ಉದ್ದಿಮೆ ಪರವಾನಿಗೆ ನವೀಕರಣದಲ್ಲಿ ನಕಲಿ ಸರ್ಟಿಫಿಕೇಟ್ ಜಾಲದ ಕೈವಾಡದ ಅನುಮಾನ ಹುಟ್ಟಿಕೊಂಡಿತು. ಸದ್ಯ ಪಾಲಿಕೆ ಕಮಿಷನರ್ ಮಂಗಳೂರು ಮಹಾನಗರದ ಎಲ್ಲಾ ಉದ್ದಿಮೆಗಳ ಪರವಾನಿಗೆ ಪರಿಶೀಲನೆಗೆ ಮುಂದಾಗಿದ್ದಾರೆ.
ಇದನ್ನೂ ಓದಿ : ಸದಾಶಿವ ನಗರದಲ್ಲಿ ಒಂದು ಮನೆ ಬೆಲೆ 55 ಕೋಟಿ!
