ಬೆಂಗಳೂರು : ಪಕ್ಷ ವಿರೋಧಿ ಚಟುವಟಿಕೆ ಆರೋಪದ ಹಿನ್ನಲೆಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಕೇಂದ್ರ ಶಿಸ್ತುಪಾಲನಾ ಸಮಿತಿ ನೀಡಿದ್ದ ನೋಟಿಸ್ಗೆ ಸಮಜಾಯಿಷಿ ನೀಡಲು ಕೊಟ್ಟಿದ್ದ 72 ಗಂಟೆಯ ಡೆಡ್ಲೈನ್ ಮುಕ್ತಾಯಗೊಂಡಿದೆ. ಈ ಹಿನ್ನೆಲೆಯಲ್ಲಿ ಯತ್ನಾಳ್ ಹಾಗೂ ಬಿಜೆಪಿ ಕೇಂದ್ರ ಶಿಸ್ತುಪಾಲನಾ ಸಮಿತಿಯ ಮುಂದಿನ ನಡೆ ಏನು ಎಂಬುವುದು ಕುತೂಹಲಕ್ಕೆ ಕಾರಣವಾಗಿದೆ.
ಈಗಾಗಲೇ ನಾನು ನೋಟಿಸ್ ಉತ್ತರಿಸುವುದಿಲ್ಲ ಎಂದು ಯತ್ನಾಳ್ ಹೇಳಿದ್ದಾರೆ. ಹಾಗೊಂದು ವೇಳೆ ಅದು ನಿಜವಾದರೆ ಕೇಂದ್ರ ಬಿಜೆಪಿ ವರಿಷ್ಟರ ನಡೆಯೂ ಸಾಕಷ್ಟು ಕುತೂಹಲ ಕೆರಳಿಸಲಿದೆ. ಕಳದೆ ಸೋಮವಾರ ಯತ್ನಾಳ್ಗೆ ಬಿಜೆಪಿ ಕೇಂದ್ರ ಬಿಜೆಪಿ ಚುನಾವಣಾ ಶಿಸ್ತು ಸಮಿತಿ ಕಾರ್ಯದರ್ಶಿ ಓಂಪಾಠಕ್ ಅವರು, ಯತ್ನಾಳ್ಗೆ ಶೋಕಾಸ್ ನೋಟಿಸ್ ಜಾರಿ ಮಾಡಿ 12 ಗಂಟೆಯೊಳಗೆ ಉತ್ತರಿಸಬೇಕು. ಒಂದು ವೇಳೆ ಸಮರ್ಪಕ ಉತ್ತರ ನೀಡದಿದ್ದರೆ ಮುಂದಿನ ಕ್ರಮದ ಬಗ್ಗೆ ಸೂಚಿಸಿ ಎಚ್ಚರಿಕೆ ಕೊಟ್ಟಿದ್ದರು.
ಮೊದಲಿನಿಂದಲೂ ಯತ್ನಾಳ್ ಅವರು ಪಕ್ಷದ ಕೆಲ ನಾಯಕರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು. ಹೀಗಾಗಿ ಬಿಜೆಪಿ ಹೈಕಮಾಂಡ್ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಯಡಿಯೂರಪ್ಪ ಮೇಲಿನ ಆರೋಪಗಳಿಗೆ ಸಂಬಂಧಿಸಿದಂತೆ ವಿವರಣೆಯನ್ನು ಹೈಕಮಾಂಡ್ ಕೇಳಿದೆ. ಖುದ್ದು ಹಾಜರಾಗಿ, ವಿವರಣೆ ನೀಡುವಂತೆ ನೋಟಿಸ್ನಲ್ಲಿ ಸೂಚನೆ ನೀಡಿದೆ.
ಈ ಹಿಂದೆಯೂ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿರುವುದಕ್ಕೆ ಬಸವನಗೌಡ ಪಾಟೀಲ್ ಯತ್ನಾಳ್ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ಅಲ್ಲದೇ ವಿಜಯೇಂದ್ರ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಟೀಕೆಗಳನ್ನು ಮಾಡುತ್ತಾ ಬಂದ ಯತ್ನಾಳ್ ಅವರ ವಿರುದ್ಧ ಕಳೆದ ವರ್ಷ ಡಿಸೆಂಬರ್ ನಲ್ಲಿಯೂ ಶಿಸ್ತುಪಾಲನಾ ಸಮಿತಿ ಮೊದಲ ಶೋಕಾಸ್ ನೋಟಿಸ್ ಜಾರಿಗೊಳಿಸಿತ್ತು. ಆ ಬಳಿಕ ಮತ್ತೆ ಶಿಸ್ತು ಸಮಿತಿ ಎರಡನೇ ಶೋಕಸ್ ನೋಟಿಸ್ ನೀಡಿತ್ತು.
