ಬೆಂಗಳೂರು : ಕರ್ನಾಟಕ ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಶ್ರೀಕೃಷ್ಣನ್ ಹರಿಹರ ಶರ್ಮಾ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಶೇಖರ್ ರಾವ್ ಅವರು ರಾಜೀನಾಮೆ ನೀಡಿದ್ದಾರೆ. ಈ ಬೆನ್ನಲ್ಲೇ ಸೋಮವಾರ ಕರ್ನಾಟಕ ಬ್ಯಾಂಕ್ನ ಷೇರು ಬೆಲೆ 7% ಕ್ಕಿಂತ ಹೆಚ್ಚು ಕುಸಿದು ರೂ.192 ಕ್ಕೆ ತಲುಪಿದೆ ಎಂದು “ಎಕನಾಮಿಕ್ ಟೈಮ್ಸ್” ವರದಿ ಮಾಡಿದೆ.
ನಾಯಕತ್ವದಲ್ಲಿ ನಡೆದ ಪ್ರಮುಖ ಬದಲಾವಣೆಯ ನಂತರ ಕರ್ನಾಟಕ ಬ್ಯಾಂಕಿನ ಷೇರುಗಳು 7% ಕ್ಕಿಂತ ಹೆಚ್ಚು ಕುಸಿದಿದೆ. ಇದರಿಂದ ಜನರು ಭಾರೀ ಆತಂಕಗೊಂಡಿದ್ದಾರೆ. ಇನ್ನು ಎಂಡಿ-ಸಿಇಒ ಮತ್ತು ನಿರ್ದೇಶಕ ಸ್ಥಾನಕ್ಕೆ ಹೊಸಬರನ್ನು ನೇಮಿಸಲು ಬ್ಯಾಂಕ್ ಆಡಳಿತ ಮಂಡಳಿಯು ಶೋಧನಾ ಸಮಿತಿಯನ್ನು ರಚಿಸಿದೆ. ಎಂಡಿ-ಸಿಇಒ ಶರ್ಮಾ ಅವರ ರಾಜೀನಾಮೆ ಜುಲೈ 15 ರಿಂದ ಜಾರಿಗೆ ಬರಲಿದೆ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ರಾವ್ ಅವರ ರಾಜೀನಾಮೆ ಜುಲೈ 31 ರಿಂದ ಜಾರಿಗೆ ಬರಲಿದೆ. ತಾಂತ್ರಿಕ ಸೂಚಕಗಳು ಅಲ್ಪಾವಧಿಯ ಎಚ್ಚರಿಕೆಯನ್ನು ಸೂಚಿಸುತ್ತವೆಯಾದರೂ, ಬ್ಯಾಂಕಿನ ಮೌಲ್ಯಮಾಪನವು ದೀರ್ಘಾವಧಿಯ ಹೂಡಿಕೆದಾರರಿಗೆ ಆಕರ್ಷಕವಾಗಿ ಕಾಣುತ್ತದೆ ಎಂದು “ಎಕನಾಮಿಕ್ ಟೈಮ್ಸ್” ವರದಿ ಮಾಡಿದೆ.
ಎಂಡಿ-ಸಿಇಒ ಶ್ರೀಕೃಷ್ಣನ್ ಅವರು ಮುಂಬೈಗೆ ಮರಳಲು ಬಯಸುತ್ತಿರುವುದರಿಂದ ರಾಜೀನಾಮೆಗೆ ವೈಯಕ್ತಿಕ ಕಾರಣಗಳನ್ನು ನೀಡಿದ್ದಾರೆ. ಶೇಖರ್ ರಾವ್ ಅವರು ಮಂಗಳೂರಿಗೆ ಸ್ಥಳಾಂತರಗೊಳ್ಳಲು ಸಾಧ್ಯವಾಗದ ಕಾರಣ ಮತ್ತು ಇತರ ವೈಯಕ್ತಿಕ ಕಾರಣಗಳನ್ನು ನೀಡಿದ್ದಾರೆ. ಇವರ ರಾಜೀನಾಮೆಯನ್ನು ಕರ್ನಾಟಕ ಬ್ಯಾಂಕ್ ಆಡಳಿತ ಮಂಡಳಿ ಸೋಮವಾರ ಅಂಗೀಕರಿಸಿದೆ. ಇದೇ ವೇಳೆ ಅನುಭವಿ ಹಿರಿಯ ಬ್ಯಾಂಕರ್ ಅನ್ನು ಮುಖ್ಯ ಕಾರ್ಯಾಚರಣಾ ಅಧಿಕಾರಿಯಾಗಿ (COO) ನೇಮಿಸಿದ್ದು, ಅವರು ಜುಲೈ 2ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದೆ.
ಇದನ್ನೂ ಓದಿ : ನಿವೇದಿತಾ ಗೌಡಗೆ ಡಿವೋರ್ಸ್ ಕೊಡಲು ಇದೇ ಕಾರಣ – ಕೊನೆಗೂ ಸತ್ಯ ಬಿಚ್ಚಿಟ್ಟ ಚಂದನ್ ಶೆಟ್ಟಿ!
