3ನೇ ಪಂದ್ಯದಲ್ಲೂ ಆಂಗ್ಲರಿಗೆ ಹೀನಾಯ ಸೋಲು.. ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಮಹತ್ವದ ಸರಣಿ ಗೆದ್ದ ಭಾರತ!

ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ನಡೆದ ಟಿ20 ಸರಣಿಯಲ್ಲಿ 4-1ರಲ್ಲಿ ಗೆದ್ದು ಬೀಗಿದ್ದ ಟೀಮ್​ ಇಂಡಿಯಾ, ಇದೀಗ ಏಕದಿನ ಸರಣಿಯನ್ನೂ ಕ್ಲೀನ್​ ಸ್ವೀಪ್​ ಮಾಡಿಕೊಂಡಿದೆ. ಈ ಮೂಲಕ ಫೆ.19ರಿಂದ ಆರಂಭವಾಗುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಮಹತ್ವದ ಸರಣಿ ಗೆದ್ದು ಭಾರತ ತನ್ನ ಪ್ರಾಬಲ್ಯ ತೋರಿಸಿದೆ.

ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲೂ ಅಧಿಪತ್ಯ ಸಾಧಿಸಿರೋ ಭಾರತ ಮೂರು ಏಕದಿನ ಪಂದ್ಯಗಳಲ್ಲೂ ಗೆದ್ದು ಬೀಗಿದ್ದು, ನಿನ್ನೆ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂ​ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 356 ರನ್ ಗಳಿಸಿ ಆಂಗ್ಲರಿಗೆ ದೊಡ್ಡ ಟಾರ್ಗೆಟ್​ ನೀಡಿತ್ತು. ಭಾರತ ನೀಡಿದ 357 ರನ್​ಗಳ ಬೃಹತ್​ ಗುರಿ ಬೆನ್ನಟ್ಟಿದ ಇಂಗ್ಲೆಂಡ್​, 34.2 ಓವರ್​ಗಳಲ್ಲಿ 214 ರನ್​ಗಳಿಗೆ ಆಲೌಟ್ ಆಗಿದೆ.

ನಾಗ್ಪುರ ಮತ್ತು ಕಟಕ್ ಏಕದಿನ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವನ್ನು ಏಕಪಕ್ಷೀಯವಾಗಿ ಸೋಲಿಸಿದ್ದ ಭಾರತ ಮೂರನೇ ಪಂದ್ಯದಲ್ಲೂ ಗೆದ್ದು ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವುದರ ಜೊತೆಗೆ 14 ವರ್ಷಗಳ ನಂತರ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ ಸಾಧನೆಯನ್ನು ಮಾಡಿದೆ.

ಗಿಲ್, ಕೊಹ್ಲಿ, ಅಯ್ಯರ್ ಮ್ಯಾಜಿಕ್ : ಟೀಂ ಇಂಡಿಯಾದ ಈ ಬೃಹತ್ ಗೆಲುವಿನಲ್ಲಿ ಉಪನಾಯಕ ಶುಭ್​ಮನ್ ಗಿಲ್ ಅವರ ಪಾತ್ರ ಪ್ರಮುಖವಾಗಿತ್ತು. ಸ್ಫೋಟಕ ಬ್ಯಾಟಿಂಗ್ ಮಾಡಿದ ಗಿಲ್, ತಮ್ಮ ಏಕದಿನ ವೃತ್ತಿಜೀವನದ 7ನೇ ಶತಕವನ್ನು (112) ದಾಖಲಿಸಿದ್ದಾರೆ. ಗಿಲ್ ಹೊರತುಪಡಿಸಿ, ಶ್ರೇಯಸ್ ಅಯ್ಯರ್ 78 ರನ್‌ಗಳ ಇನ್ನಿಂಗ್ಸ್ ಆಡಿದರೆ, ವಿರಾಟ್ ಕೊಹ್ಲಿ ಕೂಡ 52 ರನ್​ಗಳ ಕಾಣಿಕೆ ನೀಡಿದರು. ರಾಹುಲ್ ಕೂಡ 40 ರನ್ ಬಾರಿಸಿ ತಂಡವನ್ನು ಬೃಹತ್ ಮೊತ್ತಕ್ಕೆ ಕೊಂಡೊಯ್ದರು.

ಆ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್‌ ಸ್ಫೋಟಕ ಆರಂಭ ಪಡೆಯಿತ್ತಾದರೂ, ಆ ಬಳಿಕ ಭಾರತದ ಬೌಲರ್‌ಗಳು ಅವರ ವೇಗಕ್ಕೆ ಕಡಿವಾಣ ಹಾಕಿದರು. ವೇಗಿಗಳಾದ ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ, ಹಾರ್ದಿಕ್ ಪಾಂಡ್ಯ ಮತ್ತು ಅಕ್ಷರ್ ಪಟೇಲ್ ತಲಾ 2 ವಿಕೆಟ್ ಪಡೆದರೆ, ವಾಷಿಂಗ್ಟನ್ ಸುಂದರ್ ಮತ್ತು ಕುಲ್ದೀಪ್ ಯಾದವ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.

Btv Kannada
Author: Btv Kannada

Read More