ಅದಕ್ಕೂ ಮುನ್ನವೂ ಜಾರಿಗೊಳಿಸಲಾಗಿದ್ದ ನೋಟಿಸ್ಗೆ ಯತ್ನಾಳ್ ಉತ್ತರಿಸುವ ಗೋಜಿಗೆ ಹೋಗಿರಲಿಲ್ಲ, ಅದಕ್ಕಾಗಿ ಈಗ ಮತ್ತೊಂದು ನೋಟಿಸ್ ಜಾರಿಗೊಳಿಸಲಾಗಿದೆ. ಈಗ ಯತ್ನಾಳ್ ಅವರು ಏನು ಮಾಡುತ್ತಾರೆ. ಶಿಸ್ತುಪಾಲನಾ ಸಮಿತಿಯ ಮುಂದೆ ಹಾಜರಾಗುತ್ತಾರೋ ಅಥವಾ ದೂರ ಉಳಿಯುತ್ತಾರೋ, ಹಾಗೊಂದು ವೇಳೆ ದೂರ ಉಳಿದರೆ ಬಿಜೆಪಿ ಹೈಕಮಾಂಡ್ ಯಾವ ಕ್ರಮ ಕೈಗೊಳ್ಳಲಿದೆ ಎಂಬಿತ್ಯಾದಿ ಕುತೂಹಲ ಮೂಡಿವೆ.
ಅಮಾನತು ಶಿಕ್ಷೆ? ಶೋಕಾಸ್ ನೋಟಿಸ್ಗೆ ಉತ್ತರ ನೀಡದಿರುವುದನ್ನು ಸಮಿತಿ ಗಂಭೀರವಾಗಿ ಪರಿಗಣಿಸಿ ಕನಿಷ್ಠ 3 ತಿಂಗಳಿಂದ ಗರಿಷ್ಠ 6 ವರ್ಷದವರೆಗೆ ಅಮಾನತು ಪಡಿಸುವುದು, ಒಂದು ಚುನಾವಣೆವರೆಗೆ ಅಮಾನತು ಶಿಕ್ಷೆ ವಿಧಿಸುವ ಆಯ್ಕೆಯಿರುತ್ತದೆ. ಉಚ್ಚಾಟನೆ ಮಾಡಿದರೆ ಅವರು ಸಂಪೂರ್ಣ ಸ್ವತಂತ್ರರಾಗಲಿರುವ ಹಿನ್ನೆಲೆಯಲ್ಲಿ ಅಮಾನತು ಶಿಕ್ಷೆ ನೀಡುವ ಸಂಭವ ಹೆಚ್ಚು ಎನ್ನಲಾಗಿದೆ.
ಯತ್ನಾಳ್ ವಿರುದ್ಧ ಕಠಿಣ ಕ್ರಮ ಜರುಗಿಸಿದರೆ ಪಕ್ಷಕ್ಕೆ ಸೆಡ್ಡು ಹೊಡೆದು ನಿರಂತರವಾಗಿ ಶಿಸ್ತು ಉಲ್ಲಂಘಿಸುತ್ತಿರುವ ಶಾಸಕರಾದ ಎಸ್.ಟಿ. ಸೋಮಶೇಖರ್, ಶಿವರಾಮ ಹೆಬ್ಬಾರ್ ವಿರುದ್ಧ ಯಾವ ಕ್ರಮವಾಗಲಿದೆ ಎಂಬುದೂ ಮುನ್ನೆಲೆಗೆ ಬರಲಿದೆ. ಒಟ್ಟಾರೆ ನೋಟಿಸ್ಗೆ ಯತ್ನಾಳ್ ಉತ್ತರ ನೀಡುವರೇ, ಕಾಲಾವಕಾಶ ಕೋರುವರೇ ಅಥವಾ ಉತ್ತರ ನೀಡದೆ ಸುಮ್ಮನಾಗುವರೇ ಎಂಬುದರ ಮೇಲೆ ಅವರ ವಿರುದ್ಧದ ಕ್ರಮದ ಬಗ್ಗೆ ನಿರ್ಧಾರವಾಗಲಿದೆ.
